ಗದ್ದುಗೆ ಏರಲು ಕಾಂಗ್ರೆಸ್- ಬಿಜೆಪಿ ತಂತ್ರ; ನಿರ್ಣಾಯಕರಾದ ಪಕ್ಷೇತರ- ಜೆಡಿಎಸ್ ಸದಸ್ಯರು
ಕಾರವಾರ, ಅಕ್ಟೋಬರ್ 13: ಎರಡು ವರ್ಷಗಳ ನಂತರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಅತಂತ್ರ ಸ್ಥಿತಿಗೆ ತಲುಪಿದ್ದ ಕಾರವಾರ ನಗರಸಭೆಯ ಆಡಳಿತದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಯತ್ನಕ್ಕೆ ಇಳಿದಿದ್ದು, ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಗೆ ನಗರಸಭೆ ಆಡಳಿತ ಎನ್ನುವುದು ಪ್ರತಿಷ್ಠೆಯ ಕ್ಷೇತ್ರವಾಗಿದೆ.
31 ಸದಸ್ಯ ಬಲದ ಕಾರವಾರ ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ ಪಡೆದಿದ್ದರೆ, ಬಿಜೆಪಿ ಸಹ 11 ಸ್ಥಾನವನ್ನು ಪಡೆದಿತ್ತು. ಇನ್ನು ಜೆಡಿಎಸ್ 4 ಸ್ಥಾನದಲ್ಲಿ ಗೆದ್ದಿದ್ದರೆ, ಪಕ್ಷೇತರರು 5 ಸ್ಥಾನದಲ್ಲಿ ಗೆಲುವು ಪಡೆದಿದ್ದರು. ಕಾಂಗ್ರೆಸ್ ಅಥವಾ ಬಿಜೆಪಿ ಆಡಳಿತಕ್ಕೆ ಏರಲು ಜೆಡಿಎಸ್ ಅಥವಾ ಪಕ್ಷೇತರ ಸದಸ್ಯರ ಬೆಂಬಲ ಅಗತ್ಯವಿದ್ದ ಹಿನ್ನೆಲೆಯಲ್ಲಿ ಇಬ್ಬರು 'ಕಿಂಗ್ ಮೇಕರ್' ಆಗಿದ್ದರು. ಸದ್ಯ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಕೆಲ ಸದಸ್ಯರು ಈ ಬಾರಿ ಹೇಗಾದರೂ ಮಾಡಿ ಅಧ್ಯಕ್ಷ ಸ್ಥಾನವನ್ನು ಏರಲೇ ಬೇಕೆಂದು ಪ್ರಯತ್ನಕ್ಕೆ ಇಳಿದಿದ್ದಾರೆ. ಮುಂದೆ ಓದಿ...
ಅಧಿಕಾರ ಹಿಡಿಯಲು ರೂಪಾಲಿ ಕಾರ್ಯತಂತ್ರ
ಇತ್ತ ನಗರಸಭೆಯ ಆಡಳಿತವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ರೂಪಾಲಿ ನಾಯ್ಕ, ಇಷ್ಟು ದಿನ ಬೆಂಗಳೂರಿನಲ್ಲಿದ್ದವರು ಈಗ ಕಾರವಾರಕ್ಕೆ ಆಗಮಿಸಿದ್ದಾರೆ. ಅಧಿಕಾರ ಹಿಡಿಯಲು ಕಾರ್ಯತಂತ್ರಕ್ಕೆ ಇಳಿದಿದ್ದು, ಇದಕ್ಕೆ ಪರ್ಯಾಯವಾಗಿ ಮಾಜಿ ಶಾಸಕ ಸತೀಶ್ ಸೈಲ್ ಸಹ ನಿರಂತರ ಪ್ರಯತ್ನಕ್ಕೆ ಇಳಿದಿದ್ದಾರೆ.
ವರ್ಗಾವಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಆರೋಪ; ಶಾಸಕಿ- ಸಚಿವರ ನಡುವೆ ಮುಸುಕಿನ ಗುದ್ದಾಟ?
ನಗರಸಭೆಯಲ್ಲಿ ಬಿಜೆಪಿ 11 ಸದಸ್ಯ ಬಲವಿದ್ದು, ಪಕ್ಷೇತರ ಸದಸ್ಯರಾದ ಪ್ರಕಾಶ್ ನಾಯ್ಕ ಹಾಗೂ ಸುಜಾತ ಥಾಮ್ಸೆ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಸದಸ್ಯ ಬಲ 13ಕ್ಕೆ ಏರಿದಂತಾಗಿದೆ. ಇನ್ನು ಶಾಸಕ, ಸಂಸದರ ಮತ ಸೇರಿ ಒಟ್ಟು 15 ಮತಗಳಾಗಲಿವೆ. ಅಧಿಕಾರ ಹಿಡಿಯಲು 16 ಮತದ ಅಗತ್ಯವಿರುವ ಹಿನ್ನೆಲೆಯಲ್ಲಿ ಉಳಿದಿರುವ ಪಕ್ಷೇತರ ಮೂವರು ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಪ್ರಯತ್ನ ನಡೆಸಿದೆ. ಈ ನಡುವೆ ಜೆಡಿಎಸ್ ನಾಲ್ವರ ಸದಸ್ಯರ ಬೆಂಬಲವನ್ನು ಸಹ ಕೇಳಿದ್ದಾರೆನ್ನಲಾಗಿದೆ.
ಮಾಜಿ ಶಾಸಕ ಸತೀಶ್ ಸೈಲ್ ಪ್ರಯತ್ನ
ಇನ್ನು ಕಾಂಗ್ರೆಸ್ 11 ಸದಸ್ಯ ಬಲವಿದ್ದು, ಪಕ್ಷೇತರ ಸದಸ್ಯ ಪ್ರೇಮಾನಂದ ಗುನಗ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ 12 ಸ್ಥಾನಕ್ಕೆ ಏರಿದೆ. ಉಳಿದ ಇಬ್ಬರು ಪಕ್ಷೇತರ ಹಾಗೂ ನಾಲ್ವರು ಜೆಡಿಎಸ್ ಸದಸ್ಯರ ಬೆಂಬಲದಿಂದ ಅಧಿಕಾರಕ್ಕೆ ಏರಲು ನಿರಂತರ ಪ್ರಯತ್ನ ಕೂಡ ನಡೆಸಿದ್ದಾರೆ. ಕಾಂಗ್ರೆಸ್ ನಿಂದ ಮೋಹನ್ ನಾಯ್ಕ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಬಯಕೆ ಮಾಜಿ ಶಾಸಕ ಸತೀಶ್ ಸೈಲ್ ಅವರಿಗಿದ್ದು, ಹಿರಿಯ ಸದಸ್ಯ ಸಂದೀಪ್ ತಳೇಕರ್ ಸಹ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ.
ಉಪಾಧ್ಯಕ್ಷ ಸ್ಥಾನ ನಮಗೆ ಕೊಡಿ: ಅಸ್ನೋಟಿಕರ್
ನಗರಸಭೆಯಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ನಮಗೆ ಉಪಾಧ್ಯಕ್ಷ ಸ್ಥಾನ ಕೊಟ್ಟರೆ ನಾವು ಅವರಿಗೆ ಬೆಂಬಲ ಕೊಡುತ್ತೇವೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ನಗರಸಭೆ ಆಡಳಿತ ಸಂಬಂಧ "ಒನ್ ಇಂಡಿಯಾ ಕನ್ನಡ"ದ ಜೊತೆ ಮಾತನಾಡಿದ ಅವರು, ನನಗೆ ಸತೀಶ್ ಸೈಲ್ ಹಾಗೂ ರೂಪಾಲಿ ನಾಯ್ಕ ಇಬ್ಬರೂ ದ್ವೇಷಿಗಳಲ್ಲ. ಇಬ್ಬರ ಮೇಲೂ ನನಗೆ ಪ್ರೀತಿ ಇದೆ. ಇಬ್ಬರಲ್ಲಿ ಯಾರೇ ನನ್ನ ಬೆಂಬಲ ಕೇಳಿದರೂ ಕೊಡಲು ಸಿದ್ಧ. ಆದರೆ ನಾವು ಬೆಂಬಲ ಕೊಟ್ಟರೆ ಉಪಾಧ್ಯಕ್ಷ ಸ್ಥಾನ ಮಾತ್ರ ನಮಗೆ ಕೊಡಬೇಕು ಎಂದು ಮನವಿ ಮಾಡಿಕೊಳ್ಳಲಿದ್ದು, ಬಹುತೇಕ ನಗರಸಭೆ ಆಡಳಿತದಲ್ಲಿ ಜೆಡಿಎಸ್ ಸಹ ಇರುವುದು ಖಚಿತವಾಗಿದೆ ಎಂದಿದ್ದಾರೆ.
ಹಣ ಬಲದ ಆಟಕ್ಕೆ ಹೆಚ್ಚಿನ ಆದ್ಯತೆ
ಕಾರವಾರ ನಗರಸಭೆ ಆಡಳಿತಕ್ಕೆ ಏರಲು ಹಣ ಬಲದ ಆಟಕ್ಕೆ ಹೆಚ್ಚಿನ ಆದ್ಯತೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸದ್ಯ ಬಿಜೆಪಿ ಆಡಳಿತಕ್ಕೆ ಏರಿದರೆ ಹಿರಿಯ ಸದಸ್ಯ ಡಾ.ನಿತಿನ್ ಪಿಕಳೆ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ, ಇದರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಏರಲು ಕೆಲವರು ಹಣ ಖರ್ಚು ಮಾಡಲು ಸಿದ್ಧತೆ ನಡೆಸಿದ್ದಾರೆನ್ನಲಾಗಿದೆ.
Recommended Video