‘ಕ್ಯಾರ್’ಗೆ ಕಂಗಾಲಾದ ಕರಾವಳಿ ಜನ; ನಾಳೆವರೆಗೂ ಮುಂದುವರೆಯಲಿದೆ ಗಾಳಿ ಮಳೆ
ಕಾರವಾರ, ಅಕ್ಟೋಬರ್ 26: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ 'ಕ್ಯಾರ್' ಚಂಡಮಾರುತ ಎದ್ದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಭಾರಿ ಗಾಳಿ, ಮಳೆ ಉಂಟಾಗುತ್ತಿದೆ. ಕಡಲಿನಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ತೀರದ ವಾಸಿಗಳು ಕಂಗಾಲಾಗಿದ್ದಾರೆ.
ಕ್ಯಾರ್ ಚಂಡಮಾರುತ; ಅಸ್ತವ್ಯಸ್ತಗೊಂಡ ಮಂಗಳೂರು, ಉಡುಪಿ
ಮುಂದಿನ ನಾಲ್ಕು ದಿನಗಳಲ್ಲಿ 'ಕ್ಯಾರ್' ಮಾರುತವು ಓಮನ್ ಕಡಲ ತೀರದತ್ತ ಚಲಿಸಲಿದ್ದು, ಇದರ ಪರಿಣಾಮವಾಗಿ ಅ.27 ರವರೆಗೂ ಜಿಲ್ಲೆಯಲ್ಲಿ ಇರಲಿದೆ. ಕಡಲಿನಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ನಿರಂತರವಾಗಿ ಗಾಳಿ ಮಳೆ ಸುರಿಯುತ್ತಿದೆ. ಗುರುವಾರ ರಾತ್ರಿಯಂತೂ 'ಕ್ಯಾರ್' ಚಂಡಮಾರುತದ ಅಬ್ಬರ ಜೋರಾಗಿದ್ದು, ಕಡಲತೀರಗಳಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸಿ ಸಾಕಷ್ಟು ಹಾನಿಯುಂಟು ಮಾಡಿವೆ.
ಗಾಳಿಗೆ ಬಿದ್ದ ಕರಾವಳಿ ಸಂಗಮೋತ್ಸವದ ಮಳಿಗೆಗಳು
ರಭಸದ ಗಾಳಿಗೆ ಕಾರವಾರದಲ್ಲಿ 'ಕರಾವಳಿ ಸಂಗಮೋತ್ಸವ'ಕ್ಕೆ ಹಾಕಿದ್ದ ಮಳಿಗೆಗಳು ಕಿತ್ತು ಹೋಗಿವೆ. ಇಲ್ಲಿನ ಪ್ರವಾಸಿ ಮಂದಿರದ ಮೇಲೆಯೂ ಮರ ಬಿದ್ದು ಹಾನಿಯಾಗಿದೆ. ಕುಮಟಾದ ಹಳಕಾರ ತಿರುವಿನಲ್ಲಿಯೂ ಮರ ಬಿದ್ದು 10 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದವು. ಅಂಕೋಲಾದ ಮಠಕೇರಿಯ ಬಳಿ ಮರ ಬಿದ್ದು ಏಳು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಂಕೋಲಾದ ಬೇಲೆಕಾನ್, ಬೇಳಾ ಬಂದರ್ ಜಲಾವೃತಗೊಂಡಿದ್ದು, ತಡದಿ ಬಂದರಿನಲ್ಲೂ ನೀರು ನುಗ್ಗಿ ಮೀನುಗಾರಿಕಾ ಸಲಕರಣೆಗಳು ತೇಲಿ ಹೋಗಿವೆ. ಅಂಕೋಲಾ ತಾಲೂಕಿನ ಕೇಣಿ, ಬೆಳಂಬರ, ಗಾಂವಕರ್ ವಾಡ, ಸೇರಿದಂತೆ ಹಲವು ಗ್ರಾಮದಲ್ಲಿ ಸಹ ನೀರು ತೀರ ಪ್ರದೇಶಕ್ಕೆ ನುಗ್ಗಿ ಹಾನಿಯಾಗಿದೆ. ಶುಕ್ರವಾರ ಮಧ್ಯಾಹ್ನದವರೆಗೂ ರಭಸದ ಗಾಳಿ, ಮಳೆಯಾಗಿದ್ದು, ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೂ ವಿದ್ಯುತ್ ನಿಲುಗಡೆಗೊಂಡಿತ್ತು. ಇದರಿಂದಾಗಿ ಹೋಟೆಲ್ ಸೇರಿದಂತೆ ಹಲವು ಉದ್ಯಮಗಳ ಮೇಲೆ ಹೊಡೆತ ಬಿತ್ತು.
ಕ್ಯಾರ್ ಚಂಡಮಾರುತ; ಉರುಳುತ್ತಿದ್ದ ಪೆಂಡಾಲ್ ನಿಂದ ಪಾರಾದ ಸಾವಿರಾರು ವಿದ್ಯಾರ್ಥಿಗಳು
ಗಂಟೆಗೆ 170ಕಿ.ಮೀ. ತಲುಪಲಿದೆ ಗಾಳಿಯ ವೇಗ
ತೀರಕ್ಕೆ ಅಪ್ಪಳಿಸುತ್ತಿರುವ ರಕ್ಕಸ ಅಲೆಗಳಿಂದ ಭಯಭೀತರಾಗಿರುವ ಕಾರವಾರದ ಮಾಜಾಳಿಯ ದಾಂಡೇಬಾಗ್ ಮೀನುಗಾರರು, ತೀರದಲ್ಲಿದ್ದ ದೋಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಕ್ರೇನ್, ಜೆಸಿಬಿಗಳನ್ನು ಬಳಸಿ ದಡದಿಂದ ದೋಣಿಗಳನ್ನು ಎತ್ತಿ, ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡಿದರು. 'ಈಗಾಗಲೇ ಸಾಕಷ್ಟು ದೋಣಿಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಹಾನಿಯಾಗಿವೆ. ಕಳೆದ ಮೂರು ದಶಕಗಳಲ್ಲಿ ಇಂಥ ಮಳೆ ಹಾಗೂ ಮಾರುತವನ್ನು ನಾವು ಕಂಡಿರಲಿಲ್ಲ. ಈ ವರ್ಷದ ಮಾರುತ ನಮ್ಮನ್ನೆಲ್ಲರನ್ನೂ ನಷ್ಟ ಹಾಗೂ ಆತಂಕದ ಮನೆಗೆ ದೂಡಿದೆ ಎನ್ನುತ್ತಾರೆ ಮೀನುಗಾರ ಉದಯ್ ಚೆಂಡೇಕರ್.
ಶುಕ್ರವಾರ ಅರಬ್ಬಿ ಸಮುದ್ರದಲ್ಲಿ ಗಾಳಿಯು ಗಂಟೆಗೆ 60- 70 ಕಿ.ಮೀ. ವೇಗದಲ್ಲಿ ಬೀಸುತ್ತಿತ್ತು. ಆದರೆ, ಅ.27ರವರೆಗೆ ಗಾಳಿಯು ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅ.26ರಂದು 110 ಕಿ.ಮೀ. ಹಾಗೂ ಅ.27ರಂದು 170 ಕಿ.ಮೀ. ಪ್ರತಿ ಗಂಟೆಯ ವೇಗದಲ್ಲಿ ಗಾಳಿಯು ಬೀಸುವ ಸಾಧ್ಯತೆ ಇದೆ. ಮೀನುಗಾರರು ಯಾವುದೇ ಕಾರಣಕ್ಕೂ ಮೀನುಗಾರಿಕೆಗೆ ತೆರಳಬಾರದು. ಕಡಲಿಗೆ ಇಳಿದಿರುವವರು ತಕ್ಷಣವೇ ಸಮೀಪದ ಬಂದರು ಅಥವಾ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆಯುವಂತೆ ಅದು ಮುಂಜಾಗೃತೆ ರವಾನಿಸಿದೆ.
ಗಾಳಿಯಿಂದಾಗಿ ಸ್ಥಗಿತಗೊಂಡ ನೆಟ್ ವರ್ಕ್
ಗಾಳಿ, ಮಳೆಗೆ ಶುಕ್ರವಾರ ವಿವಿಧೆಡೆ ಮರಗಳು ಬಿದ್ದು ವಿವಿಧ ಕಂಪೆನಿಗಳ ನೆಟ್ ವರ್ಕ್ ಕೇಬಲ್ಗಳು ತುಂಡಾಗಿವೆ. ಇದರಿಂದಾಗಿ ಏರ್ಟೆಲ್, ಐಡಿಯಾ ಹಾಗೂ ಜಿಯೋ ನೆಟ್ ವರ್ಕ್ ಗಳು ಕೆಲವು ಕಾಲ ಸ್ಥಗಿತಗೊಂಡಿದ್ದವು.
ಶುಕ್ರವಾರ ನಸುಕಿನ ನಾಲ್ಕು ಗಂಟೆಯಿಂದ ಭಾರಿ ಗಾಳಿಯಿಂದ ಕೂಡಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದಲ್ಲದೆ ಮನೆಯಲ್ಲಿರುವ ದವಸ ಧಾನ್ಯ, ಗೃಹೋಪಯೋಗಿ ವಸ್ತುಗಳು ನೀರಿನಿಂದ ಹಾನಿಯಾಗಿದೆ. ಅಗಸೂರು, ಬಳಲೆ, ಮಾದನಗೇರಿ, ಕಲಬಾಗ್, ಕೇಣಿ ಗಾಂವಕರವಾಡಾ, ಅಲಗೇರಿ, ಕಂತ್ರಿ ಮತ್ತಿತರ ಕಡೆ ನೀರು ರಸ್ತೆಯ ಮೇಲೆ ತುಂಬಿಕೊಂಡು ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಪುರಸಭೆ ವ್ಯಾಪ್ತಿಯ ಮಠಾಕೇರಿಯಲ್ಲಿ ಭಾರಿ ಗಾತ್ರದ ಮರ ಬಿದ್ದ ಪರಿಣಾಮ 7ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿಯಾಗಿವೆ. ತಾಲೂಕಿನಲ್ಲಿ ಒಟ್ಟು 60 ವಿದ್ಯುತ್ ಕಂಬ ಮತ್ತು 2 ಟಿಸಿಗೆ ಹಾನಿ ಉಂಟಾಗಿದೆ. 6 ಮನೆಗಳ ಮೇಲೆ ಮರಗಳು ಬಿದ್ದು ಮನೆ ಜಖಂಗೊಂಡಿದೆ. ಸಮುದ್ರ ತೀರ ಮತ್ತು ಪಟ್ಟಣ ಪ್ರದೇಶದ ನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಪ್ರವಾಸಿಗರಿಗೆ ಮುನ್ಸೂಚನೆ
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಪ್ರವಾಸಿಗರು, ಸಾರ್ವಜನಿಕರು ಅ.27ರವರೆಗೆ ಜಿಲ್ಲೆಯ ಯಾವುದೇ ಕಡಲತೀರಗಳಿಗೆ ಇಳಿಯುವುದನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ತಿಳಿಸಿದ್ದಾರೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಸಾರ್ವಜನಿಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕರಾವಳಿಯಲ್ಲಿ ಚಂಡಮಾರುತ: ಒಳನಾಡಿನ ಮೂರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್'