ಸಮಾಜ ಕಲ್ಯಾಣ ಇಲಾಖೆ ಕಟ್ಟಡದ ಗುದ್ದಲಿ ಪೂಜೆ ನಡೆಸಿದ ಮರುಕ್ಷಣವೇ, ಕಾಮಗಾರಿ ಸ್ಥಗಿತಗೊಳಿಸಲು ಆದೇಶ
ಕಾರವಾರ, ನವೆಂಬರ್ 30: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಪಟ್ಟಣದ ಹೊರವಲಯದ ವಿಠ್ಠಲಘಾಟ ಬಳಿ 1 ಕೋಟಿ 86 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡದ ಶಿಲಾನ್ಯಾಸ ಹಾಗೂ ಗುದ್ದಲಿ ಪೂಜೆಯನ್ನು ನೆರವೆರಿಸಿದ ತಕ್ಷಣವೇ ಕಟ್ಟಡ ಕಾಮಗಾರಿಯನ್ನು ಸ್ಥಗಿತ ಮಾಡುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆ ಬಳಿಕ ಅವರು ಮಾಧ್ಯಮದೊಂದಿಗೆ ಸಚಿವ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಕಟ್ಟಡಕ್ಕೆ ಆಯ್ಕೆ ಮಾಡಿದ ಜಾಗದ ಕುರಿತು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಇಲಾಖೆಯ ಕಚೇರಿಗಳು ಸಾರ್ವಜನಿಕರಿಗೆ, ಬಡವರಿಗೆ ಅನುಕೂಲವಾಗುವ ಸ್ಥಳದಲ್ಲಿರಬೇಕೇ ಹೊರತು ಊರ ಹೊರಗೆ ಸರಕಾರದ ಕೊಟ್ಯಾಂತರ ರೂ. ವ್ಯಯ ಮಾಡಿ ಸಾರ್ವಜನಿಕರಿಗೆ ಅನುಕೂಲಕರವಾಗದ ರೀತಿಯಲ್ಲಿ ಮಾಡಬಾರದು ಎಂದರು.
ಕುಮಟಾ ಉಪ್ಪಿಗೆ ಪಾರಂಪರಿಕ ಮಾನ್ಯತೆ; ಯೋಜನೆ ಸಿದ್ಧತೆಗೆ ಸೂಚನೆ
ಹೀಗಾಗಿ ತಕ್ಷಣದಿಂದಲೇ ಇಲ್ಲಿ ಕಾಮಗಾರಿಯನ್ನು ನಿಲ್ಲಿಸಲು ಆದೇಶಿಸಿದ್ದೇನೆ. ಈಗ ನಿಗದಿಯಾದ ಸ್ಥಳವು ಪಟ್ಟಣದಿಂದ ದೂರದಲ್ಲಿದ್ದು, ನೀಲಂಪುರ ಗುಡ್ಡದಾಚೆ ಇದೆ. ಅಲ್ಲದೆ ಚತುಷ್ಪಥ ಹೆದ್ದಾರಿಯನ್ನು ದಾಟಿ ರೇಲ್ವೆ ಟ್ರ್ಯಾಕ್ ಹೋಗಬೇಕು. ಇಲ್ಲಿ ಯಾವ ಅನುಕೂಲತೆಗಳೂ ಇಲ್ಲ. ಹೀಗಾಗಿ ಇಲ್ಲಿ ಕಚೇರಿ ಕಟ್ಟಡ ಯಾಕೆ ಎಂದು ಪ್ರಶ್ನಿಸಿದರು.
ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರು ಈ ಸ್ಥಳದ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಹಶೀಲ್ದಾರ ಉದಯ ಕುಂಬಾರ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿ.ಪಂ ಸದಸ್ಯ ಜಗದೀಶ ನಾಯಕ, ತಾ.ಪಂ ಅಧ್ಯಕ್ಷೆ ಸುಜಾತಾ ಗಾಂವಕರ, ಸ್ಥಾಯಿಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಪ್ರಮುಖರಾದ ಭಾಸ್ಕರ ನಾರ್ವೇಕರ, ರಾಜೇಂದ್ರ ನಾಯ್ಕ, ಸಂಜಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.