"ರಾಮ ಮಂದಿರ ಸಾಕಾರಗೊಳ್ಳುತ್ತಿದೆ, ಮುಂದೆ ಆಗಬೇಕಿರುವುದು ರಾಮ ರಾಜ್ಯ''
ಶಿರಸಿ, ಆಗಸ್ಟ್ 05: ಹಲವು ದಶಕಗಳಿಂದ ರೂಪುಗೊಂಡಿದ್ದ ರಾಮ ಮಂದಿರದ ನಕ್ಷೆ ಅಯೋಧ್ಯೆಯಲ್ಲಿ ಸಾಕಾರಗೊಳ್ಳಲಿದೆ. ಮುಂದಿನ ನಮ್ಮ ಗುರಿ ರಾಮರಾಜ್ಯ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
Recommended Video
ರಾಮ ಮಂದಿರ ಸಾಕಾರಗೊಳ್ಳಲಿದ್ದು, ಮುಂದೆ ಆಗಬೇಕಿರುವುದು ರಾಮ ರಾಜ್ಯ. ಇಲ್ಲಿನ ಪ್ರಜೆಗಳಿಗೆ ನ್ಯಾಯ, ಸುವ್ಯವಸ್ಥೆ ಕಲ್ಪಿಸುವ, ಶಾಂತಿಯುತ ಬದುಕನ್ನು ನಡೆಸಲು ಅವಕಾಶ ಮಾಡಿಕೊಡುವ ಸುಭದ್ರ ಹಾಗೂ ಸುವ್ಯವಸ್ಥಿತ ಆಡಳಿತ ಕೊಡಬೇಕಾದ ಅನಿವಾರ್ಯತೆ ಇದೆ. ರಾಮ ರಾಜ್ಯದ ಸಾಕಾರದತ್ತ ಹೆಜ್ಜೆ ಇಡೋಣ ಎಂದವರು ಕರೆ ನೀಡಿದ್ದಾರೆ.
ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದ ಉಡುಪಿ, ಪೇಜಾವರ ಶ್ರೀ
ಇಂದಿನ ಭಾರತೀಯ ಜನತಾ ಪಾರ್ಟಿಯು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಹೋರಾಟಕ್ಕೆ ತನ್ನ ಇಚ್ಛಾ ಶಕ್ತಿಯೊಂದಿಗೆ ಅಂತಿಮ ಗೆರೆ ಎಳೆದಿದೆ. ನ್ಯಾಯಾಲಯದ ಮೇಲಿಟ್ಟಿದ್ದ ಭರವಸೆ ಸಾಕಾರಗೊಂಡಿದೆ. ಪ್ರಬಲ ಇಚ್ಛಾಶಕ್ತಿಯೊಂದಿಗೆ ಗಟ್ಟಿಯಾಗಿ ನಿಂತಿರುವ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ರಾಜ್ಯ ಸರ್ಕಾರ ಇದಕ್ಕಾಗಿ ಸಂಕಲ್ಪ ಬದ್ಧವಾಗಿದೆ. ಇದಕ್ಕಾಗಿ ಎಲ್ಲಾ ಕೈಂಕರ್ಯಗಳು ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪರಂಪರೆಯ ಆದರ್ಶ ಬಿಂದು ಶ್ರೀರಾಮ
ಶ್ರೀರಾಮ ಭಾರತ ದೇಶದ ಆತ್ಮ. ಇಲ್ಲಿಯ ನಾಗರಿಕತೆ, ಸಭ್ಯತೆಯ ಪ್ರತೀಕ. ಇಲ್ಲಿನ ದೊರೆ ಹಾಗೂ ಈ ನಾಡಿನ ಅಧಿದೇವತೆ. ಈ ದೇಶದ ಜನಮನದ ಒಡೆಯ ಆತ. ಇಲ್ಲಿಯ ಸಂಪ್ರದಾಯ, ಸಂಸ್ಕೃತಿ, ಪರಂಪರೆಯ ಆದರ್ಶ ಬಿಂದು ಶ್ರೀರಾಮ. ಆತ ಹುಟ್ಟಿದ್ದ ಜಾಗದಲ್ಲಿ ರಾಜಾ ವಿಕ್ರಮಾದಿತ್ಯ ಕಟ್ಟಿಸಿದ್ದ ಭವ್ಯ ಮಂದಿರವಿತ್ತು.
ಅದೆಷ್ಟೋ ಸಂಘರ್ಷಗಳು ನಡೆದು ಹೋದವು
ಬಾಬರ್ ನ ದಂಡಯಾತ್ರೆಯ ವೇಳೆ ಅದು ಸಂಪೂರ್ಣವಾಗಿ ದ್ವಂಸವಾಯಿತು. ನಂತರದ ದಿನಗಳಲ್ಲಿ ಅಲ್ಲಿ ಒಂದು ಮಸೀದಿ ಕಟ್ಟಿದರು ಹಾಗೂ ಅದಕ್ಕೆ ಬಾಬ್ರಿ ಮಸೀದಿ ಅಂತಲೇ ಹೆಸರು ಬಂತು. ಅಷ್ಟು ಸುಲಭದಲ್ಲಿ ಈ ಮಣ್ಣು ಆ ಜಾಗದ ಒಡೆತನ ಬಿಟ್ಟುಕೊಟ್ಟಿರಲಿಲ್ಲ. ಅಲ್ಲಿನಿಂದ ಇಲ್ಲಿನ ತನಕ ಅದೆಷ್ಟೋ ಸಂಘರ್ಷಗಳು ನಡೆದು ಹೋದವು. ನಿರಂತರವಾಗಿ ಐದು ಶತಮಾನಗಳಿಂದ ನಡೆಯುತ್ತಿದ್ದ ಸಂಘರ್ಷದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ ಎಂದು ಹೇಳಿದ್ದಾರೆ.
ಲಕ್ಷಾಂತರ ಜನ ಪ್ರಾಣ ನೀಡಬೇಕಾಯಿತು
ಸ್ವಾತಂತ್ರ್ಯ ಬಂತು. ಆದರೆ, ಈ ನಾಡಿನ ಬಗ್ಗೆ ಕಲ್ಪನೆಯೇ ಇಲ್ಲದ, ಇಲ್ಲಿನ ಸಂಸ್ಕೃತಿ, ಸಭ್ಯತೆಯ ಬಗ್ಗೆ ಅಭಿಮಾನವೇ ಇಲ್ಲದ ನಾಯಕತ್ವ ಈ ದೇಶದಲ್ಲಿ ಆಡಳಿತಕ್ಕೆ ಬಂದಿದ್ದು ನಮ್ಮ ದುರ್ದೈವ. ರಾಮ ಮಂದಿರ ಕಟ್ಟಬೇಕೆನ್ನುವ ಲಕ್ಷ ಲಕ್ಷ ಜನರ ಕನಸು ಕನಸಾಗಿಯೇ ಉಳಿಯಿತು. ದುರ್ದೈವ ಎಂದರೆ, ನಾಡಿನ ಅಧಿದೇವತೆ, ಆತ ಹುಟ್ಟಿರುವ ಜಾಗದಲ್ಲಿ ಮಂದಿರ ಕಟ್ಟಲು ಈ ಮಣ್ಣಿನ ಜನ ಹೋರಾಟ ಮಾಡಬೇಕಾಯಿತು. ಸಂಘರ್ಷ ಮಾಡಬೇಕಾಯಿತು, ಲಕ್ಷಾಂತರ ಜನ ಪ್ರಾಣ ನೀಡಬೇಕಾಯಿತು ಎಂದು ತಿಳಿಸಿದರು.
ಎಲ್ಲರನ್ನೂ ಕೃತಜ್ಞತೆಯಿಂದ ನೆನಪಿಸಿಕೊಳ್ಳೋಣ
ನಿರಂತರವಾಗಿ ಪ್ರಕರಣ ನಡೆಸಿ, ಸತ್ಯಾಸತ್ಯತೆ ತೂಗಿ ನೋಡಿ, ಆ ಜಾಗದಲ್ಲಿ ರಾಮ ಮಂದಿರ ಇತ್ತು. ಆ ಜಾಗ ಹಿಂದುಗಳ ಒಡೆತನಕ್ಕೆ ಸೇರಿದ್ದು. ಅದು ಶ್ರೀರಾಮನ ಹುಟ್ಟಿದ ಜಾಗ ಎಂದು ಅಧಿಕೃತವಾಗಿ ಕೋರ್ಟ್ ಆದೇಶ ನೀಡುವವರೆಗೂ ಕಳೆದ ಐದು ಶತಮಾನಗಳ ಹೋರಾಟ ನಿಂತಿರಲಿಲ್ಲ. ಇಂದು ಈ ಹೋರಾಟಕ್ಕೆ ಕೊನೆ ಬಿದ್ದಿದೆ ಎಂದಿದ್ದಾರೆ. ರಾಮ ಮಂದಿರದ ಈ ಹೋರಾಟದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಕೃತಜ್ಞತೆಯಿಂದ ನೆನಪಿಸಿಕೊಳ್ಳೋಣ. ಬಲಿದಾನಗೈದ ಎಲ್ಲಾ ವೀರರಿಗೆ ನಮನ ಸಲ್ಲಿಸೋಣ ಎಂದು ಸಂಸದ ಅನಂತಕುಮಾರ್ ಹೆಗಡೆ ಕರೆ ನೀಡಿದ್ದಾರೆ.