ಅವಕಾಶ ಇದ್ರೆ ಶಾಸಕಿ ರೂಪಾಲಿ ಅವರನ್ನು ಮಂತ್ರಿ ಮಾಡಿ: ರಮೇಶ್ ಕುಮಾರ್
ಕಾರವಾರ, ಮಾರ್ಚ್ 16: ಮಾತೃಪೂರ್ಣ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸದನದಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುವಾಗ ಸರ್ಕಾರದ ಪರ ಗಟ್ಟಿ ಧ್ವನಿ ಎತ್ತಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಗಮನ ಸೆಳೆದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪ್ರಾರಂಭಿಸಿದ್ದ ಮಾತೃಪೂರ್ಣ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಸೋಮವಾರ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಿಚಾರ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಸಚಿವರು ಉತ್ತರಿಸಬೇಕು ಎಂದು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯಿಂದ ಕಂಗಾಲಾದ ಕಂದಾಯ ಸಚಿವ ಆರ್. ಅಶೋಕ್!
ಸದನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಉಪಸ್ಥಿತರಿರಲಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರದ ಪರ ಶಾಸಕಿ ರೂಪಾಲಿ ನಾಯ್ಕ ಧ್ವನಿಯಾಗಿ, ಯೋಜನೆಯನ್ನು ನಿಲ್ಲಿಸಿಲ್ಲ, ಕೊರೊನಾ ಸಂದರ್ಭದಲ್ಲಿ ತನ್ನ ಕ್ಷೇತ್ರದಲ್ಲಿ ಅಂಗನವಾಡಿ ಕಾರ್ಯಕರ್ತರು ದುಡಿದಿದ್ದಾರೆ. ಮನೆ ಮನೆಗೆ ಹೋಗಿ ಗರ್ಭಿಣಿ, ಬಾಣಂತಿಯವರಿಗೆ ಆಹಾರ ಕೊಟ್ಟು ಬಂದಿದ್ದಾರೆ, ಸುಳ್ಳು ಆರೋಪ ಮಾಡಿ, ಜನರಿಗೆ ತಪ್ಪು ಸಂದೇಶ ಕೊಡಬೇಡಿ ಎಂದು ಹೇಳಿದರು.
ತಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮಿತಿಯಲ್ಲಿದ್ದು, ತನಗೆ ಈ ಬಗ್ಗೆ ಅರಿವಿದೆ ಎಂದಾಗ ಸದನದಲ್ಲಿ ಗದ್ದಲವಾಯಿತು. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, ಸಂಬಂಧಪಟ್ಟ ಮಂತ್ರಿಗಳು ಇದಕ್ಕೆ ಉತ್ತರ ಕೊಡಲಿ ಎಂದು ಹೇಳಿದಾಗ, ನೀವು ಸುಳ್ಳು ಯಾಕೆ ಹೇಳುತ್ತೀರಿ, ಇದು ಸರಿಯಾದುದ್ದಲ್ಲ ಎಂದು ರೂಪಾಲಿ ಗುಡುಗಿದರು.
ಸದನದಲ್ಲಿ ರೂಪಾಲಿ ನಾಯ್ಕ ಪರ ಸಚಿವ ಅರವಿಂದ್ ಲಿಂಬಾವಳಿ ಧ್ವನಿ ಎತ್ತಿದಾಗ, ಕಾಂಗ್ರೆಸ್ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸ್ಪೀಕರ್ ಪೀಠದಲ್ಲಿದ್ದ ಆರಗ ಜ್ಞಾನೇಂದ್ರ, ಸದಸ್ಯರು ಸುಮ್ಮನಾಗುವಂತೆ ಮನವಿ ಮಾಡಿಕೊಂಡರು.
Recommended Video
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕಿ ರೂಪಾಲಿ ನಾಯ್ಕ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದು, ಕೆಲವು ವಿಷಯದ ಬಗ್ಗೆ ತಿಳಿದಿರುವುದಿಲ್ಲ. ಮುಂದಿನ ದಿನದಲ್ಲಿ ಸಾಧ್ಯವಾದರೆ ಶಾಸಕಿ ರೂಪಾಲಿ ನಾಯ್ಕರನ್ನು ಮಂತ್ರಿಯನ್ನಾಗಿ ಮಾಡಿ ಎಂದು ಹೇಳುವ ಮೂಲಕ ಗದ್ದಲ ನಿಲ್ಲುವಂತೆ ಮಾಡಿದರು.