ಸಚಿವ ಸಂಪುಟ ವಿಸ್ತರಣೆ; ಕಾರವಾರದ ಕರಾವಳಿ ಭಾಗಕ್ಕೆ ಸಿಗಲಿದೆಯಾ ಪ್ರಾತಿನಿಧ್ಯ?
ಕಾರವಾರ, ನವೆಂಬರ್ 20: ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆದಿದೆ. ಈ ಬಾರಿ ಸಚಿವರಾಗಿ ಸೇರ್ಪಡೆಯಾಗುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರ ಹೆಸರು ಸಹ ಕೇಳಿ ಬಂದಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಆಸಕ್ತಿ ತೋರಿಸಿದ್ದು, ಈಗಾಗಲೇ ಕೇಂದ್ರ ನಾಯಕರ ಜೊತೆ ಚರ್ಚೆಯನ್ನೂ ನಡೆಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿ ಮಂತ್ರಿ ಸ್ಥಾನ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಆರ್.ಶಂಕರ್, ಎಂಟಿ.ಬಿ ನಾಗರಾಜ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಯಡಿಯೂರಪ್ಪ ಮುಂದಾಗಿದ್ದಾರೆ. ಇದರ ಜೊತೆ ಮೂಲ ಬಿಜೆಪಿಯ ಕೆಲ ಶಾಸಕರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಬೆಳಗಾವಿಯ ಹಿರಿಯ ಶಾಸಕ ಉಮೇಶ್ ಕತ್ತಿ ಹಾಗೂ ಅರವಿಂದ್ ಲಿಂಬಾವಳಿಯವರ ಹೆಸರು ಸಹ ಕೇಳಿ ಬಂದಿದೆ. ಮುಂದೆ ಓದಿ...
ಶಶಿಕಲಾ ಜೊಲ್ಲೆಯವರಿಗೆ ಈ ಬಾರಿ ಕೊಕ್?
ಈ ಬಾರಿ ಹಲವು ಸಚಿವರನ್ನು ಸಂಪುಟದಿಂದ ಕೈ ಬಿಡಲಿದ್ದಾರೆ ಎನ್ನುವ ಮಾತು ಸಹ ಕೇಳಿ ಬಂದಿದೆ. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರ ಹೆಸರು ಕೇಳಿಬಂದಿದೆ. ಒಂದೊಮ್ಮೆ ಬೆಳಗಾವಿಯಿಂದ ಉಮೇಶ್ ಕತ್ತಿಗೆ ಅವಕಾಶ ಸಿಕ್ಕರೆ, ಶಶಿಕಲಾ ಜೊಲ್ಲೆ ಸಹ ಬೆಳಗಾವಿ ಮೂಲದವರಾಗಿರುವುದರಿಂದ ಹಾಗೂ ಇಬ್ಬರೂ ಒಂದೇ ಸಮುದಾಯದವರಾಗಿರುವುದರಿಂದ ಜೊಲ್ಲೆಯವರನ್ನು ಕೈ ಬಿಟ್ಟು ಬೇರೆಯವರಿಗೆ ಅವಕಾಶ ಕೊಡುವ ಸಾಧ್ಯತೆ ಇದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಜೊಲ್ಲೆಯವರ ಜೊತೆಗೆ ಸಚಿವ ಶ್ರೀಮಂತ್ ಪಾಟೀಲ್ ಅವರನ್ನ ಸಹ ಕೈ ಬಿಡಲಿದ್ದಾರೆ ಎನ್ನಲಾಗಿದೆ.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಿಗುತ್ತಾ ಸಚಿವ ಸ್ಥಾನ?
ಹಿರಿಯೂರು ಶಾಸಕಿ ಪೂರ್ಣಿಮಾಗೆ ಅವಕಾಶ?
ಒಂದೊಮ್ಮೆ ಶಶಿಕಲಾ ಜೊಲ್ಲೆಯವರನ್ನು ಕೈಬಿಟ್ಟರೆ ಮಹಿಳಾ ಕೋಟಾದಲ್ಲಿ ಚಿತ್ರದುರ್ಗದ ಹಿರಿಯೂರು ಶಾಸಕಿ ಪೂರ್ಣಿಮಾ ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯ್ಕ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಆದರೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದು ಪಕ್ಷಕ್ಕೂ ಮುಜುಗರ ಉಂಟು ಮಾಡಿದ್ದರಿಂದ ಪಕ್ಷದಲ್ಲಿ ಈ ಬಾರಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನದ ಅವಕಾಶ ಕೊಡುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರ ಹೆಸರು ಸಚಿವ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಬಲವಾಗಿ ಕೇಳಿ ಬಂದಿದೆ.
ಸಚಿವ ಸ್ಥಾನದ ಸಂಬಂಧ ಮಾತುಕತೆ ನಡೆಸಿದ್ದ ರೂಪಾಲಿ ನಾಯ್ಕ
ಇನ್ನು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೆ ಪ್ರಾಶಸ್ತ್ಯ ನೀಡುವ ಹಾಗೂ ರೂಪಾಲಿ ನಾಯ್ಕ ಮರಾಠ ಸಮುದಾಯದವರಾಗಿರುವುದರಿಂದ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿದೆ. ಕೆಲ ದಿನಗಳ ಹಿಂದೆ ಶಾಸಕಿ ರೂಪಾಲಿ ನಾಯ್ಕ ಸಹ ಬೆಂಗಳೂರಿಗೆ ತೆರಳಿ ಸಚಿವ ಸ್ಥಾನದ ಸಂಬಂಧ ಮಾತುಕತೆ ಕೂಡ ನಡೆಸಿ ಬಂದಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದು 'ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ' ಹೊಡೆದ ರೂಪಾಲಿ ನಾಯ್ಕ
ಸಂಘಟನೆಯೇ ವರದಾನವಾಯ್ತಾ?
ಪಕ್ಷ ಸಂಘಟನೆಯ ಮೂಲಕ ರೂಪಾಲಿ ನಾಯ್ಕ ವರಿಷ್ಠರ ಗಮನ ಸೆಳೆದುಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸಚಿವ ಆಕಾಂಕ್ಷಿಗಳ ಪಟ್ಟಿಯಲ್ಲಿ ರೂಪಾಲಿ ನಾಯ್ಕ ಅವರ ಹೆಸರು ಕೇಳಿ ಬಂದಿದೆ. ಪಕ್ಷ ಸಂಘಟನೆ ವಿಚಾರದಲ್ಲಿ ರೂಪಾಲಿ ನಾಯ್ಕ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ತನ್ನ ಕ್ಷೇತ್ರ ಮಾತ್ರವಲ್ಲದೇ, ಜಿಲ್ಲೆಯಾದ್ಯಂತ ಸಂಘಟನೆಗೆ ಆಸಕ್ತಿ ತೋರಿಸುತ್ತಿರುವುದು ಅವರಿಗೆ ವರದಾನವಾಗಲಿದೆ. ವಿವಿಧ ಚುನಾವಣೆಗಳಲ್ಲಿ ಪ್ರಚಾರ ಕಾರ್ಯಗಳಲ್ಲೂ ತೊಡಗಿಕೊಂಡು ಯಶಸ್ವಿಯಾಗಿಸಿದ ಹೆಗ್ಗಳಿಕೆ ಕೂಡ ಅವರದ್ದಾಗಿದೆ.
Recommended Video
ನಾಯಕರ ಮೆಚ್ಚುಗೆ ಗಳಿಸಿದ್ದ ಶಾಸಕಿ
ಕಾರವಾರ ನಗರಸಭೆ ಹಾಗೂ ಅಂಕೋಲಾ ಪುರಸಭೆಯ ಆಡಳಿತವನ್ನು ಹಿಡಿಯುವುದು ಕಷ್ಟ ಎನ್ನುವುದರ ನಡುವೆ ರೂಪಾಲಿ ಎರಡೂ ಕಡೆ ಶ್ರಮಪಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ರಾಜ್ಯದ ನಾಯಕರ ಮೆಚ್ಚುಗೆಗೆ ಕಾರಣವಾಗಿದ್ದರು. ಸಚಿವೆ ಶಶಿಕಲಾ ಜೊಲ್ಲೆಗಿಂತ ಚುರುಕಾಗಿ ರೂಪಾಲಿ ನಾಯ್ಕ ಕೆಲಸ ಮಾಡುತ್ತಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ವಾಕ್ ಚಾತುರ್ಯವನ್ನು ರೂಪಾಲಿ ಹೊಂದಿದ್ದಾರೆ ಎನ್ನುವ ಮಾತು ಪಕ್ಷದ ಕೆಲ ನಾಯಕರಿಂದ ಕೇಳಿಬಂದಿದ್ದು, ಇದೇ ವಿಚಾರವಾಗಿ ಸಚಿವ ಸ್ಥಾನವನ್ನು ಒಮ್ಮೆ ರೂಪಾಲಿ ನಾಯ್ಕರಿಗೆ ಕೊಡಬೇಕು ಎಂಬುದು ರಾಜ್ಯ ನಾಯಕರ ಚಿಂತನೆಯಾಗಿದೆ ಎನ್ನಲಾಗಿದೆ.