ಕೂರ್ಮಗಢ ದುರಂತ : ಮೃತರ ಕುಟುಂಬಗಳಿಗೆ ಒಟ್ಟು 5 ಲಕ್ಷ ರು. ಪರಿಹಾರ
ಕಾರವಾರ, ಜನವರಿ 24 : ಕಾರವಾರ ಸಮೀಪದ ಕೂರ್ಮಗಢ ದ್ವೀಪದಲ್ಲಿ ಜ.21ರಂದು ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ಒಟ್ಟು 5 ಲಕ್ಷ ರು.ಗಳನ್ನು ಪರಿಹಾರವಾಗಿ ಕೊಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ಕಂದಾಯ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಈ ದುರಂತದಲ್ಲಿ ಒಟ್ಟು 15 ಜನರು ಮೃತಪಟ್ಟಿದ್ದು, ಇವರ ಕುಟುಂಬಗಳಿಗೆ ಈಗಾಗಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಜತೆಗೆ, ಇದುವರೆಗೂ ಇನ್ನೂ ಪತ್ತೆಯಾಗದಿರುವ ಒಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ.
ಕಾರವಾರ ದೋಣಿ ದುರಂತ : ಹಾವೇರಿಯ ಒಂದೇ ಕುಟುಂಬದ 9 ಜನರ ಸಾವು
ಈ ಬಗ್ಗೆ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ದೇಶಪಾಂಡೆ, "ದುರಂತದಲ್ಲಿ ಮಡಿದಿರುವವರೆಲ್ಲರೂ ಬಡಕುಟುಂಬಗಳಿಗೆ ಸೇರಿದವರಾಗಿದ್ದು, ಈಗ ಈ ಕುಟುಂಬಗಳೆಲ್ಲವೂ ತೀವ್ರ ಆಘಾತಕ್ಕೆ ಒಳಗಾಗಿವೆ. ಈ ಕುಟುಂಬಗಳಿಗೆ ಮತ್ತಷ್ಟು ಹೆಚ್ಚಿನ ಪರಿಹಾರ ಒದಗಿಸುವಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಾವು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದು, ಅವರು ತಕ್ಷಣವೇ ಹೆಚ್ಚಿನ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ" ಎಂದು ವಿವರಿಸಿದರು.
ಪ್ರಧಾನಮಂತ್ರಿಗೂ ಪತ್ರ : ಇದೇ ಸಂದರ್ಭದಲ್ಲಿ ಸಚಿವರು, ಕೂರ್ಮಗಢ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕುಟುಂಬಗಳಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್ಎಫ್) ನಿಧಿಯಿಂದ ಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಗುರುವಾರ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ದೇಶಪಾಂಡೆಯವರು, ಇಂತಹ ಕ್ರಮದಿಂದಾಗಿ, ತಮ್ಮವರನ್ನು ಕಳೆದುಕೊಂಡು ದಿಕ್ಕೆಟ್ಟಿರುವ ಬಡಕುಟುಂಬಗಳಿಗೆ ಸ್ವಲ್ಪ ಮಟ್ಟಿನ ನೆಮ್ಮದಿಯಾದರೂ ಸಿಕ್ಕುತ್ತದೆ ಎಂದು ಹೇಳಿದರು.
ಕಾರವಾರ ದೋಣಿ ದುರಂತ : ಸರ್ಕಾರದಿಂದ ಪರಿಹಾರ ಘೋಷಣೆ
ಕೂರ್ಮಗಢದಲ್ಲಿ ದುರಂತ ಸಂಭವಿಸಿದ ಕೂಡಲೇ ಅಗತ್ಯ ಸಿಬ್ಬಂದಿಯನ್ನು ಶೋಧ ಮತ್ತು ಪರಿಹಾರ ಕಾರ್ಯಾಚರಣೆಗೆ ರವಾನಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಸಚಿವರು ಇದೇ ಸಂದರ್ಭದಲ್ಲಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.