ಭಿಕ್ಷುಕಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟ ಕುಮಾರಸ್ವಾಮಿ
Recommended Video
ಉತ್ತರ ಕನ್ನಡ, ಮಾರ್ಚ್ 17: ಹಸುಳೆ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನೆರವಿನ ಹಸ್ತ ಚಾಚಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಗೋಕರ್ಣದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಮುಗಿಸಿ ಕುಮಟಾಕ್ಕೆ ವಾಪಸಾಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆಟ್ರೋಲ್ ಬಂಕ್ಬಳಿ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಭಿಕ್ಷುಕಿ ಮಹಿಳೆಗೆ ಕುಮಾರಸ್ವಾಮಿ ಅವರು 5000 ನಗದು ನೀಡಿ ಪುಟ್ಟ ಅಂಗಡಿ ತೆರೆದು ಸಂಸಾರ ಸಾಗಿಸುವಂತೆ ಸಲಹೆ ಮಾಡಿದರು.
ಹಣ ನೀಡುವ ಮೊದಲು ಸಾಕಷ್ಟು ಸಮಯ ಮಹಿಳೆಯೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, 'ಹೀಗೆ ಬಿಸಿನಲ್ಲಿ ಸಣ್ಣ ಮಗುವನ್ನು ಹೊತ್ತುಕೊಂಡು ತಿರುಗಬೇಡ, ಸಣ್ಣ ಅಂಗಡಿ ಏನಾದರೂ ಹಾಕಿಕೊಂಡು ಜೀವನ ಮಾಡು, ಮಗುವನ್ನು ಚೆನ್ನಾಗಿ ಬೆಳೆಸು' ಎಂದು ಬುದ್ಧಿ ಮಾತು ಹೇಳಿದರು.
ಅಷ್ಟಕ್ಕೆ ಸಮಾಧಾನ ಹೊಂದದ ಕುಮಾರಸ್ವಾಮಿ ಅವರು ಸಾಗರದಲ್ಲಿರುವ ಜೆಡಿಎಸ್ ಮುಖಂಡರೊಬ್ಬರಿಗೆ ದೂರವಾಣಿ ಕರೆ ಮಾಡಿ, ಆ ಮಹಿಳೆಯ ಜೀವನಕ್ಕೆ ಗೂಡಂಗಡಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಮಹಿಳೆಗೆ ಇನ್ನು ಮುಂದೆ ಭಿಕ್ಷೆ ಬೇಡದೆ ಸ್ವಾಭಿಮಾನದ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.
ಆ ಮಗುವಿನ ಮುಖ ನೋಡಿ ಕುಮಾರಸ್ವಾಮಿ ಭಾವುಕರಾಗಿದ್ದೇಕೆ?
ಅದಕ್ಕೂ ಮುಂಚೆ ಸಾಕಷ್ಟು ಹೊತ್ತು ಮಹಿಳೆಯೊಂದಿಗೆ ಕುಷಲೋಪರಿ ನಡೆಸಿದ ಕುಮಾರಸ್ವಾಮಿ ಆಕೆಯ ಊರು, ಕುಟುಂಬದ ಬಗ್ಗೆಯೂ ಮಾಹಿತಿ ಪಡೆದರು. ಮಧು ಬಂಗಾರಪ್ಪ ಅವರನ್ನು ತೋರಿಸಿ ಇವರನ್ನು ನೋಡಿದ್ದೀಯಾ ಎಂದು ಕೇಳಿದರು. ಆ ಮಹಿಳೆ 'ನನಗೆ ಗೊತ್ತಿಲ್ಲ ಎಂದರು', ಬಂಗಾರಪ್ಪ ಅವರನ್ನು ಗೊತ್ತಾ ಎಂದಾಗ 'ಹೌದು' ಎಂದರು. ಅದೇ ಬಂಗಾರಪ್ಪ ಅವರ ಮಗ ಈತ, ನಿಮ್ಮ ಕ್ಷೇತ್ರದ ಶಾಸಕ ಎಂದು ಮಧು ಬಂಗಾರಪ್ಪ ಅವರನ್ನೂ ಆಕೆಗೆ ಪರಿಚಯ ಮಾಡಿಸಿದರು.
ಮಹಿಳೆಗೆ ಹಣ ಕೊಟ್ಟು ಬೀಳ್ಕೊಟ್ಟ ಕುಮಾರಸ್ವಾಮಿ ಅವರು ಮತ್ತೆಂದೂ ಭಿಕ್ಷೆ ಬೇಡಬಾರದು, ಅಂಗಡಿ ಹಾಕಿಕೊಂಡು ಸಂಸಾರ ಸಾಗಿಸಬೇಕು ಎಂದು ಒತ್ತಿ ಒತ್ತಿ ಹೇಳಿದರು.