ಕೈಗಾ ಘಟಕ ವಿಸ್ತರಣೆ ವಿರೋಧಿಸಿ ಬೃಹತ್ ಜನಜಾಗೃತಿ ಸಮಾವೇಶ
ಕಾರವಾರ, ನವೆಂಬರ್ 14: ಕೈಗಾ ಅಣು ವಿದ್ಯುತ್ ಸ್ಥಾವರದ 5 ಹಾಗೂ 6ನೇ ಘಟಕ ವಿಸ್ತರಣೆಯನ್ನು ವಿರೋಧಿಸಿ ತಾಲೂಕಿನ ಮಲ್ಲಾಪುರ ಹಿಂದೂವಾಡದ ಕಾಳಿಕಾದೇವಿ ಮೈದಾನದಲ್ಲಿ ನ.17ರ ಮಧ್ಯಾಹ್ನ 2 ಗಂಟೆಗೆ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೈಗಾ ಅಣು ವಿದ್ಯುತ್ ಸ್ಥಾವರದ 5 ಹಾಗೂ 6ನೇ ಘಟಕ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶಾಂತಾ ಬಾಂದೇಕರ ತಿಳಿಸಿದರು.
ಕೈಗಾದಲ್ಲಿ 5, 6ನೇ ಘಟಕ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭಾರತೀಯ ಅಣು ವಿದ್ಯುತ್ ಇಲಾಖೆ ಕೈಗಾದಲ್ಲಿ 5 ಹಾಗೂ 6ನೇ ಘಟಕಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪರವಾನಗಿ ನೀಡಿರುವುದು ದುರದೃಷ್ಟ. ಕೈಗಾ ಅಣು ವಿದ್ಯುತ್ ಸ್ಥಾವರದ ವಿರುದ್ಧ 1986ರಿಂದ ಅನೇಕ ಹೋರಾಟಗಳು, ಪ್ರತಿಭಟನೆಗಳು ನಡೆದಿವೆ" ಎಂದರು.
"2000ನೇ ಇಸವಿಯಲ್ಲಿ ಅಂದಿನ ಪ್ರಧಾನ ಮಂತ್ರಿಯಾದ ದಿ.ಅಟಲ್ ಬಿಹಾರಿ ವಾಜಪೇಯಿಯವರು 2ನೇ ಘಟಕವನ್ನು ದೇಶಕ್ಕೆ ಸಮರ್ಪಣೆ ಮಾಡಿದರು. ಅಂದಿನಿಂದ ಕ್ರಮೇಣ ಕೈಗಾ ಅಣು ವಿದ್ಯುತ್ ಯೋಜನೆ ಆಸುಪಾಸಿನ ತಾಲೂಕುಗಳಾದ ಕಾರವಾರ, ಅಂಕೋಲಾ, ಯಲ್ಲಾಪುರ ಹಾಗೂ ಜೊಯಿಡಾದ ಅನೇಕ ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಕ್ಯಾನ್ಸರ್ ಹಾಗೂ ಮೂತ್ರಪಿಂಡ ವೈಫಲ್ಯದಂಥ ಭೀಕರ ಕಾಯಿಲೆಗಳು ಕಾಣಿಸಿಕೊಂಡಿವೆ. ಇದು ಆತಂಕದ ವಿಷಯವಾಗಿದೆ. ಹೀಗಾಗಿ ಅಣು ವಿಕಿರಣದಿಂದ ಜಿಲ್ಲೆಯ ಪರಿಸರವನ್ನು ರಕ್ಷಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಸಾರ್ವಜನಿಕರು, ಪರಿಸರವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು' ಎಂದು ಮನವಿ ಮಾಡಿಕೊಂಡರು.
ಜಾಗೃತಿ ಸಮಾವೇಶದಲ್ಲಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳು, ಶಿರಸಿ ಸೋಂದಾ ಮಠದ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳು, ಸೋದೆ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸೋಂದಾ ಜೈನಮಠದ ಭಟ್ಟಕಳಂಕ ಭಟ್ಟಾರಕ ಪಟ್ಟಾಚಾರ್ಯ ಮಹಾ ಸ್ವಾಮೀಜಿ, ಶ್ರೀರಾಮಕೃಷ್ಣಾಶ್ರಮದ ಭಾವೇಶಾನಂದ ಸ್ವಾಮಿಗಳು ಭಾಗವಹಿಸುವುದಾಗಿ ತಿಳಿಸಿದರು.
ಹೊಸ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಪ್ರಕ್ರಿಯೆ ಆರಂಭ
ವಿಷಯ ತಜ್ಞರಾಗಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಿ.ವಿಷ್ಣು ಕಾಮತ್, ವಿಜ್ಞಾನ ಲೇಖಕ ನಾಗೇಶ ಹೆಗಡೆ, ಅಣು ವಿದ್ಯುತ್ ತಜ್ಞ ವೈ.ಬಿ.ರಾಮಕೃಷ್ಣ, ಭಾರತೀಯ ವಿಜ್ಞಾನ ಮಂದಿರದ ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ, ಇಂಧನ ತಜ್ಞ ಶಂಕರ ಶರ್ಮಾ, ಅರ್ಥ ಶಾಸ್ತ್ರಜ್ಞ ಬಿ.ಎಂ.ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ, ಜಿಲ್ಲೆಯ ಪಕ್ಷಾತೀತ ಜನಪ್ರತಿನಿಧಿಗಳು, ವಿಜ್ಞಾನಿಗಳು, ಪರಿಸರ ಕಾರ್ಯಕರ್ತರು, ಸಂಘಸಂಸ್ಥೆಗಳ ಸಹಯೋಗಳೊಂದಿಗೆ ಜಾಗೃತಿ ಸಮಾವೇಶ ನಡೆಯಲಿದೆ.