ಕರ್ನಾಟಕದಲ್ಲಿ ಹೆಚ್ಚು ಸಕ್ಕರೆ ಉತ್ಪಾದನೆ ದೇಶಕ್ಕೆ ಸಮಸ್ಯೆ: ಸಚಿವ ಗಡ್ಕರಿ
ಕಾರವಾರ, ಡಿಸೆಂಬರ್ 20: ಕರ್ನಾಟದಲ್ಲಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುತ್ತಿರುವುದು ದೇಶಕ್ಕೆ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಅಕ್ಕಿ, ಜೋಳ ಇತರ ಆಹಾರ ಧಾನ್ಯಗಳನ್ನು ಎಥೆನಾಲ್ ಆಗಿ ಪರಿವರ್ತಿಸಲು ಅನುಮತಿ ನೀಡಿದ್ದು, ಕರ್ನಾಟಕ ಇದರ ಉತ್ಪಾದನೆಗೆ ಮುಂದಡಿ ಇಡಬಹುದು. ಎಥೆನಾಲ್ ಮಾಲಿನ್ಯ ರಹಿತ, ಕಡಿಮೆ ದರದಲ್ಲಿ ಸಿಗುವಂಥದ್ದಾಗುದ್ದು, ಇದರ ಉತ್ಪಾದನೆಯಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಶನಿವಾರ ರಾಜ್ಯದ 33 ಕಾಮಗಾರಿಗಳಿಗೆ ಚಾಲನೆ ಹಾಗೂ ಲೋಕಾರ್ಪಣೆಗೊಳಿಸುವ ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೂಡ ಹೌದು. ನಾನೊಬ್ಬ ರೈತ ಕೂಡ. ನಾನು ದೇಶದಲ್ಲಿ ಎಥೆನಾಲ್ ಅನ್ನು ಉತ್ಪಾದಿಸಲು ಆಸಕ್ತಿ ತೋರಿರುವವನಲ್ಲಿ ಮೊದಲಿಗನೆಂದರು.
10,904 ಕೋಟಿ ರೂ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ನಿತಿನ್ ಗಡ್ಕರಿ
ನಾವು ಹೊಸ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಕಬ್ಬಿನರಸದಿಂದ, ಮೊಲಾಸಿಸ್ ಹಾಗೂ ಹೆವಿ ಮೊಲಾಸಿಸ್ನಿಂದ ಎಥೆನಾಲ್ ಉತ್ಪಾದಿಸಲು ಈಗಾಗಲೇ ಸರ್ಕಾರ ಕೂಡ ಅನುಮತಿಸಿದೆ. ಎಥೆನಾಲ್ ಕಾರ್ಖಾನೆ ತೆರೆದು ಹೊಸ ಆವಿಷ್ಕಾರ ಮಾಡಬಹುದಾಗಿದೆ. ಕಬ್ಬಿನ ರಸದಿಂದ ಸಕ್ಕರೆ ಉತ್ಪಾದಿಸದೇ ಬಿಟ್ಟರೆ ನೇರವಾಗಿ ಎಥೆನಾಲ್ ಉತ್ಪಾದಿಸಬಹುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈಗಾಗಲೇ ನಾವು 8 ಲಕ್ಷ ಕೋಟಿ ಲೀಟರ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಈಗಿರುವ ಎಥೆನಾಲ್ ಆರ್ಥಿಕತೆಯು 20,000 ಕೋಟಿ ಇದೆ. ನಾವು ಶೇ.10 ರಷ್ಟು ಎಥೆನಾಲ್ ಅನ್ನು ಪೆಟ್ರೋಲ್ನೊಂದಿಗೆ ಬಳಸಿದರೆ 1,600 ಕೋಟಿ ಲೀಟರ್ ಎಥೆನಾಲ್ ಅವಶ್ಯಕತೆ ಬೀಳಲಿದೆ.
400 ಕೋಟಿ ಲೀಟರ್ ಎಥೆನಾಲ್ ಮಾತ್ರ ನಮ್ಮಲ್ಲಿ ಸಧ್ಯ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಪ್ರತಿ ಕೆ.ಜಿಗೆ 22 ರೂ. ಇದೆ. ಭಾರತ ಹಾಗೂ ನಾವು ಪ್ರತಿ ಕೆ.ಜಿಗೆ 34 ರೂ. ಅನ್ನು ಕಬ್ಬು ಬೆಳೆಗಾರರಿಗೆ ಕೊಡುತ್ತಿದ್ದೇವೆ. ಇದು ಭಾರೀ ಕಷ್ಟದಾಯಕ. ಕಬ್ಬಿನ ಗಿರಣಿಗಳು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತರು ಕಬ್ಬಿನಿಂದ ಹೆಚ್ಚೇನು ಸಂಪಾದಿಸುತ್ತಿಲ್ಲ. ಇದು ಸಕ್ಕರೆ ಉತ್ಪಾದನೆಯನ್ನು ಕಡಿಮೆ ಮಾಡುವ ಸಮಯ ಎಂದರು.
Recommended Video
ನಮ್ಮಲ್ಲಿ ಅಕ್ಕಿ ಉತ್ಪಾದನೆ 284 ಲಕ್ಷ ಟನ್ ಮೀರುತ್ತಿದೆ. ನಾವು ಇಡೀ ಜಗತ್ತಿಗೆ ಅಕ್ಕಿಯನ್ನು ಪೂರೈಸಬಹುದು. ನಮ್ಮಲ್ಲಿ ದಾಸ್ತಾನು ಮಾಡಲು ಗೋದಾಮುಗಳು ಇಲ್ಲ. ಇದು ನಮ್ಮಲ್ಲಿ ದೊಡ್ಡ ಸಮಸ್ಯೆ. ಹೀಗಾಗಿ ಸರ್ಕಾರ ಅಕ್ಕಿ, ಜೋಳ ಇತರ ಆಹಾರ ಧಾನ್ಯಗಳನ್ನು ಎಥೆನಾಲ್ ಆಗಿ ಪರಿವರ್ತಿಸಲು ಅನುಮತಿ ನೀಡಿದೆ ಎಂದು ಮಾಹಿತಿ ನೀಡಿದರು.