ಜಮೀರ್ ಅಹ್ಮದ್ ವಿರುದ್ಧ ಸಚಿವ ಹೆಬ್ಬಾರ್ ವಾಗ್ದಾಳಿ
ಕಾರವಾರ, ಏಪ್ರಿಲ್ 23: ಕ್ಷಮೆ ಕೇಳುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಸಮಸ್ಯೆಯನ್ನು ಹುಟ್ಟಿಸಿರುವುದು ಅಕ್ಷಮ್ಯ ಅಪರಾಧ, ಮನುಷ್ಯತ್ವ ಇದ್ದವರು ಇಂತಹ ಘಟನೆಗಳಿಗೆ ಆಸ್ಪದ ಕೊಡುವುದಿಲ್ಲ. ನಾಲಿಗೆಯಿಂದ ಹೊರಡುವ ಶಬ್ದಗಳಿಗೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಶಾಸಕ ಜಮೀರ್ ಅಹ್ಮದ್ ವಿರುದ್ಧ ಸಚಿವ ಶಿವರಾಮ್ ಹೆಬ್ಬಾರ್ ವಾಗ್ದಾಳಿ ನಡೆಸಿದರು.
ಅಂಕೋಲಾ ತಾಲ್ಲೂಕಿನಲ್ಲಿ ಗುರುವಾರ ವಿವಿಧ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಬೆಂಗಳೂರಿನ ಪಾದರಾಯನಪುರದಲ್ಲಿ ಕೋವಿಡ್-19 ಗೆ ಸಂಭಂದಿಸಿದಂತೆ ಕ್ವಾರೈಂಟೆನ್ ಮಾಡಲು ಜನರನ್ನು ಕರೆತರಲು ಹೋದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ, ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗಳ ಮೇಲೆ ಹಿಂಸೆ ಮಾಡಿರುವುದು ಈ ದೇಶ ಕ್ಷಮಿಸುವಂತ ಕೃತ್ಯವಲ್ಲವೆಂದರು.
ಪ್ರಧಾನಿ ನರೇಂದ್ರ ಮೋದಿ ಸರಕಾರದ ಕ್ಯಾಬಿನೆಟ್ನಲ್ಲಿ ಹೊಸ ಕಾನೂನನ್ನು ತಂದಿದೆ. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಇಂತಹ ಸಂದರ್ಭದಲ್ಲಿ ಯಾರಾದರೂ ತೊಂದರೆ ನೀಡಿದರೆ ಏಳು ವರ್ಷ ಕಠಿಣ ಶಿಕ್ಷೆಗೆ ಗುರಿಯಾಗಿಸುವಂತಹ ಜಾಮೀನು ರಹಿತ ಕಾನೂನನ್ನು ರೂಪಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಪಾದರಾಯನಪುರದ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲಿನ ಹಲ್ಲೆ ಘಟನೆಯ ತನಿಖೆ ನಡೆಯುತ್ತಿದೆ. ತನಿಖೆಯಿಂದ ಯಾರು ಅಪರಾಧಿಗಳೆಂದು ತಿಳಿಯುತ್ತದೆಯೋ ಅಂತವರಿಗೆ ಶಿಕ್ಷೆ ಆಗುತ್ತದೆ. ಮತ್ತೊಮ್ಮೆ ಇಂತಹ ಘಟನೆ ಈ ರಾಜ್ಯದಲ್ಲಿ ನಡೆಯಬಾರದು ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.