ಕಾರವಾರ ಕಡಲಲ್ಲಿ ನೀಲಿ ಬೆಳಕು; ವಿಸ್ಮಯವೋ, ಕಂಟಕವೋ?
ಕಾರವಾರ, ಮಾರ್ಚ್ 13: ಗೋವಾ ಗಡಿಗೆ ಆತುಕೊಂಡಿರುವ ಇಲ್ಲಿನ ಮಾಜಾಳಿ ಕಡಲ ತೀರವು ಕಳೆದ ಕೆಲವು ದಿನಗಳಿಂದ ರಾತ್ರಿ ಹೊತ್ತು ನೀಲಿ ಮಿಂಚಿನಂತೆ ಹೊಳೆಯುತ್ತಿದ್ದು, ವಿಸ್ಮಯ ಮೂಡಿಸಿದೆ. ಕಡಲಿನ ಅಲೆಗಳಲ್ಲಿ ಹೊಳೆಯುತ್ತಿರುವ ಈ ನೀಲಿ ಬೆಳಕು ಜನರಲ್ಲಿ ಕುತೂಹಲ ಮೂಡಿಸಿದೆ.
ಮಾಜಾಳಿಯ ಅರಬ್ಬೀ ಸಮುದ್ರದಿಂದ ಕಪ್ಪು ಮರಳಿನ ತೀರ ತೀಳ್ ಮಾತಿಯವರೆಗೆ ಈ ರೀತಿಯ ನೀಲಿ ಬೆಳಕು ಕಡಲಿನಲ್ಲಿ ಗೋಚರಿಸುತ್ತಿದೆ. ಈ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ತೆರಳಿದ್ದ ವೇಳೆ ಇದು ಗಮನಕ್ಕೆ ಬಂದಿದೆ. ಸಮುದ್ರದಲ್ಲಿ ಆಗುತ್ತಿರುವ ಈ ಬೆಳವಣಿಗೆ ಕಂಡ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಯಾವುದರ ಸೂಚನೆ ಎಂದು ಯೋಚಿಸುತ್ತಿದ್ದಾರೆ. ಇದು ಪ್ರಾಕೃತಿಕ ಸಹಜ ಪ್ರಕ್ರಿಯೆ ಎಂಬುದು ತಜ್ಞರ ಆಭಿಪ್ರಾಯ. ಸಮುದ್ರದಲ್ಲಿ ಆಗುತ್ತಿರುವ ಈ ವಿದ್ಯಮಾನವನ್ನು ಜೈವದೀಪ್ತಿ (Bioluminescence) ಎಂದು ಕರೆಯಲಾಗುತ್ತದೆ. ಇದರ ಕುರಿತ ಇನ್ನಷ್ಟು ವಿವರ ಇಲ್ಲಿದೆ...
ವಿಸ್ಮಯ ಕಡಲು : ನೀಲಿ ಬಣ್ಣ ತುಂಬಿಕೊಂಡು ಹೊಳೆಯುತ್ತಿರಲು ಕಾರಣವೇನು?
ನೀಲಿ ಬೆಳಕಿಗೆ ಕಾರಣವೇನು?
ಕಡಲಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ, 'ಡೈನೋಫ್ಲಾಗೆಲೆಟ್ ನಾಕ್ಟಿಲುಕ ಸಿಂಟಿಲನ್ಸ್' (Dinoflagellate Noctiluca scintillans) ಎಂಬ ಒಂದು ಕೋಶ ಹೊಂದಿರುವ ಪಾಚಿಗಳು (ಆಲ್ಗೆ) ಹೇರಳವಾಗಿ ಬೆಳೆದಿವೆ. ಇವು ಕಾರವಾರದ ಮಾಜಾಳಿ ವ್ಯಾಪ್ತಿಯ ಸುಮಾರು ಎಂಟು ನಾಟಿಕಲ್ ಮೈಲು ದೂರದವರೆಗೆ ಹಬ್ಬಿಕೊಂಡಿವೆ. ಡೈನೋಫ್ಲೆಗೆಲೆಟ್ ಎನ್ನುವ ಒಂದು ವಿಧದ ಪಾಚಿ ಜೀವಿಯ ದೇಹದಲ್ಲಿ ಉತ್ಪಾದಿಸುವ ರಾಸಾಯನಿಕಗಳು ಈ ಬೆಳಕಿಗೆ ಕಾರಣವಾಗಿವೆ. ಇವು ರಾತ್ರಿಯ ವೇಳೆಯಲ್ಲಿ ನೀಲಿಯಾಗಿಯೂ, ಬೆಳಗ್ಗಿನ ಅವಧಿಯಲ್ಲಿ ಹಸಿರಾಗಿಯೂ ಗೋಚರಿಸುತ್ತದೆ' ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡದಲ್ಲಿ ರಾಜ್ಯದ ಮೊದಲ "ಕಡಲ ಧಾಮ"; ಏನಿದರ ವಿಶೇಷ?
ತ್ಯಾಜ್ಯದ ಖನಿಜಾಂಶದಿಂದ ಹೆಚ್ಚಾದ ಪಾಚಿ
ಈ ಪಾಚಿ ಸಮುದ್ರಕ್ಕೆ ಸೇರುವ ತ್ಯಾಜ್ಯಗಳ ಖನಿಜಾಂಶದಿಂದ ಮತ್ತಷ್ಟು ಹೆಚ್ಚು ಬೆಳೆದುಕೊಂಡಿವೆ. ಮಳೆಗಾಲದಲ್ಲಿ ಎಲ್ಲೆಂಲ್ಲಿಮದಲೋ ಹರಿದು ಬರುವ ನೀರಿನ ಜೊತೆಗೇ ಅಪಾರ ಪ್ರಮಾಣದ ಪೋಷಕಾಂಶಗಳೂ ಬಂದಿರುತ್ತವೆ. ಇವುಗಳನ್ನು ಈ ಪಾಚಿಗಳು ಸೇವಿಸುತ್ತವೆ. ಸಹಸ್ರಾರು ಪಾಚಿ ಜೀವಿಗಳು ಒಟ್ಟಾದಾಗ ಈ ಬೆಳಕು ಕಾಣಿಸುತ್ತದೆ. ಇದು ಸೂಕ್ಷ್ಮಾಣು ಜೀವಿಗಳಾದ ಕಾರಣ ಬರಿಗಣ್ಣಿಗೆ ಒಂದೊಂದಾಗಿ ಕಾಣುವುದು ಕಷ್ಟ. ರಾತ್ರಿ ಹೊತ್ತು ಒಟ್ಟಾಗಿ ಸೇರಿದಾಗ ನೀಲಿ ಬೆಳಕಾಗಿ ಹೊಮ್ಮುತ್ತವೆ.
2017ರಲ್ಲೂ ಹೀಗೆ ಆಗಿತ್ತು
ಮಂಗಳೂರಿನಲ್ಲಿ, ಉಡುಪಿ, ಕಾರವಾರದ ಕಡಲತೀರದ ಬಳಿ ಈ ಹಿಂದೆಯೂ ಹೀಗೆ ಪಾಚಿ ಕಾಣಿಸಿಕೊಂಡಿದ್ದವು. '2017ರಲ್ಲೂ ಒಮ್ಮೆ ಈ ಭಾಗದಲ್ಲಿ ಈ ರೀತಿ ಗೋಚರವಾಗಿತ್ತು. ಈ ಪಾಚಿ ತನ್ನಷ್ಟಕ್ಕೇ ತಾನೇ ಬೆಳಗಿಸಿಕೊಳ್ಳುತ್ತದೆ. ಅಪಾರ ಪ್ರಮಾಣದಲ್ಲಿ ಇದು ಬೆಳೆದಾಗ ಅಲೆಗಳ ರೂಪದಲ್ಲಿ ಗೋಚರಿಸುತ್ತದೆ. ಇದು ಸೂಕ್ಷ್ಮ ದರ್ಶಕ ಜೀವಿಯಾಗಿದೆ. ಲ್ಯೂಸಿಫೆರೆನ್ ಎಂಬ ಕಿಣ್ವ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿದಾಗ ಬೆಳಕೊಂದು ಉತ್ಪತ್ತಿಯಾಗುತ್ತದೆ' ಎಂದು ಅಭಿಪ್ರಾಯಪಟ್ಟರು ಡಾ.ಶಿವಕುಮಾರ್ ಹರಗಿ.
ಸ್ಕೂಬಾ ಡೈವ್ ವೇಳೆ ಪತ್ತೆಯಾದ ಬೃಹತ್ ಹಂಪ್ ಬ್ಯಾಕ್ ತಿಮಿಂಗಲ
ಮತ್ಸ್ಯ ಕ್ಷಾಮದ ಸೂಚನೆ?
'ಈ ರೀತಿ ಪದೇಪದೇ ಕಾರವಾರ ಕಡಲತೀರದಲ್ಲಿ ಗೋಚರಿಸುತ್ತಿರುವುದು ಒಳ್ಳೆಯ ಸೂಚನೆಯಲ್ಲ. ಈ ರೀತಿ ಉಂಟಾದರೆ ಆಹಾರ ಸರಪಳಿಗೆ ಧಕ್ಕೆ ಉಂಟಾಗುತ್ತದೆ. ಒಂದೇ ಥರದ ಜೀವಿಗಳು ಹೆಚ್ಚು ಬೆಳೆದಾಗ ಬೇರೆ ಜೀವಿಗಳು ದೂರ ಹೋಗಿ ಬಿಡುತ್ತವೆ. ಇವು ಹೆಚ್ಚಾಗಿ ಬೆಳೆದಾಗ ಸಮುದ್ರದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ' ಎಂದು ತಿಳಿಸಿದರು. ಈ ಪಾಚಿಗಳು ಹೆಚ್ಚು ಬೆಳೆಯುವುದರಿಂದ ಮೀನುಗಳು ದೂರ ಹೋಗುತ್ತವೆ ಎನ್ನಲಾಗಿದೆ. ಹೀಗಾಗಿ ಈ ಪಾಚಿ ಬೆಳೆಯುವುದು ಒಳ್ಳೆ ಬೆಳವಣಿಗೆಯಲ್ಲ. ಇದು ಮತ್ಸ್ಯ ಕ್ಷಾಮದ ಸೂಚನೆ. ಈ ಪಾಚಿ ಆಕ್ಸಿಜನ್ ಹೀರಿಕೊಂಡು ಬೆಳಕನ್ನು ಹೊರಸೂಸುತ್ತದೆ. ತ್ಯಾಜ್ಯ ಹೆಚ್ಚು ಸಮುದ್ರ ಸೇರುವುದರಿಂದ ಹೆಚ್ಚಾಗಿ ಬೆಳೆಯುತ್ತವೆ. ತ್ಯಾಜ್ಯದ ಖನಿಜಾಂಶ ಹಾಗೂ ಸೂರ್ಯನ ಬೆಳಕು ಇವುಗಳು ಬೆಳೆಯಲು ಕಾರಣ. ಮಾಲಿನ್ಯ ಅಧಿಕವಾಗಿರುವು ಇವುಗಳ ಬೆಳವಣಿಗೆಗೆ ಕಾರಣವಾಗಿದೆ.