ಉ.ಕ ಜಿಲ್ಲಾ ಪಂಚಾಯತಿ ಅಖಾಡಕ್ಕೆ ಎಂಎಲ್ಎ ಸಹೋದರಿ?
ಕಾರವಾರ, ಫೆಬ್ರವರಿ 3: ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೇಲೆ ರಾಜಕೀಯ ಪಕ್ಷಗಳ, ನಾಯಕರುಗಳ ಕಣ್ಣು ಬಿದ್ದಿದೆ. ಕಾರವಾರ ಕ್ಷೇತ್ರದಲ್ಲಿ ತನ್ನ ಬಲವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಪ್ರಯತ್ನ ಮಾಡುತ್ತಿರುವ ಶಾಸಕಿ ರೂಪಾಲಿ ನಾಯ್ಕ್, ಈ ಬಾರಿ ತನ್ನ ಸಹೋದರಿ ಪ್ರತಿಭಾ ತಳೇಕರ್ ಅವರನ್ನು ಕಣಕ್ಕೆ ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಮಾತು ಇದೀಗ ದಟ್ಟವಾಗಿ ಕೇಳಿಬರತೊಡಗಿದೆ.
ಸದ್ಯ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಅವಧಿ ಮೇ ತಿಂಗಳಿನಲ್ಲಿ ಮುಕ್ತಾಯವಾಗಲಿದ್ದು, ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿಯೇ ಚುನಾವಣೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಗ್ರಾಮೀಣ ಭಾಗದಲ್ಲಿ ತನ್ನ ಹಿಡಿತ ಸಾಧಿಸಲು ಗ್ರಾಮ ಪಂಚಾಯಿತಿ ಚುನಾವಣೆ ಎಷ್ಟು ಪ್ರಮುಖವೋ, ಅಷ್ಟೇ ಪ್ರಮುಖ ಜಿಲ್ಲಾ ಪಂಚಾಯಿತಿ ಚುನಾವಣೆ ಸಹ ಆಗಿರುವ ಹಿನ್ನಲೆಯಲ್ಲಿ ರಾಜಕೀಯ ನಾಯಕರುಗಳಿಗೆ, ಪಕ್ಷಗಳಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೇಲೆ ಕಣ್ಣು ಬಿದ್ದಿದೆ.
ರೈತ ಹೋರಾಟ ದಾರಿತಪ್ಪಿಸುತ್ತಿದ್ದಾರೆ; ರೂಪಾಲಿ ನಾಯ್ಕ
ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳಲಿದ್ದಾರೆ
ಇನ್ನು ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯ ರೀತಿಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನೂ ಈ ಇಬ್ಬರು ನಾಯಕರುಗಳು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ತಮ್ಮ ಬೆಂಬಲಿಗ ಅಭ್ಯರ್ಥಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬರುವ ಮೂಲಕ ಒಬ್ಬರಿಗೊಬ್ಬರು ಟಾಂಗ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಶಾಸಕಿ ರೂಪಾಲಿ ನಾಯ್ಕ ಕ್ಷೇತ್ರದಲ್ಲಿ ತನ್ನ ಬಲ ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ತನ್ನ ಸಹೋದರಿ ಪ್ರತಿಭಾ ತಳೇಕರ್ ಅವರನ್ನು ಜಿಲ್ಲಾ ಪಂಚಾಯತಿ ಚುನಾವಣೆಯ ಅಖಾಡಕ್ಕೆ ಇಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕ್ಷೇತ್ರದಲ್ಲಿ ಹರಿದಾಡಲು ಪ್ರಾರಂಭವಾಗಿದೆ. ಈಗಾಗಲೇ ಶಾಸಕಿಯ ಸಹೋದರಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಕಾರವಾರ ತಾಲೂಕು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚೈತ್ರಾ ಮೇಲಿನ ಸೇಡು ತೀರಿಸಿಕೊಳ್ಳುವರೇ ಶಾಸಕಿ?
ಇನ್ನು ಮುಂದಿನ ಚುನಾವಣೆಯಲ್ಲಿ ತನ್ನ ಸಹೋದರಿಯನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಕ್ಷೇತ್ರದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವ ಚಿಂತನೆ ಶಾಸಕಿಯದ್ದಾಗಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಅಮದಳ್ಳಿ ಭಾಗದ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಶಾಸಕಿ ಸಹೋದರಿ ಸಹ ಚೆಂಡಿಯಾ, ಅಮದಳ್ಳಿ ಭಾಗದಲ್ಲಿ ಓಡಾಟ ನಡೆಸಿ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಅಮದಳ್ಳಿ ಕ್ಷೇತ್ರಕ್ಕೆ ಮಹಿಳಾ ಮೀಸಲಾತಿ ಬಂದಿದ್ದು, ಈ ಬಾರಿಯೂ ಮಹಿಳಾ ಮೀಸಲು ಬಂದರೆ ಚುನಾವಣೆಗೆ ನಿಲ್ಲಲಿದ್ದಾರೆ ಎನ್ನುವ ಮಾತು ಪಕ್ಷದ ಕಾರ್ಯಕರ್ತರಿಂದಲೂ ಕೇಳಿ ಬಂದಿದೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಮದಳ್ಳಿ ಕ್ಷೇತ್ರದಿಂದ ಶಾಸಕಿ ರೂಪಾಲಿ ನಾಯ್ಕ್ ಕಣಕ್ಕೆ ಇಳಿದಿದ್ದರು. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೋಠಾರಕರ್ ವಿರುದ್ಧ ಸೋಲನ್ನು ಕಂಡಿದ್ದರು.
ಚೈತ್ರಾ ಕೊಠಾರಕರ್ ಕಾಂಗ್ರೆಸ್ನಿಂದ ಕಣಕ್ಕೆ
ಇದಾದ ನಂತರ ಕ್ಷೇತ್ರದಲ್ಲಿ ಓಡಾಟ ಹೆಚ್ಚಿಗೆ ಮಾಡಿ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿದ್ದು, ಶಾಸಕರಾದ ನಂತರ ಇಂದಿಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಚೈತ್ರಾ ಕೊಠಾರಕರ್ ಹಾಗೂ ಶಾಸಕಿ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಇನ್ನು ಆಮದಳ್ಳಿ ಭಾಗದ ಕ್ಷೇತ್ರ ಈ ಬಾರಿ ಮಹಿಳಾ ಮೀಸಲಾತಿ ಬಂದರೆ ಮತ್ತೆ ಚೈತ್ರಾ ಕೊಠಾರಕರ್ ಕಾಂಗ್ರೆಸ್ನಿಂದ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗಿದ್ದು, ಚುನಾವಣೆಯಲ್ಲಿ ತನ್ನ ಸಹೋದರಿಯನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬರುವ ಮೂಲಕ ಹಿಂದಿನ ಸೋಲಿನ ಸೇಡನ್ನು ಶಾಸಕಿ ತೀರಿಸಿಕೊಳ್ಳುವರೇ ಎನ್ನುವ ಮಾತು ಇದೀಗ ಸಾರ್ವಜನಿಕರಲ್ಲಿ ಕೇಳಿ ಬಂದಿದೆ.
Recommended Video
ಮುಂದುವರಿಯಲಿದೆಯೇ ಕುಟುಂಬ ರಾಜಕಾರಣ...
ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ವಸಂತ್ ಅಸ್ನೋಟಿಕರ್ ಮೃತಪಟ್ಟ ನಂತರ ಅವರ ಪತ್ನಿ ಶುಭಲತಾ ಅಸ್ನೋಟಿಕರ್ ರಾಜಕೀಯ ಕಣಕ್ಕೆ ಬಂದಿದ್ದರು. ಅದಾದ ನಂತರ ಪುತ್ರ ಆನಂದ್ ಅಸ್ನೋಟಿಕರ್ ರಾಜಕೀಯಕ್ಕೆ ಬಂದು ಕುಟುಂಬ ರಾಜಕಾರಣಕ್ಕೆ ಸಾಕ್ಷಿಯಾಗಿದ್ದರು. ಇದೀಗ ಹಾಲಿ ಶಾಸಕಿ ಸಹೋದರಿ ಚುನಾವಣಾ ಅಖಾಡಕ್ಕೆ ಇಳಿದರೆ, ರೂಪಾಲಿ ನಾಯ್ಕ ಅವರ ಕುಟುಂಬ ರಾಜಕಾರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಸ್ವತಃ ಶಾಸಕಿ ಸಹೋದರಿಯೇ ನಿಂತರೆ ಕಾಂಗ್ರೆಸ್ ಸಹ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲ್ಲಲು ಪ್ರಯತ್ನ ಹೆಚ್ಚಿಸಿದರೆ ಚುನಾವಣಾ ಅಖಾಡ ಸಹ ಸಾಕಷ್ಟು ರಂಗಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.