ಭೂ ಅತಿಕ್ರಮಣದ ನೋಟಿಸ್; ದಿಢೀರ್ ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಅಂಕೋಲ, ಅಕ್ಟೋಬರ್ 24; ಸ್ಮಶಾನ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪುರಸಭೆಯಿಂದ ನಿವಾಸಿಗಳಿಗೆ ಖುಲ್ಲಾಪಡಿಸುವ ಕಾರಣ ಕೇಳಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ನಿವಾಸಿಗಳು ಹಗ್ಗ ಮತ್ತು ಸೀಮೆಎಣ್ಣೆ ಕ್ಯಾನುಗಳನ್ನು ಹಿಡಿದು ಆತ್ಮಹತ್ಯೆ ಒಂದೇ ನಮಗೆ ಮುಂದಿನ ದಾರಿ ಎಂದು ಧಿಡೀರ್ ಪ್ರತಿಭಟನೆ ನಡೆಸಿದ ಘಟನೆ ಅಂಕೋಲ ಪಟ್ಟಣದ ಕೋಟೆವಾಡದಲ್ಲಿ ನಡೆದಿದೆ.
ಪ್ರತಿಭಟನೆ ನಡೆಸಿದ ಕೋಟೆವಾಡಾದ ನಿವಾಸಿಗಳು ಸ್ಮಶಾನ ಭೂಮಿ ಸುರಕ್ಷಾ ಸಮಿತಿ ಮತ್ತು ಪುರಸಭೆಯ ವಿರುದ್ಧ ಧಿಕ್ಕಾರ ಕೂಗಿದರು. ಹಿಂದೂ ಸ್ಮಶಾನ ಭೂಮಿ ಸುರಕ್ಷಾ ಸಮಿತಿಯ ಕೋರಿಕೆಯಂತೆ ಸ್ಮಶಾನ ಭೂಮಿಯ ಸರ್ವೆ ಕಾರ್ಯ ನಡೆಸಿದ ತಹಶೀಲ್ದಾರರು ಸ್ಮಶಾನ ಭೂಮಿ 7 ಎಕರೆ 2 ಗುಂಟೆ ಪ್ರದೇಶದ ಪೈಕಿ 34 ಗುಂಟೆಯಷ್ಟು ಅತಿಕ್ರಮಣವಾಗಿರುವದನ್ನು ದೃಢಪಡಿಸಿದ್ದರು ಹಾಗೂ ಅತಿಕ್ರಮಣ ಖುಲ್ಲಾಪಡಿಸುವಂತೆ ಪುರಸಭೆಗೆ ಆದೇಶವನ್ನೂ ನೀಡಿದ್ದರು.
ಅಂಕೋಲ ಬಳಿ ಎರಡು ಕೋಟಿ ಮೌಲ್ಯದ ಬ್ರೌನ್ ಶುಗರ್ ವಶಕ್ಕೆ
ಸ್ಮಶಾನ ಭೂಮಿಯ ಅತಿಕ್ರಮಣ ಖುಲ್ಲಾಪಡಿಸಲು ತಹಶೀಲ್ದಾರ್ ಪತ್ರ ದಿ. 2/6/2021 ಹಾಗೂ 2/9/2021 ಮತ್ತು ಹಿಂದೂ ಸ್ಮಶಾನ ಭೂಮಿ ಸುರಕ್ಷಾ ಸಮಿತಿಯ ಮನವಿ ದಿ. 23/9/2021ಕ್ಕೆ ಸಂಬಂಧಿಸಿದಂತೆ ಪುರಸಭೆಯು ಅಕ್ಟೋಬರ್ 30ರಂದು ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಖುಲ್ಲಾಪಡಿಸುವ ಕಾರಣ ಕೇಳಿ ನೋಟಿಸ್ ನೀಡಿದೆ.
ಅಂಕೋಲ; ಬಾವಿಯಲ್ಲಿ ಪತ್ತೆಯಾಯ್ತು ಪೆಟ್ರೋಲ್
ಪುರಸಭೆಯ ನೋಟಿಸ್ಗೆ ಕಂಗಾಲಾದ ಅಲ್ಲಿನ ನಿವಾಸಿಗಳು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಿನ ನಿವಾಸಿ ಜುಬೇದಾಬಿ ಅಹ್ಮದ ಇಕ್ಬಾಲ್, "ನಾವು 50 ವರ್ಷಗಳಿಂದ ಇಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದೇವೆ. ಆಗ ಸ್ಮಶಾನದಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ ಆಗ ನಾನೇ ನೀರನ್ನು ಒದಗಿಸುತ್ತಿದ್ದೆ. ಸ್ಮಶಾನ ಅಭಿವೃದ್ಧಿ ಮಾಡುವವರು ಆಗ ಎಲ್ಲಿದ್ದರು?" ಎಂದು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ 20 ವರ್ಷಗಳಿಂದ ಕಂಪಿಸುತ್ತಿದೆ ಭೂಮಿ: ಕಾರಣವೇನು?
ಸಚಿನ ನಾಯ್ಕ ಮಾತನಾಡಿ, "50 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ ನಮಗೆ ಜಮೀನಿನ ಪಟ್ಟಾ ನೀಡಿ ರೆಕಾರ್ಡ್ ಸಹ ಆಗಿದೆ. ಪುರಸಭೆಯಿಂದ ಮನೆಗಳಿಗೆ ನಂಬರ್ ನೀಡಲಾಗಿದೆ, ಇದೇ ವಿಳಾಸಕ್ಕೆ ರೇಷನ್ ಕಾರ್ಡ್, ಆಧಾರ ಕಾರ್ಡ್ ಸಹ ಆಗಿದೆ, ಮನೆಗೆ ವಿದ್ಯುತ್ ಸಂಪರ್ಕ, ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ರಸ್ತೆ, ಗಟಾರಗಳನ್ನು ನಿರ್ಮಿಸಲಾಗಿದೆ ಕಾಲಕಾಲಕ್ಕೆ ತೆರಿಗೆಗಳನ್ನು ಕಟ್ಟುತ್ತಿದ್ದೇವೆ. ಹೀಗಿರುವಾಗ ಈಗ ಅತಿಕ್ರಮಣವೆಂದು ಹೇಳಿ ಒಕ್ಕಲೆಬ್ಬಿಸುವುದರ ಹಿಂದೆ ಷಡ್ಯಂತ್ರ ಇದೆ" ಎಂದು ಆರೋಪಿಸಿದರು.
ಸ್ಮಶಾನ ಭೂಮಿ ಸುರಕ್ಷಾ ಸಮಿತಿಯ ಅಧ್ಯಕ್ಷ ಸುರೇಶ ವೆರ್ಣೇಕರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅವರು ತನ್ನ ಊರಿನ ಸ್ಮಶಾನವನ್ನು ಅಭಿವೃದ್ಧಿಪಡಿಸಲಾಗದೆ ನಗರದ ಸ್ಮಶಾನ ಅಭಿವೃದ್ಧಿಯ ನೆಪದಲ್ಲಿ ಸಾಮರಸ್ಯದಿಂದ ಇದ್ದ ಇಲ್ಲಿನ ಜನರಲ್ಲಿ ಕೋಮುಗಲಭೆಗೆ ಪ್ರಚೋದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟು ವರ್ಷ ಸ್ಮಶಾನದ ಅಭಿವೃದ್ಧಿ ಮಾಡದೆ ಈಗ ಅಭಿವೃದ್ಧಿಯ ನೆಪದಲ್ಲಿ ಇಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸುವದು ಅನ್ಯಾಯ ಎಂದರು.
ಸ್ಥಳಕ್ಕಾಗಮಿಸಿದ ಪಿಎಸ್ಐ ಪ್ರೇಮನಗೌಡ ಪಾಟೀಲ, ಪಿಎಸ್ಐ ಪ್ರವೀಣಕುಮಾರ, ಸೀಮೆಎಣ್ಣೆ ಕ್ಯಾನುಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ನ್ಯಾಯ ಕೇಳಲು ಕಾನೂನು ಪ್ರಕಾರ ಹಲವು ಮಾರ್ಗಗಳಿವೆ. ಈ ರೀತಿ ಆವೇಶದಿಂದ ಜೀವಹಾನಿ ಮಾಡಿಕೊಳ್ಳುವದು ಸರಿಯಲ್ಲ ಎಂದು ಬುದ್ಧಿವಾದ ಹೇಳಿ ಮನವೊಲಿಸಿದರು. ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.