ಭಟ್ಕಳ:ನೆರೆ ಹಾನಿ ವಸ್ತುಗಳು ಅಲ್ಪ ಬೆಲೆಗೆ ಮಾರಾಟ; ಖರೀದಿಗೆ ಮುಗಿಬಿದ್ದ ಜನ!
ಕಾರವಾರ, ಆಗಸ್ಟ್ 6: ಒಂದೇ ದಿನ ಸುರಿದ ಭೀಕರ ಮಳೆಗೆ ಜೀವ ಹಾನಿ ಜೊತೆಗೆ ಸಾಕಷ್ಟು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಇದೀಗ ಯಥಾಸ್ಥಿತಿಗೆ ಮರಳುತ್ತಿದೆ. ಆದರೆ ಅಂಗಡಿ ಮುಂಗಟ್ಟುಗಳಲ್ಲಿ ನೀರು ನುಗ್ಗಿ ನಷ್ಟಕ್ಕೊಳಗಾಗಿರುವ ವ್ಯಾಪಾರಸ್ತರು ಇದೀಗ ಕೆಲವು ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು ಜನ ಮುಗ್ಗಿ ಬಿದ್ದು ಖರೀದಿ ಮಾಡತೊಡಗಿದ್ದಾರೆ.
ಹೌದು, ಭಟ್ಕಳದಲ್ಲಿ ಆಗಸ್ಟ್ 1 ರ ತಡರಾತ್ರಿ ಏಕಾಏಕಿ ಸುರಿದ ರಣಭೀಕರ ಮಳೆಗೆ ಮಿನಿ ದುಬೈ ಖ್ಯಾತಿಯ ಭಟ್ಕಳ ದಿನ ಬೆಳಗಾಗುವುದರೊಳಗೆ ಮುಳುಗಡೆಯಾಗುವಂತಾಗಿತ್ತು. ಭಟ್ಕಳ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಆ ದಿನ 335 ಮಿ.ಮೀ ಮಳೆಯಾದ ಕಾರಣ ಈ ಹಿಂದೆಂದೂ ಕಂಡರಿಯದ ಪ್ರವಾಹ ಸೃಷ್ಟಿಯಾಗಿತ್ತು. ಕೆಲವು ಕಡೆ ಗುಡ್ಡ ಕುಸಿದು ನಾಲ್ವರು ಧಾರುಣವಾಗಿ ಸಾವನ್ನಪ್ಪಿದ್ದರು.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ನೂರಾರು ಮನೆಗಳು, ಅಂಗಡಿ ಮುಂಗಟ್ಟಗಳು ಮುಳುಗಡೆಯಾಗಿದ್ದವು. ಪಟ್ಟಣ ಪ್ರದೇಶದ ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿದು ಅಂಗಡಿ ಮುಂಗಟ್ಟುಗಳು ಕಾಣದಂತಾಗಿತ್ತು. ಆದರೆ ಇದೀಗ ನೆರೆ ಸಂಪೂರ್ಣ ಇಳಿಕೆಯಾಗಿದ್ದು ಭಟ್ಕಳ ಯಥಾಸ್ಥಿತಿಗೆ ಮರಳುತ್ತಿದೆ.
ಅತೀ ಕಡಿಮೆ ಬೆಲೆಗೆ ಬಟ್ಟೆ, ಬ್ಯಾಗ್, ಚಪ್ಪಲಿಗಳ ಮಾರಾಟ
ಆದರೆ ಮಿನಿ ದುಬೈ ಖ್ಯಾತಿಯ ಭಟ್ಕಳದಲ್ಲಿನ ನೂರಾರು ಅಂಗಡಿಗಳಿಗೆ ಏಕಾಏಕಿ ನುಗ್ಗಿದ ನೀರಿನಿಂದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಒಂದಿಂಚು ಜಾಗವಿಲ್ಲದಂತೆ ಗಲ್ಲಿ ಗಲ್ಲಿಗಳಲ್ಲಿಯೂ ಇರುವ ಅಂಗಡಿಗಳಲ್ಲಿನ ಬಟ್ಟೆ, ತಿಂಡಿ, ಕಿರಾಣಿ ವಸ್ತುಗಳು, ಚಪ್ಪಲ್, ಬ್ಯಾಗ್ ಹೀಗೆ ಎಲ್ಲ ವಸ್ತುಗಳು ನೀರಿನಲ್ಲಿ ಮುಳುಗಿದ್ದ ಕಾರಣ ಇದೀಗ ಸ್ವಚ್ಛಗೊಳಿಸಲಾಗುತ್ತಿದೆ.
ಅಲ್ಲದೆ ಹೀಗೆ ಸ್ವಚ್ಚಗೊಳಿಸಿದ ಅಂಗಡಿಗಳಲ್ಲಿ ಕೆಲ ವಸ್ತುಗಳು ಬಳಕೆ ಬಾರದಂತಾಗಿದ್ದು ಎಸೆಯಲಾಗುತ್ತಿದೆ. ಆದರೆ ಇನ್ನು ಬಟ್ಟೆ, ಚಪ್ಪಲ್, ಬ್ಯಾಗ್, ಸೇರಿದಂತೆ ಇತರೆ ವಸ್ತುಗಳು ನೀರಿನಲ್ಲಿ ನೆನದು ಮರು ಮಾರಾಟಕ್ಕೆ ಸಾಧ್ಯವಿಲ್ಲದ ಕಾರಣ ವ್ಯಾಪಾರಸ್ಥರು ಇದೀಗ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ವಸ್ತುಗಳು ಸಿಗುವುದರಿಂದ ಜನ ಕೂಡ ಮುಗ್ಗಿ ಬಿದ್ದು ಕೊಂಡುಕೊಳ್ಳುತ್ತಿದ್ದಾರೆ.
ಬಹುತೇಕ ವಾಣಿಜ್ಯ ಮಳಿಗೆಗಳಿಗೆ ವಿಮೆಯಿಲ್ಲ
ಇನ್ನು ಭಟ್ಕಳದಲ್ಲಿ ಭಾರಿ ಮಳೆಗೆ ನೂರಾರು ಮನೆಗಳು ಮುಳುಗಡೆಯಾಗಿ ಕೊಂಟ್ಯಾಂತರ ರೂ ಹಾನಿಯಾಗಿದೆ. ಆದರೆ ಈ ಮನೆಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡುತ್ತದೆ. ಆದರೆ ಅಂಗಡಿ ಮುಂಗಟ್ಟುಗಳಿಗೆ ವಿಮೆ ಮಾಡಿಸಿದಲ್ಲಿ ಮಾತ್ರ ಅವರಿಗೆ ಪರಿಹಾರ ನೀಡಲಾಗುತ್ತದೆ. ಆದರೆ ಭಟ್ಕಳದಲ್ಲಿ ಬಹುತೇಕ ವಾಣಿಜ್ಯ ಮಳಿಗೆಗಳಲ್ಲಿ ವಿಮೆ ಮಾಡಿಸಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ನೆರೆ ನೀರಿನಿಂದ ಬಟ್ಟೆ, ಬುಕ್ ಸ್ಟಾಲ್, ಮೊಬೈಲ್ ಶಾಪ್ ಹೀಗೆ ಹಲವು ಮಳಿಗೆಗಳಲ್ಲಿ ವಸ್ತುಗಳನ್ನು ಮರಳಿ ಮಾರಾಟ ಮಾಡಲು ಸಾಧ್ಯವಿಲ್ಲದ ಕಾರಣ ವಸ್ತುಗಳನ್ನು ಅರ್ಧಕ್ಕಿಂತ ಕಮ್ಮಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಸದ್ಯ ಮುಖ್ಯಂಮತ್ರಿಗಳು ಅಂಗಡಿ ಮುಂಗಟ್ಟುಗಳಿಗೂ ಪರಿಹಾರ ನೀಡುವುದಾಗಿ ತಿಳಿಸಿದ್ದರಾದರೂ ನೀರಿನಲ್ಲಿ ಮುಳುಗಿದ ವಸ್ತುಗಳು ಮರು ಮಾರಾಟಕ್ಕೆ ಸಾಧ್ಯವಿಲ್ಲದ ಕಾರಣ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಕೆಲವು ಹಾಗೆಯೇ ಎಸೆಯುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಸ್ಥ ಜಮೀರ್ ಮಾರಾಟಗಾರ.
ಮತ್ತೆ ಗುಡ್ಡ ಕುಸಿತ
ಭಟ್ಕಳದ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿಯಲಾರಂಭಿಸಿದ್ದು ಆತಂಕ ಶುರುವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸುರಿದಿದ್ದ ಧಾರಾಕಾರ ಮಳೆಯಿಂದಾಗಿ ಗ್ರಾಮದಲ್ಲಿ ಗುಡ್ಡ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಮತ್ತೆ ಅದೇ ಪ್ರದೇಶದಲ್ಲಿ ಗುಡ್ಡ ಕುಸಿದಿದ್ದು ಸುತ್ತಲಿನ ಮನೆಗಳಲ್ಲಿನ ಜನರನ್ನು ಸ್ಥಳೀಯ ಆಡಳಿತ ಬೇರೆಡೆಗೆ ಸ್ಥಳಾಂತರ ಮಾಡಿದೆ.
ಸಂಚಾರಕ್ಕೆ ಪರ್ಯಾಯ ಮಾರ್ಗ
ಮಳೆ ಕೂಡ ಸಣ್ಣದಾಗಿ ಸುರಿಯುತ್ತಿರುವ ಹಿನ್ನಲೆಯಲ್ಲಿ ಗುಡ್ಡ ಕುಸಿತವಾಗುವ ಆತಂಕ ಶುರುವಾಗಿದ್ದು, ಹತ್ತಕ್ಕೂ ಅಧಿಕ ಮನೆಗಳ ಜನರು ಇದೀಗ ತಮ್ಮ ಮನೆಗಳನ್ನು ತೊರೆದಿದ್ದಾರೆ. ಮನೆ ತೊರೆಯದಿರುವವರಿಗೆ ನೋಟಿಸ್ ನೀಡಲಾಗಿದೆ. ಇನ್ನು ಗುಡ್ಡ ಕುಸಿತದಿಂದಾಗಿ ಮೇಲ್ಭಾಗದಲ್ಲಿದ್ದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಈ ಭಾಗದ ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ಬದಲಿಸಲಾಗಿದೆ ಸಬ್ಬತ್ತೆ, ಗೆಂಡೆಮೂಲೆ ಗ್ರಾಮಕ್ಕೆ ತೆರಳುತ್ತಿದ್ದವರಿಗೆ ರೈಲ್ವೇ ಬ್ರಿಡ್ಜ್ ಪಕ್ಕದ ರಸ್ತೆ ಮೂಲಕ ಸಂಚರಿಸುವಂತೆ ಸೂಚನೆ ನೀಡಲಾಗಿದೆ.
ಒಟ್ಟಿನಲ್ಲಿ ಏಕಾಏಕಿ ಸುರಿದ ಭಾರಿ ಮಳೆಯಿಂದ ಮಳಿಗೆಗಳಿಗೆ ನೀರು ನುಗ್ಗಿ ಹಾನಿಗೊಳಗಾಗಿದ್ದ ವ್ಯಾಪಾರಸ್ಥರು ಇದೀಗ ವಸ್ತುಗಳನ್ನು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದರೇ ಮತ್ತೊಂದೆಡೆ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿತವಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.