ಶಿರಸಿ ಕುಮಟಾ ರಸ್ತೆ ಮೇಲ್ದರ್ಜೆಗೆ; 10 ಸಾವಿರಕ್ಕೂ ಹೆಚ್ಚು ಮರಗಳು ‘ನೆಲಕ್ಕೆ’
ಶಿರಸಿ, ಅಕ್ಟೋಬರ್ 13: ಉದ್ದೇಶಿತ ಶಿರಸಿ- ಕುಮಟಾ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ಕಾರ್ಯರೂಪಕ್ಕೆ ಬಂದ ಹಿನ್ನೆಲೆಯಲ್ಲಿ ರಸ್ತೆ ಅಕ್ಕಪಕ್ಕದ ಮರಗಳನ್ನು ತೆಗೆಯಲು ಕೇಂದ್ರ ಪರಿಸರ ಸಚಿವಾಲಯದಿಂದ ಅನುಮತಿ ದೊರೆತಿದ್ದು, ಶಿರಸಿ ನಿಲೇಕಣಿ ಕ್ರಾಸ್ನಿಂದ ದೇವಿಮನೆ ಘಟ್ಟದವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚಿನ ಗಿಡ ಮರಗಳು ಧರಾಶಾಯಿಯಾಗಲಿವೆ.
ಶಿರಸಿ ವಲಯಕ್ಕೆ ಬರುವ ನಿಲೇಕಣಿ ಕ್ರಾಸ್ನಿಂದ ಹನುಮಂತಿಯವರೆಗೆ ಸುಮಾರು 5700ಕ್ಕೂ ಹೆಚ್ಚಿನ ಗಿಡ ಮರಗಳು ಹಾಗು ಜಾನ್ಮನೆ ವ್ಯಾಪ್ತಿಗೆ ಬರುವ ಹನುಮಂತಿಯಿಂದ ದೇವಿಮನೆ ಘಟ್ಟದವರೆಗೆ ಸುಮಾರು 4 ಸಾವಿರಕ್ಕೂ ಹೆಚ್ಚಿನ ಗಿಡಮರಗಳನ್ನು ತೆಗೆಯಲು ಈಗಾಗಲೇ ಅರಣ್ಯ ಇಲಾಖೆಯಿಂದ ಗುರುತಿಸಲಾಗಿದ್ದು, ಈ ಕಾರ್ಯಾಚರಣೆಗೆ ಅತ್ತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚಾಲನೆ ಪಡೆದಂತೆ ಇತ್ತ ಗಿಡಮರ ತೆಗೆಯುವ ಕೆಲಸಕ್ಕೂ ಚಾಲನೆ ದೊರೆಯಲಿದೆ ಎನ್ನುವ ಮಾತುಗಳು ಕೇಳಿ ಬರತೊಡಗಿದೆ.
36 ಕಿ.ಮೀ ರಸ್ತೆ ವ್ಯಾಪ್ತಿಯ ಗಿಡಮರಗಳ ತೆರವು
ಶಿರಸಿ ನಿಲೇಕಣಿ ಕ್ರಾಸಿನಿಂದ ದೇವಿಮನೆ ಘಟ್ಟದವರೆಗಿನ ಸುಮಾರು 36 ಕಿ.ಮೀ. ರಸ್ತೆ ಅಕ್ಕಪಕ್ಕದ ಗಿಡಮರಗಳನ್ನು ತೆಗೆಯಲಾಗುತ್ತದೆ. 30 ಸೆಂ.ಮೀ.ನಿಂದ ಹಿಡಿದು 60 ಸೆಂ.ಮೀ., 61- 90 ಸೆಂ.ಮೀ., 91- 120 ಸೆಂ.ಮೀ., 121- 150 ಸೆಂ.ಮೀ. ಹಾಗೂ 150 ಸೆಂ.ಮೀ. ಸುತ್ತಳತೆಯ ಗಿಡಮರಗಳನ್ನು ತೆಗೆಯಲಾಗುತ್ತದೆ.
ಶಿವಮೊಗ್ಗ: ಮಲೆನಾಡಿನಲ್ಲಿ ವಿಶಿಷ್ಟವಾದ ಪ್ರಕೃತಿ ವಂದನಾ ಕಾರ್ಯಕ್ರಮ
ನೂರಕ್ಕೂ ಹೆಚ್ಚಿನ ಜಾತಿಯ ಗಿಡಮರಗಳು ನಾಶ?
ತೇಗ, ಮತ್ತಿ, ಹೊನಲು, ಹೊನ್ನೆ, ಅರಳಿ, ಹಾಲ, ಕೆಸಳಾ, ಕೆಂದಾಳ, ಮಾವು, ಗೇರು, ಹಲಸು, ಕಾಸರಕಾ, ನಂದಿ, ನೆಲ್ಲಿ, ಕವಲು, ಕಾಡಮಟೆ, ಜಂಗ್ಲಿ, ದೂಪಾ, ಚಂದಕಲಾ, ಉಪ್ಪಾಗೆ, ಹುಣಸೆ, ಹೊಂಗೆ, ಹಲಗಾ ಸೇರಿದಂತೆ ನೂರಕ್ಕೂ ಹೆಚ್ಚಿನ ಜಾತಿಯ ಗಿಡಮರಗಳು ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿಯ ಮೇಲ್ದರ್ಜೆಗೆ ಏರಿಸುವ ಕಾಮಗಾರಿಯಲ್ಲಿ ನೆಲಕ್ಕುರುಳಲಿವೆ.
18 ತಿಂಗಳು ಶಿರಸಿ- ಕುಮಟಾ ರಸ್ತೆ ಬಂದ್
ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಈಗಾಗಲೇ ಕಾಮಗಾರಿ ಆರಂಭಿಸುವ ಉದ್ದೇಶದಿಂದ ಅ.12ರಿಂದ ಮುಂದಿನ 18 ತಿಂಗಳುಗಳ ಕಾಲ ಶಿರಸಿ- ಕುಮಟಾ ರಸ್ತೆ ಬಂದ್ ಮಾಡಲು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಕಾಮಗಾರಿ ಕೂಡ ಅತೀ ಶೀಘ್ರದಲ್ಲೇ ಆರಂಭವಾಗುವ ಸೂಚನೆ ದೊರೆತಿದೆ.
ಉಡುಪಿಯಲ್ಲಿ ಪರಿಸರ ದಿನದಂದೇ ಮರಗಳ ಹನನ
Recommended Video
"ಬೇರೆ ಗಿಡ ನೆಡುವ ಉದ್ದೇಶವಿಲ್ಲ"
ಶಿರಸಿ- ಕುಮಟಾ ರಸ್ತೆ ವಿಸ್ತರಣೆಯಿಂದ ಶಿರಸಿ ನಿಲೇಕಣಿ ಕ್ರಾಸ್ನಿಂದ ದೇವಿಮನೆ ಘಟ್ಟದವರೆಗೆ ರಸ್ತೆ ಅಕ್ಕಪಕ್ಕ ಬೆಳೆದು ನಿಂತಿರುವ ಗಿಡಮರಗಳನ್ನು ತೆಗೆಯಬೇಕಾಗುತ್ತದೆ. ಇದಕ್ಕೆ ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದ್ದರಿಂದ ಗಿಡಮರಗಳಿಗೆ ಮಾರ್ಕ್ ಮಾಡಲಾಗಿದೆ. ಇನ್ನೇನು ಕಟಿಂಗ್ ಶುರುವಾಗಬಹುದು. ಇದರ ಬದಲಾಗಿ ಬೇರೆ ಗಿಡ ನೆಡುವ ಉದ್ದೇಶವಿಲ್ಲ. ಗಿಡ ನೆಡುವ ಕಾರ್ಯ ಇಲಾಖೆಯಲ್ಲಿ ನಿರಂತರವಾಗಿ ನಡೆದಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ ಡಿಎಫ್ ಒ ಎಸ್.ಜಿ.ಹೆಗಡೆ.