ನೆರೆ ಸಂತ್ರಸ್ತರಿಗೆ ಅವಧಿ ಮೀರಿದ ಪಾಮ್ ಎಣ್ಣೆ ವಿತರಿಸಿದ ಶಾಸಕಿ
ಕಾರವಾರ, ಫೆಬ್ರವರಿ 15: ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಶಾಸಕಿ ರೂಪಾಲಿ ನಾಯ್ಕ, ಕೆಲವು ತಿಂಗಳ ಹಿಂದೆ ಬಂದಿದ್ದ ನೆರೆಹಾವಳಿಯಿಂದ ಸಂತ್ರಸ್ತರಾದವರಿಗೆ ತಮ್ಮ ಪರವಾಗಿ ದಿನನಿತ್ಯದ ಅವಶ್ಯಕ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ. ಆದರೆ ಈ ವಿಚಾರ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
ಶಾಸಕಿ ರೂಪಾಲಿ ವಿತರಿಸಿರುವ ಕಿಟ್ ನಲ್ಲಿ, ಅಕ್ಕಿ, ಸಕ್ಕರೆ, ಚಹಾಪುಡಿ, ಬೆಲ್ಲ, ಬೇಳೆಕಾಳು ಸೇರಿದಂತೆ ಪಾಮ್ ಎಣ್ಣೆಯ ಪ್ಯಾಕೆಟ್ ಇತ್ತು. ಈ ಕಿಟ್ ಅನ್ನು ಗೋಟೆಗಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಯರ್, ಬಾರಗದ್ದೆ, ಕಮರಗಾಂವ್ ಸೇರಿದಂತೆ ಕೆಲವು ಗ್ರಾಮಗಳ ಸುಮಾರು ನೂರು ಸಂತ್ರಸ್ತರಿಗೆ ವಿತರಿಸಲಾಗಿದೆ. ಆದರೆ, ಈ ಕಿಟ್ ನಲ್ಲಿದ್ದ ಪಾಮ್ ಎಣ್ಣೆಯ ಅವಧಿ ಮುಗಿದಿದ್ದು, ಶಾಸಕಿ ತಿಳಿದೂ ಸಂತ್ರಸ್ತರಿಗೆ ಅದನ್ನು ವಿತರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನೆರೆ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆದ ರಾಜ್ಯ ಸರ್ಕಾರ
ಅವಧಿ ಮುಗಿದ ಸಾಮಗ್ರಿ ಎಂದು ಖಂಡಿಸಿದ ಕಾಂಗ್ರೆಸ್
‘ಕಳೆದ ಆಗಸ್ಟ್ ತಿಂಗಳಲ್ಲಿ ನೆರೆ ಪ್ರವಾಹದಿಂದ ಸಂತ್ರಸ್ತರಾದ ಮಲ್ಲಾಪುರ, ಕದ್ರಾ, ಕೆರವಡಿ, ದೇವಳಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತ್ರಸ್ತರಿಗೆ ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ಪರವಾಗಿ ದಿನನಿತ್ಯದ ಅಗತ್ಯ ವಸ್ತುಗಳನ್ನು ಶುಕ್ರವಾರ ವಿತರಿಸಿದ್ದಾರೆ. ಆದರೆ, ಬಡ ಸಂತ್ರಸ್ತರಿಗೆ ಅವರು ನೀಡಿದ ಪಾಮ್ ಎಣ್ಣೆ ಅವಧಿ ಮುಗಿದದ್ದಾಗಿದೆ. ಈ ರೀತಿ ಬಡ ಸಂತ್ರಸ್ತರಿಗೆ ಅವಧಿ ಮುಗಿದ ವಸ್ತುಗಳು ನೀಡಿದ್ದು ಖಂಡನೆಯಾಗಿದೆ' ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಹಾಗೂ ಮಲ್ಲಾಪುರ ಗ್ರಾಮಸ್ಥ ಉದಯ ಬಾಂದೇಕರ ಆರೋಪಿಸಿದ್ದಾರೆ.
‘ಈ ರೀತಿ ಬಡ ಸಂತ್ರಸ್ತರಿಗೆ ಅವಧಿ ಮುಗಿದ ವಸ್ತುಗಳನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕೆಯಲ್ಲಿ ಶಾಸಕಿ ಹಾಗೂ ಅವರ ಕಡೆಯವರು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಬಡ ಜನರ ಪ್ರಾಣದ ಜೊತೆ ಅವರು ಆಟ ಆಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೀಡುವ ಸ್ಪಷ್ಟನೆ ಏನು?
‘ಪಾಮ್ ಎಣ್ಣೆಯ ಅವಧಿ ಮುಗಿದ್ದು ನಿಜ. ಅದು ಕೂಡ ಕೇವಲ 10 ದಿನ ವಿಳಂಬವಾಗಿದೆ' ಎಂದು ಬಿಜೆಪಿಯ ಕೆಲವರು ತಿಳಿಸಿದ್ದಾರೆ. 'ನೆರೆ ಸಂದರ್ಭದಲ್ಲಿ ವಿತರಣೆಗೆಂದು ತಂದು, ಅಗತ್ಯ ವಸ್ತುಗಳೆಲ್ಲವನ್ನೂ ಸೇರಿಸಿ ಒಂದು ಕಿಟ್ ತಯಾರಿಸಿ ಇಟ್ಟಿದ್ದೆವು. ಆ ಸಂದರ್ಭದಲ್ಲಿ ಶಾಸಕಿಯವರಿಗೆ ಅನಾರೋಗ್ಯದ ಕಾರಣ ಎಲ್ಲಾ ನೆರೆ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನಿಡಲು ಸಾಧ್ಯವಾಗಲಿಲ್ಲ. ಅದರ ನಂತರದಲ್ಲಿ ಯಲ್ಲಾಪುರ ಚುನಾವಣಾ ಕರ್ತವ್ಯ ಸೇರಿದಂತೆ ಇನ್ನಿತರ ಹಲವು ಕೆಲಸ- ಕಾರ್ಯಗಳು ಬಂದಿದ್ದರಿಂದ ಅವರು ಅದರಲ್ಲಿ ನಿರತರಾಗಿದ್ದರು. ಹೀಗಾಗಿ ಆ ಕಿಟ್ ಗಳನ್ನು ಸಮಯ ಸಿಕ್ಕಾಗೆಲ್ಲ ವಿತರಣೆ ಮಾಡುತ್ತಿದ್ದೆವು. ಹಿಂದೆಯೇ ಬಹುತೇಕ ಕಿಟ್ ಗಳನ್ನು ವಿತರಿಸಲಾಗಿದ್ದು, ಶುಕ್ರವಾರ ಕಾರವಾರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ವಿತರಿಸಿದೆವು' ಎಂದು ತಿಳಿಸಿದ್ದಾರೆ.
ಕೇಂದ್ರದ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ: ಸಿದ್ದರಾಮಯ್ಯ
'ಗಮನಕ್ಕೆ ಬಾರದ ಘಟನೆ, ರಾಜಕೀಯ ಬೇಡ'
'ಸಂತ್ರಸ್ತರಿಗೆ ನೀಡಿದ್ದ ಪಾಮ್ ಎಣ್ಣೆಯ ಅವಧಿ ಮೀರಿದ್ದು ಗಮನಕ್ಕೆ ಬಂದಿರಲಿಲ್ಲ. ಗಮನಕ್ಕೆ ಬರದೇ ಆದ ತಪ್ಪನ್ನು ರಾಜಕೀಯ ಮಾಡುವುದು ಸರಿಯಲ್ಲ' ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.
'ವಿತರಣೆ ಮಾಡಾದ ನಂತರ ಕೆಲವರಿಂದ ಈ ವಿಚಾರ ಗಮನಕ್ಕೆ ಬಂತು. ತಕ್ಷಣ ಸಂತ್ರಸ್ತರ ಬಳಿ ತೆರಳಿ ಪಾಮ್ ಎಣ್ಣೆ ಪ್ಯಾಕೆಟ್ ಗಳನ್ನು ವಾಪಸ್ ನೀಡಲು ಹೇಳಿದಾಗ, ಕೆಲವರು ನೀಡಿದರು. ಇನ್ನು ಕೆಲವರು ತಾವೇ ಇಟ್ಟುಕೊಂಡರು' ಎಂದು ಹೇಳಿದ್ದಾರೆ.ಅವಧಿ ಮೀರಿದ್ದು ನಿಜವೇ?
ಪಾಮ್ ಎಣ್ಣೆಯ ಪ್ಯಾಕೆಟ್ ನ ಮೇಲೆ ಜುಲೈ 2019ರಂದು ಪ್ಯಾಕ್ ಮಾಡಿರುವುದಾಗಿ ಇದೆ. ಪ್ಯಾಕೆಟ್ ಅನ್ನು ಪ್ಯಾಕ್ ಮಾಡಿದಾಗಿನಿಂದ ಆರು ತಿಂಗಳ ವರೆಗೆ ಬಳಸಬಹುದಾಗಿದೆ. ಅದರಂತೆ ನೋಡುವುದಾದರೆ, ಪಾಮ್ ಎಣ್ಣೆಯ ಪ್ಯಾಕೆಟ್ ನ ಅವಧಿ ಮೀರಿ ಎರಡು ತಿಂಗಳಾಗಿದೆ. ಆದರೆ ಇವರು ಹತ್ತು ದಿನ ಅವಧಿ ಮೀರಿದೆ ಎಂದು ಹೇಳಿದ್ದಾರೆ.
ಆದರೆ, 'ವಿತರಣೆಯ ಸಂದರ್ಭದಲ್ಲಿ ಪಾಮ್ ಎಣ್ಣೆಯ ಅವಧಿ ಮುಗಿದಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ ಅದನ್ನು ಪ್ರತ್ಯೇಕಿಸಿ, ಉಳಿದವುಗಳನ್ನು ವಿತರಿಸಲು ಮುಂದಾದಾಗ ಗ್ರಾಮಸ್ಥರೇ ಕೊಡಿ ಎಂದಿದ್ದಕ್ಕೆ ವಿತರಣೆ ಮಾಡಿದೆವು. ಆದರೆ, ಅದನ್ನೇ ಕೆಲವರು ಶಾಸಕರು ತಿಳಿದೇ ವಿತರಿಸಿದ್ದಾರೆ ಎಂದು ಬಿಂಬಿಸಿದ್ದಾರೆ' ಎಂದು ಬಿಜೆಪಿಯವರು ಹೇಳಿದ್ದಾರೆ.