'ಕುಮಾರಸ್ವಾಮಿ ಮನಸ್ಸಲ್ಲೂ ರಾಮ ಮಂದಿರ ಆಗಬೇಕೆಂಬ ಬಯಕೆ ಇದೆ'
ಕಾರವಾರ, ಫೆಬ್ರವರಿ 16: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮನಸ್ಸಿನಲ್ಲಿಯೂ ರಾಮ ಮಂದಿರ ಆಗಬೇಕೆಂಬ ಬಯಕೆ ಇದೆ. ಅವರ ಪಕ್ಷದ ಶಾಸಕರು ಸೇರಿದಂತೆ ಅಲ್ಪಸಂಖ್ಯಾತರೂ ಮಂದಿರ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ. ಕುಮಾರಸ್ವಾಮಿ ಸಹ ಮುಂದೆ ಹಣ ಕೊಡಬಹುದು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ""ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ'' ಎಂದು ಟ್ವೀಟ್ ಮಾಡಿದ್ದರು.
ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಗೆ ಪೇಜಾವರ ಶ್ರೀ ತೀಕ್ಷ್ಣ ಪ್ರತಿಕ್ರಿಯೆ
ಈ ವಿಷಯವಾಗಿ ಕಾರವಾರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ರಾಮಮಂದಿರಕ್ಕೆ ಹಣ ಕೊಡದವರ ಮನೆಯನ್ನು ಗುರುತು ಮಾಡುತ್ತಿದ್ದಾರೆ ಎನ್ನುವುದು ಸುಳ್ಳು. ಕುಮಾರಸ್ವಾಮಿ ರಾಜಕೀಯ ಪ್ರೇರಿತವಾಗಿ, ಆಧಾರವಿಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಮಮಂದಿರ ನಿರ್ಮಾಣದಲ್ಲಿ ಎಲ್ಲೂ ರಾಜಕೀಯ ಬೇಡ ಎಂದು ಹೇಳಿದರು.
ಎಚ್.ಡಿ ಕುಮಾರಸ್ವಾಮಿ ಪಬ್ಲಿಸಿಟಿ ಸಲುವಾಗಿ ಆಧಾರರಹಿತ ಹೇಳಿಕೆ ಕೊಟ್ಟಿದ್ದಾರೆ. ಹಣ ಸಂಗ್ರಹ ಯಾರಿಗೂ ಒತ್ತಾಯ ಹಾಕಿಲ್ಲ ಎಂದ ಶ್ರೀರಾಮುಲು, ನಮ್ಮ ಸರ್ಕಾರದಲ್ಲಿ ಹಿಟ್ಲರ್ ಆಡಳಿತ ಇಲ್ಲಿಯವರೆಗೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ ಎಂದರು.