ಆರ್.ವಿ.ದೇಶಪಾಂಡೆ ಅಲ್ಲ, ಅವರು ಕಮಿಷನ್ ಪಾಂಡೆ: ಸುನೀಲ್ ಹೆಗ್ಡೆ ವಾಗ್ದಾಳಿ
ಕಾರವಾರ, ಮಾರ್ಚ್ 13: ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಆರ್.ವಿ.ದೇಶಪಾಂಡೆ ಅಲ್ಲ. ಅವರು ಕಮಿಷನ್ ಪಾಂಡೆ. ಫಟಿಂಗ ಪಾಂಡೆ ಎಂದು ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗ್ಡೆ ಪುನರುಚ್ಛರಿಸಿದ್ದಾರೆ.
ಕಾರವಾರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಪಾಂಡೆಯವ್ರು ತಾವು ನಡೆದಿದ್ದೇ ದಾರಿ. ತಾವು ಮಾಡಿದ್ದೇ ಕಾಯ್ದೆ ಎನ್ನುತ್ತಾರೆ. ಜನರಿಗೆ ಬೇಕಾದದ್ದನ್ನ ಒಂದೂ ಮಾಡುವುದಿಲ್ಲ. ಇವರ ಜಿಲ್ಲಾ ಉಸ್ತುವಾರಿಕೆಯಲ್ಲಿ ಉತ್ತರ ಕನ್ನಡ ಎಲ್ಲೂ ಅಭಿವೃದ್ಧಿ ಕಂಡಿಲ್ಲ. ಕೇವಲ ಭ್ರಷ್ಟಾಚಾರ ಮಾತ್ರ ಇಲ್ಲಿ ತಾಂಡವ ಆಡುತ್ತಿದೆ ಎಂದು ದೂರಿದರು.
'ರಾಹುಲ್ ರಫೆಲ್ ಅಂದ್ರೆ 3 ಚಕ್ರದ ಸೈಕಲ್ ಅಂದುಕೊಂಡಿದ್ದಾರೆ'
ಜನರಿಗೆ ಇ- ಸ್ವತ್ತಿನಿಂದ ಸಮಸ್ಯೆ ಆಗುತ್ತಿದೆ. ಇದನ್ನು ರದ್ದುಪಡಿಸುವುದು ಕಂದಾಯ ಸಚಿವರಾಗಿರುವ ದೇಶಪಾಂಡೆ ಅವರಿಗೆ ದೊಡ್ಡ ಕೆಲಸವೇನು ಅಲ್ಲ. ಆದರೆ, ಅವರು ಅದನ್ನು ತೆಗೆಯಲು ಹೋಗುವುದಿಲ್ಲ. ಕಾರಣ, ಅದರಿಂದ ಅವರಿಗೆ ಕಮಿಷನ್ ಸರಿಯಾಗಿ ಬರುತ್ತಿದೆ. ಇ- ಸ್ವತ್ತು ಹೋದರೆ ತಮ್ಮ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಸುನೀಲ್ ಹೆಗ್ಡೆ ಕಿಡಿಕಾರಿದರು.
ನರೇಗಾ ಯೋಜನೆಯ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸುವ ಮೂರ್ಖ ಪಾಂಡೆಯವರೇ, ಈ ಹಿಂದೆ ಹತ್ತು ವರ್ಷ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಷ್ಟು ಹಣ ರಾಜ್ಯಕ್ಕೆ ಬಿಡುಗಡೆ ಮಾಡಿದ್ದರು? ಅದರ ಲೆಕ್ಕ ಕೊಡಿ ಎಂದು ಸವಾಲು ಹಾಕಿದರು.
ನಮ್ಮ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಏನು ಅಭಿವೃದ್ಧಿ ಮಾಡಿದ್ದಾರೆ ಎನ್ನುವ ಲೆಕ್ಕವನ್ನು ನಾವು ಕೊಟ್ಟಿದ್ದೇವೆ. ಆದರೆ, ಅವರು ನಿಮ್ಮಂತೆ ಭ್ರಷ್ಟಾಚಾರ ಮಾಡಿಲ್ಲ. ನಿಮ್ಮಂತೆ ಜನರ ಹಣವನ್ನು ಲೂಟಿ ಹೊಡೆಯುವ ಕೆಲಸ ಮಾಡಿಲ್ಲ. ನಿಮ್ಮಂತೆ ಕಮಿಷನ್ ಪಾಂಡೆ ಎಂಬ ಅನ್ವರ್ಥಕ ನಾಮ ಪಡೆದುಕೊಂಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ದೇಶಪಾಂಡೆಯವ್ರು ಉಸ್ತುವಾರಿ ಮಂತ್ರಿಗಳಾ? ಅವರಿಗೆ ದೇಶದ ಬಗ್ಗೆ ಗೌರವ ಇದೆಯಾ? ಪುಲ್ವಾಮಾದಲ್ಲಿ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ ಎರಡೇ ದಿನಕ್ಕೆ ದಾಂಡೇಲಿ ಉತ್ಸವದಲ್ಲಿ ಸಚಿವರು ಪಾಲ್ಗೊಂಡಿದ್ದಾರೆ. ಅಲ್ಲಿ ಮನೋರಂಜನಾ ಕಾರ್ಯಕ್ರಮ ಆಯೋಜಿಸಿದ್ದಾರೆ. ದೇಶಪಾಂಡೆ ಮೇಲೆ ದಾಳಿಗೆ ಸಂಚು ಮಾಡಿದಾಗ ಜಿಲ್ಲೆಯ ತುಂಬಾ ಸುದ್ದಿಗೋಷ್ಠಿ ಮಾಡುವ ಚೇಲಾಗಳು, ಸೈನಿಕರ ಮೇಲೆ ಉಗ್ರರು ದಾಳಿ ಮಾಡಿದಾಗ ಎಲ್ಲಿಗೆ ಹೋಗಿದ್ದರು? ಕಾಂಗ್ರೆಸ್ ನವರು ಎಲ್ಲಿಯಾದರೂ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿದ್ದಿರಾ? ಎಂದು ಸುನೀಲ್ ಹೆಗ್ಡೆ ಪ್ರಶ್ನಿಸಿದ್ದಾರೆ.