10,904 ಕೋಟಿ ರೂ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ನಿತಿನ್ ಗಡ್ಕರಿ
ಕಾರವಾರ, ಡಿಸೆಂಬರ್ 19: ಉತ್ತರ ಕನ್ನಡ ಜಿಲ್ಲೆಯ ಬಹು ನಿರೀಕ್ಷಿತ ಶಿರಸಿ- ಕುಮಟಾ ರಾಜ್ಯ ಹೆದ್ದಾರಿಯನ್ನು 766ಇ ಹಾಗೂ 766ಇಇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಬೇಲೇಕೇರಿ ಬಂದಿನವರೆಗೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಹಾಗೂ ಕುಂದಾಪುರದಿಂದ- ಕಾರವಾರದ ಮಾಜಾಳಿಯವರೆಗಿನ ರಾಷ್ಟ್ರೀಯ ಹೆದ್ದಾರಿ 17ಅನ್ನು ರಾಷ್ಟ್ರೀಯ ಹೆದ್ದಾರಿ 66ರನ್ನಾಗಿ ಪರಿವರ್ತಿಸಿ ಚತುಷ್ಪಥಗೊಳಿಸಿರುವ ಕಾಮಗಾರಿಯನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಲೋಕಾರ್ಪಣೆಗೊಳಿಸಿದರು.
ಸಗಣಿಯಿಂದ ತಯಾರಿಸಿದ ಪೇಂಟ್ ಬಗ್ಗೆ ನಿತಿನ್ ಗಡ್ಕರಿ ಟ್ವೀಟ್
ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ವರ್ಚ್ಯುವಲ್ ಕಾರ್ಯಕ್ರಮದಲ್ಲಿ 440 ಕೋಟಿ ರೂ. ವೆಚ್ಚದ ಶಿರಸಿ- ಕುಮಟಾ- ಬೇಲೇಕೇರಿ ಹೆದ್ದಾರಿ ಕಾಮಗಾರಿ ಸೇರಿದಂತೆ, ರಾಜ್ಯದ ಒಟ್ಟು 10,904 ಕೋಟಿ ರೂ. ವೆಚ್ಚದ 1,197 ಕಿ.ಮೀ. ಉದ್ದದ 33 ಬೃಹತ್ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಕಾರ್ಯಕ್ರಮವನ್ನು ಸಚಿವ ಗಡ್ಕರಿ ನೆರವೇರಿಸಿದರು.
2 ವರ್ಷಗಳಲ್ಲಿ ಹೆದ್ದಾರಿಗಳು ಟೋಲ್ ಪ್ಲಾಜಾ ಮುಕ್ತ: ಜಿಪಿಎಸ್ ವ್ಯವಸ್ಥೆಗೆ ಮುಂದಾದ ಸರ್ಕಾರ
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ನಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ, ಐಆರ್ ಬಿ ಕಂಪೆನಿಗಳ ಅಧಿಕಾರಿಗಳು ಭಾಗವಹಿಸಿದರು.
ಕಳೆದ 6 ವರ್ಷಗಳಲ್ಲಿ ಹೆದ್ದಾರಿ ಅಭಿವೃದ್ಧಿಗೆ 45,000 ಕೋಟಿ
ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕರ್ನಾಟಕ ರಾಜ್ಯ ವ್ಯಾಪ್ತಿಯ 7,652 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ಪೈಕಿ 3,528 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು 4,124 ಕಿ.ಮೀ ರಾಜ್ಯ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿದೆ. ರಾಜ್ಯದಲ್ಲಿ ಕಳೆದ ಆರು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಚಿವಾಲಯ 45,000 ಕೋಟಿ ಖರ್ಚು ಮಾಡಿದೆ. 2,400 ಕಿ.ಮೀ ಉದ್ದದ 37,400 ಕೋಟಿ ವೆಚ್ಚದ 71 ಯೋಜನೆಗಳು ಪ್ರಗತಿಯಲ್ಲಿವೆ. 1,100 ಕೋಟಿ ರೂಪಾಯಿ ವೆಚ್ಚದ 39 ಯೋಜನೆಗಳನ್ನು ಮಂಜೂರಿಸಲಾಗಿದ್ದು, 645 ಕಿ.ಮೀ. ಉದ್ದವನ್ನು ಇದು ಹೊಂದಿದೆ ಎಂದು ಹೇಳಿದರು.
69 ಯೋಜನೆಗಳ ಜಾರಿಗೆ ನಿರ್ಧಾರ
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 3213 ಕಿ.ಮೀ. ಉದ್ದದ 68 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 69 ಯೋಜನೆಗಳನ್ನು ಜಾರಿಗೆ ತರಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ರಾಜ್ಯ ಸರ್ಕಾರಿ ರಸ್ತೆಗಳ ಸುಧಾರಣೆ ಮತ್ತು ಅಭಿವೃದ್ಧಿಗಾಗಿ, ಕರ್ನಾಟಕಕ್ಕೆ ಕಳೆದ ಆರು ವರ್ಷಗಳಲ್ಲಿ ಸಚಿವಾಲಯವು 5800 ಕೋಟಿ ವೆಚ್ಚದ 864 ಕಾಮಗಾರಿಗಳನ್ನು ಮತ್ತು ಕೇಂದ್ರೀಯ ಮೂಲಸೌಕರ್ಯ ನಿಧಿಯನ್ನು ಮಂಜೂರು ಮಾಡಿದೆ ಎಂದು ಹೇಳಿದರು.
"ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ"
ಚಿತ್ರದುರ್ಗದಿಂದ ಶಿವಮೊಗ್ಗ ರಸ್ತೆಯ ಅಭಿವೃದ್ಧಿ ಮತ್ತು ಶಿವಮೊಗ್ಗ ನಗರದ ನಿರ್ಮಾಣ, ಕುಲೂರ್ ಬಳಿಯ ಫಾಲ್ಗುಣೆ ನದಿಗೆ ಅಡ್ಡಲಾಗಿ ಎನ್ಎಚ್ 66ರಲ್ಲಿ ಸುಮಾರು 1 ಕಿ.ಮೀ ಉದ್ದದ 6 ಪಥದ ಸೇತುವೆ, ಗೋವಾ ಗಡಿಯಿಂದ ಕೇರಳ ಗಡಿಯವರೆಗಿನ ಕರಾವಳಿ ರಸ್ತೆಗಳ ಚತುಷ್ಪಥ, 11,000 ಕೋಟಿ ರೂ.ಗಳ ಮಹತ್ವಾಕಾಂಕ್ಷೆಯಡಿಯಲ್ಲಿ ಕೈಗೊಳ್ಳಲಿರುವ ಕೆಲವು ಯೋಜನೆಗಳು ಕಾರವಾರ ಮತ್ತು ಮಂಗಳೂರು ಬಂದರು ನಗರಗಳನ್ನು ಸಂಪರ್ಕಿಸಲು ಸಹಕಾರಿಯಾಗಿವೆ. ಇದು ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಹೇಳಿದರು.
"ಸಕ್ಕರೆ ಉತ್ಪಾದನೆ ಕಡಿಮೆ ಮಾಡುವ ಅನಿವಾರ್ಯ"
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರೂ ಆಗಿರುವ ಗಡ್ಕರಿ, ಕಬ್ಬನ್ನು ಎಥೆನಾಲ್ ಆಗಿ ಪರಿವರ್ತಿಸುವ ನವೀನ ಕಾರ್ಖಾನೆಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರವನ್ನು ಕೋರಿದರು. ಕಬ್ಬಿನ ಗಿರಣಿಗಳು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸುತ್ತಿವೆ ಮತ್ತು ರೈತರು ಕಬ್ಬಿನಿಂದ ಹೆಚ್ಚೇನು ಸಂಪಾದಿಸುತ್ತಿಲ್ಲ. ಸಕ್ಕರೆ ಉತ್ಪಾದನೆಯನ್ನು ಕಡಿಮೆ ಮಾಡುವ ಅನಿವಾರ್ಯತೆಯ ಸಮಯ ಇದು ಎಂದು ಹೇಳಿದರು.
ಈಗಿರುವ ಎಥೆನಾಲ್ ಆರ್ಥಿಕತೆಯು 20,000 ಕೋಟಿ ರೂ. ಇಂಧನ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಕೃಷಿಯನ್ನು ವೈವಿಧ್ಯಗೊಳಿಸುವುದರಿಂದ ರೈತರಿಗೆ ಹೆಚ್ಚಿನ ಆದಾಯ ಗಳಿಸಲು ಸಹಾಯ ಮಾಡುವುದಲ್ಲದೆ, ಕಚ್ಚಾ ತೈಲ ಆಮದು ಕಡಿಮೆಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾರ್ಯದರ್ಶಿ ವಿ.ಕೆ.ಸಿಂಗ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಇತರರು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದರು.