ಚಿತ್ರಗಳು; ಮಾರುತಿ ದೇವರ ಜಾತ್ರೆ, ರಂಗೋಲಿಗಳ ಕಾರುಬಾರು
ಕಾರವಾರ, ಜನವರಿ 12: ವಿವಿಧ ಊರುಗಳಲ್ಲಿ ನಡೆಯುವ ಜಾತ್ರೆಯಲ್ಲಿ ಹಲವಾರು ವಿಶೇಷತೆಗಳು ಅಡಗಿವೆ. ಕಾರವಾರ ನಗರದ ಮಾರುತಿಗಲ್ಲಿಯ ಮಾರುತಿ ದೇವರ ಜಾತ್ರೆ ಉಳಿದೆಲ್ಲ ಜಾತ್ರೆಗಿಂತ ವಿಭಿನ್ನವಾಗಿದ್ದು, ಅದ್ಧೂರಿಯಾಗಿ ನಡೆಯುತ್ತದೆ.
ಮಾರುತಿ ದೇವರ ಜಾತ್ರೆಯ ಅಂಗವಾಗಿ ಸೋಮವಾರ ರಾತ್ರಿ ನಡೆದ ರಂಗೋಲಿ ಸ್ಪರ್ಧೆ ಹಾಗೂ ಪ್ರದರ್ಶನ ಜನರ ಗಮನವನ್ನು ಸೆಳೆಯಿತು. ಈ ಜಾತ್ರೆಯು 'ರಂಗೋಲಿ ಜಾತ್ರೆ' ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ.
ಕಾರವಾರ; ಕಡಲತೀರದ ಕಾಮಗಾರಿ ಬಗ್ಗೆ ಶಾಸಕಿ ಯು-ಟರ್ನ್!
ದೇವರ ಪೂಜೆ ವಿಧಿವಿಧಾನಗಳು ಉಳಿದ ಜಾತ್ರೆಗಳಂತಿದ್ದರೂ ಇಲ್ಲಿ ರಂಗೋಲಿಗಳದ್ದೇ ಕಾರುಬಾರು. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಇದನ್ನು ರಂಗೋಲಿ ಜಾತ್ರೆ ಎಂದೇ ಕರೆಯುತ್ತಾರೆ. ವಿವಿಧ ರೀತಿಯ ರಂಗೋಲಿಗಳು ಜನರನ್ನು ಸೆಳೆಯುತ್ತವೆ.
ಈ ಗಜಗಾತ್ರದ ರಂಗೋಲಿ ಬರೆಯಲು ಬೇಕಾಗಿದ್ದು 3 ದಿನ, 12 ಜನ!
ಇತ್ತೇಚೆಗೆ ಮೃತಪಟ್ಟ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ, ನಟ ಸುಶಾಂತ್ ಸಿಂಗ್ ರಜಪೂತ್ ರಂಗೋಲಿಯಲ್ಲಿ ರೂಪ ಪಡೆದುಕೊಂಡಿದ್ದಾರೆ. ಕೆಜಿಎಫ್- 2 ಚಿತ್ರದ ಯಶ್ ಸ್ಟಿಲ್ಸ್, ಧಾರಾವಾಹಿಗಳಾದ ರಾಧಾ- ಕೃಷ್ಣ, ಮಹಾನಾಯಕದ ರಂಗೋಲಿಗಳು ಇಲ್ಲಿವೆ.
ಕಸ ಹಾಕೋ ಜಾಗದಲ್ಲಿ ರಂಗೋಲಿ ಬಿಡಿಸಿ ಗಾಂಧಿಗಿರಿ ತೋರಿದ ಪೌರಕಾರ್ಮಿಕರು
ದಶಕಗಳ ಇತಿಹಾಸ
ಈ ರಂಗೋಲಿಯ ಜಾತ್ರೆ ಇಂದು ನಿನ್ನೆಯದಲ್ಲ. ನಾಲ್ಕು ದಶಕಗಳ ಇತಿಹಾಸವಿದೆ. ವರ್ಷದಿಂದ ವರ್ಷಕ್ಕೆ ಇದು ತನ್ನ ಪ್ರಚಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಜಾತ್ರೆಯ ಮೊದಲ ದಿನ ವಿವಿಧ ಕಲಾವಿದರ ಕೈಯಲ್ಲಿ ಅರಳುವ ಹಲವು ರೀತಿಯ ವೈವಿಧ್ಯಮಯವಾದ ಕಲಾಕೃತಿಗಳ ವೀಕ್ಷಣೆಗೆ ಇಲ್ಲಿ ಜನರ ನೂಕು ನುಗ್ಗಲು ನಡೆಯುತ್ತದೆ. ಈ ಬಾರಿ ಕೋವಿಡ್ ಕಾರಣದಿಂದ ರಂಗೋಲಿಗಳ ಸಂಖ್ಯೆ ಕಡಿಮೆಯಾದರೂ, ವೀಕ್ಷಕ ಜನರ ಸಂಖ್ಯೆಯಲ್ಲಿ ಅಷ್ಟೇನು ಇಳಿಕೆ ಕಂಡುಬಂದಿಲ್ಲ.
ದೀಪಾಲಂಕಾರಗಳ ಶೃಂಗಾರ
ನಗರದ ಮಾರುತಿಗಲ್ಲಿ, ಬ್ರಾಹ್ಮಣಗಲ್ಲಿ, ಹೆಸ್ಕಾಂ ರಸ್ತೆ ಹಾಗೂ ಸಬನೀಸ ಛಾಳಗಳ ರಸ್ತೆಗಳು ವಾಹನ ಓಡಾಟದಿಂದ ಮುಕ್ತಗೊಂಡು ಜನರ ಓಡಾಟದಿಂದ ತುಂಬಿತ್ತು. ಸಂಜೆಯಾಗುತ್ತಿದ್ದಂತೆ ಈ ರಸ್ತೆಗಳ ಎಡುಬದಿಯಲ್ಲಿರುವ ಮನೆಗಳು ದೀಪಾಲಂಕಾರದಿಂದ ಶೃಂಗಾರಗೊಂಡವು. ಮನೆಯ ಮುಂದೆ ಬಣ್ಣ ಬಣ್ಣದ ಹಿಟ್ಟಿನಿಂದ ಕಲಾವಿದರ ಕಲ್ಪನೆಗೆ ತಕ್ಕಂತೆ ಕಲಾಕೃತಿಗಳು ಅರಳಿ ನಿಂತವು. ಇದರ ಜೊತೆಗೆ ಮಾರುತಿ ದೇವರ ಹರಕೆ ಪೂಜೆ ಸಲ್ಲಿಕೆ ಇನ್ನೊಂದು ಕಡೆಯಿಂದ ಮುಂದುರಿಯಿತು.
ಸಾಂಪ್ರದಾಯಿಕ ಶೈಲಿಯ ರಂಗೋಳಿ
ಏಕದಳ-ದ್ವಿದಳ ಧಾನ್ಯಗಳು, ಹೂವು-ಎಲೆಗಳು, ಹಣ್ಣು-ತರಕಾರಿಗಳಿಂದ ಮತ್ತು ಬಣ್ಣ ಬಣ್ಣದ ಪುಡಿಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಶೈಲಿಯ ಚುಕ್ಕಿ ರಂಗೋಲಿಯಿಂದ ಹಿಡಿದು ಕಲಾಕೃತಿಗಳು, ವ್ಯಕ್ತಿ ಚಿತ್ರಣಗಳು, ಪ್ರಸ್ತುತ ವಿದ್ಯಮಾನದಲ್ಲಿರುವ ಚಿತ್ರನಟರುಗಳು, ರಾಜಕೀಯ ವ್ಯಕ್ತಿಗಳು, ದೇವರ ಕಲಾಕೃತಿಗಳು ಕಲಾಕಾರರ ಕಲ್ಪನೆಯಲ್ಲಿ ಮೂಡಿದ್ದವು.
ಕೋವಿಡ್ ವಾರಿಯರ್ಸ್ ಗೆ ಅರ್ಪಣೆ
ಈ ಬಾರಿ ಕೋವಿಡ್ ವಾರಿಯರ್ಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಂಗೋಲಿಯಲ್ಲಿ ಚಿತ್ರಿಸಲಾಗಿತ್ತು. ಆ ಮೂಲಕ ವಾರಿಯರ್ಸ್ ಗಳಾದ ವೈದ್ಯರು- ದಾದಿಯರು, ಪೊಲೀಸರು, ಪೌರಕಾರ್ಮಿಕರಿಗೆ ಗೌರವ ಸಲ್ಲಿಸಲಾಗಿದೆ. ಅಲ್ಲದೆ, ನಗರದಲ್ಲಿ ನಾಲ್ಕೈದು ದಶಕಗಳಿಂದ ನಳ ದುರಸ್ತಿ ಕಾರ್ಯ ಮಾಡುತ್ತಿರುವ ಚೀಪಾ ಗೌಡ ಅವರನ್ನು ರಂಗೋಲಿಯಲ್ಲಿ ಬಿಡಿಸಿರುವುದು ಆಕರ್ಷಣೀಯವಾಗಿದೆ.
ರಂಗೋಲಿಯಲ್ಲಿ ಗಣ್ಯರು
ಎಸ್. ಪಿ. ಬಾಲಸುಬ್ರಹ್ಮಣ್ಯಂ, ಸುಶಾಂತ್ ಸಿಂಗ್ ರಜಪೂತ್, ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್- 2 ಚಿತ್ರದ ಯಶ್ ಸ್ಟಿಲ್ಸ್, ಧಾರಾವಾಹಿಗಳಾದ ರಾಧಾ- ಕೃಷ್ಣ, ಮಹಾನಾಯಕದ ರಂಗೋಲಿಗಳು ಗಮನ ಸೆಳೆದವು. ರಂಗೋಲಿ ನೋಡಬಂದವರು ಮೊಬೈಲ್ ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡುಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಕಲಾವಿದರ ಕಲೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.