ಲಾಕ್ಡೌನ್ ಭೀತಿ: ಉತ್ತರ ಕನ್ನಡ ತೊರೆದ ಉತ್ತರ ಕರ್ನಾಟಕದವರು!
ಕಾರವಾರ, ಏಪ್ರಿಲ್ 22: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಪ್ರಾರಂಭಿಸಿದ್ದು, ಇನ್ನು ಲಾಕ್ಡೌನ್ನಿಂದ ಮತ್ತೆ ಸಮಸ್ಯೆ ಎದುರಾಗುತ್ತದೆ ಎಂದು ಕಾರವಾರ ನಗರದಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರು ತಮ್ಮ ತಮ್ಮ ಊರಿನ ದಾರಿ ಹಿಡಿದಿದ್ದಾರೆ.
ನಗರದಲ್ಲಿ ಹಲವು ವರ್ಷಗಳಿಂದ ಉತ್ತರ ಕರ್ನಾಟಕದ ನೂರಾರು ಜನರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಹುತೇಕರು ಗಾರೆ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದು, ಕಳೆದ ಬಾರಿ ಲಾಕ್ಡೌನ್ ಮಾಡಿದ್ದರಿಂದ, ಊರಿಗೂ ತೆರಳಲು ಆಗದೇ ಕೆಲಸವೂ ಇಲ್ಲದೇ ಪರದಾಟ ನಡೆಸಿದ್ದರು.
ಪ್ರತಿನಿತ್ಯ ಕೂಲಿ ಕೆಲಸ ಮಾಡಿ, ದುಡಿದ ಹಣದಲ್ಲಿ ಜೀವನ ಸಾಗಿಸುವ ಕೂಲಿ ಕಾರ್ಮಿಕರಿಗೆ ಕಳೆದ ಬಾರಿ ಲಾಕ್ಡೌನ್ ವೇಳೆಯಲ್ಲಿ ಊಟಕ್ಕೂ ಹಣ ಇಲ್ಲದೇ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರ ನೈಟ್ ಕರ್ಫ್ಯೂ ಪ್ರಾರಂಭಿಸಿದ್ದರಿಂದ ಮತ್ತೆ ಸಂಪೂರ್ಣ ಲಾಕ್ಡೌನ್ ಮಾಡಿ ಕೆಲಸ ಇಲ್ಲದಂತಾಗುತ್ತದೆ ಎಂದು ತಮ್ಮ ತಮ್ಮ ಊರಿನತ್ತ ವಾಹನ ಮಾಡಿಕೊಂಡು ಹೊರಟಿದ್ದಾರೆ.
ಕಾರವಾರ ನಗರದ ಗುನಗಿ ವಾಡದಲ್ಲಿರುವ ಜನರು ಬಾಗಲಕೋಟೆ, ಗದಗ, ಕೊಪ್ಪಳ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿದ್ದು, ಇನ್ನು ಮೂರ್ನಾಲ್ಕು ದಿನದಲ್ಲಿ ಹಲವು ಉತ್ತರ ಕರ್ನಾಟಕ ಮೂಲದ ಕುಟುಂಬಗಳು ವಾಪಸ್ ಊರಿನತ್ತ ತೆರಳಲಿದೆ ಎನ್ನಲಾಗಿದೆ.
Recommended Video