ಯಾರೋ ಏನೋ ಹೇಳ್ತಾರಂತ ನಾವ್ ತಲೆಕೆಡಿಸಿಕೊಳ್ಳಲ್ಲ: ಗೋವಾ ಸಿಎಂಗೆ ಈಶ್ವರಪ್ಪ ತಿರುಗೇಟು
ಕಾರವಾರ, ಜನವರಿ 30: ಮಹಾದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ ನೀಡಿರುವ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಯಾರೋ ಏನೋ ಹೇಳ್ತಾರೆ ಅಂತಾ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಏಕವಚನದಲ್ಲೇ ಸಾವಂತ್ಗೆ ತಿರುಗೇಟು ನೀಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಡಾ.ಪ್ರಮೋದ್ ಸಾವಂತ್ ಏನು ಬೇಕಾದರೂ ಹೇಳಲಿ. ಮಹಾದಾಯಿ ವಿಚಾರ ತೀರ್ಮಾನಕ್ಕೆ ನ್ಯಾಯಮಂಡಳಿ ಇದೆ. ಪಾಪ್ಯುಲ್ಯಾರಿಟಿಗೋಸ್ಕರ ಯಾರು ಏನು ಬೇಕಾದ್ರು ಹೇಳ್ತಾರೆ, ಯಾವುದೇ ಹೇಳಿಕೆಗೂ ನಾವು ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
ಉದ್ಧವ್ ಹೇಳಿಕೆಯನ್ನುಉಗ್ರವಾಗಿ ಖಂಡಿಸಿದ ಸಚಿವ ಈಶ್ವರಪ್ಪ
ಇವತ್ತು ಗೋವಾ ಮುಖ್ಯಮಂತ್ರಿ, ನಾಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕೊಡ್ತಾರೆ. ಅಂತಹ ಹೇಳಿಕೆಗೆಲ್ಲ ನಾವು ಪ್ರತಿಕ್ರಿಯಿಸಲು ಹೋದ್ರೆ ಕಾಲಹರಣ ಅಷ್ಟೆ. ಮಹಾದಾಯಿ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಮಾನಕ್ಕೆ ತಲೆಬಾಗುತ್ತೇವೆ. ಮಹಾರಾಷ್ಟ್ರದಲ್ಲಿ ಮಹಾಜನ್ ವರದಿಗೂ ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದ್ದಾರೆ.
ಮಹಾದಾಯಿಯಿಂದ ನೀರು ಪಡೆಯಲು ನಾವು ಬೇಕಾದ ಎಲ್ಲವನ್ನೂ ಮಾಡುತ್ತೇವೆ. ಇದು ಗೋವಾದ ಜೀವಸೆಲೆ ಮತ್ತು ಮಹಾದಾಯಿ ನನ್ನ ತಾಯಿಯಂತೆ. ನಾವು ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈ ವಿಷಯದ ಕುರಿತು ಯಾರ ಒತ್ತಡಕ್ಕೂ ಒಳಗಾಗುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಗೋವಾ ವಿಧಾನಸಭೆಯಲ್ಲಿ ಚರ್ಚೆಯ ವೇಳೆ ಹೇಳಿದ್ದರು.