ಶಿರಸಿ ಜಿಲ್ಲೆ ರಚನೆ ಕುರಿತು ಸಚಿವ ಹೆಬ್ಬಾರ್ ಮಹತ್ವದ ಹೇಳಿಕೆ
ಕಾರವಾರ, ಫೆಬ್ರವರಿ 16: ಶಿರಸಿ ಬಂದ್ ಗೂ ಶಿರಸಿ ಜಿಲ್ಲೆ ರಚನೆ ಮಾಡುವುದಕ್ಕೂ ಯಾವುದೇ ಸಂಬಂಧ ಇಲ್ಲ. ಜಿಲ್ಲೆ ಮಾಡಬೇಕಾದ ನಿರ್ಣಯವನ್ನು ನಾವೆಲ್ಲ ಸೇರಿ ಮಾಡಬೇಕಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇಬ್ಭಾಗದ ಬಗ್ಗೆ ಕೇವಲ ಒಬ್ಬ ವ್ಯಕ್ತಿ ಅಥವಾ ಒಬ್ಬ ಸಚಿವನಾಗಿ ಅಭಿಪ್ರಾಯ ಕೊಡುವುದು ಕಷ್ಟ ಸಾಧ್ಯ. ಈ ಜಿಲ್ಲೆಯ ಶಾಸಕರು, ಲೋಕಸಭಾ ಸಂಸದರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಬುದ್ಧಿಜೀವಿಗಳ ಜೊತೆಗೆ ಈ ಬಗ್ಗೆ ಚರ್ಚೆ ಮಾಡಬೇಕಿದೆ. ಚರ್ಚೆಯ ನಂತರ ಜಿಲ್ಲೆಯ ಇಬ್ಭಾಗದ ಬಗ್ಗೆ ಮೊದಲು ಯೋಚನೆ ಮಾಡಬೇಕು. ಶಿರಸಿನೊ, ಹಳಿಯಾಳನೊ, ಯಲ್ಲಾಪುರವೋ ಎನ್ನುವುದು ನಂತರದ ಯೋಚನೆ ಆಗುತ್ತದೆ. ಅದಕ್ಕೆ ನಿರ್ದಿಷ್ಟವಾದ ನಿರ್ಣಯ ಇನ್ನೂ ಬಂದಿಲ್ಲ ಎಂದರು.
ಎಲ್ಲರಿಗೂ ನನ್ನ ರಕ್ಷಣೆ ಇದೆ, ಕೇವಲ ಮಿರಾಶಿಗೆ ಮಾತ್ರವಲ್ಲ: ಸಚಿವ ಹೆಬ್ಬಾರ್
ಶಿರಸಿ ಬಂದ್ ಹೇಳ್ತಾರೆ, ನಾಳೆ ಯಲ್ಲಾಪುರ ಕರೆ ಕೊಡುತ್ತಾರೆ. ಮುಂದೆ ಹಳಿಯಾಳದವರೂ ಬಂದ್ ಎನ್ನುತ್ತಾರೆ. ಬಂದ್ ಗೂ ಜಿಲ್ಲೆ ಆಗುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ ಅವರು, ಇದರಲ್ಲಿ ವೈಯಕ್ತಿಕ ನಿಲುವು ಏನೂ ಇಲ್ಲ. ಸಾಮೂಹಿಕ ನಿಲುವೇ ನನ್ನ ನಿಲುವು. ಜಿಲ್ಲೆ ಈಗ ಅಖಂಡವಾಗಿ ಇದೆ. ಮುಂದೆ ಹೇಗಿರಬೇಕೆಂಬ ಬಗ್ಗೆ ಎಲ್ಲರೂ ಕೂತು ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಆಗ್ರಹಿಸಿ ಫೆ.24ರಂದು ಶಿರಸಿ ಬಂದ್ ಗೆ ಈಗಾಗಲೇ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ಕರೆ ನೀಡಿದ್ದು, ಉತ್ತರ ಕನ್ನಡವನ್ನು ಇಬ್ಭಾಗಿಸುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.