"ಡಮ್ಮಿ ಕ್ಯಾಂಡಿಡೇಟ್" ಎಂದು ಮಾವನ ಇದಿರಾಗಿ ಪ್ರಚಾರಕ್ಕಿಳಿದ ಕುಮಾರ್ ಬಂಗಾರಪ್ಪ
ಕಾರವಾರ, ನವೆಂಬರ್ 19: ಸೋದರ ಮಾವನ ವಿರುದ್ಧ ಅಳಿಯನೇ ಚುನಾವಣಾ ಪ್ರಚಾರ ನಡೆಸಿದ ಪ್ರಸಂಗಕ್ಕೆ ಯಲ್ಲಾಪುರ ಪಟ್ಟಣ ಸಾಕ್ಷಿಯಾಯಿತು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶಕ್ಕೆ ಪಕ್ಷದ ರಾಜ್ಯ ಮುಖಂಡ ಕುಮಾರ್ ಬಂಗಾರಪ್ಪ ಅವರು ಆಗಮಿಸಿ, ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು.
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಕುಮಾರ್ ಬಂಗಾರಪ್ಪನವರ ಸೋದರ ಮಾವನಾಗಿದ್ದು, ಸೋದರ ಮಾವನ ವಿರುದ್ಧವೇ ಅವರು ಪ್ರಚಾರದ ಅಖಾಡಕ್ಕೆ ಇಳಿದರು.
ನಾಮಪತ್ರ ಸಲ್ಲಿಕೆ ಮುಕ್ತಾಯ: ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಈ ವೇಳೆ ಅವರು ಮಾವನ ವಿರುದ್ಧವೇ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು. 'ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಮ್ಮಿ ಕ್ಯಾಂಡಿಡೇಟ್. ಯಾರೂ ಅಭ್ಯರ್ಥಿ ಇಲ್ಲವೆಂದು ಕಾಂಗ್ರೆಸ್ನವರು ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಾರೆ. ಹಣ ಮಾಡಿಕೊಂಡಿದ್ದವರನ್ನು ಆಯ್ಕೆ ಮಾಡಿ, ಖರ್ಚು ಮಾಡಲಿ ಎಂದು ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಚುನಾವಣೆಗೆ ಎರಡು ದಿನ ಇರುವಾಗ ರಾತ್ರಿ ಬರುವ ಅಭ್ಯರ್ಥಿಯ ಮುಖ ನೋಡಬೇಡಿ. ಅಭಿವೃದ್ಧಿ ಕೆಲಸ ಮಾಡುವ, ರೈತರಿಗೆ ಪ್ರೋತ್ಸಾಹ ನೀಡುವ ಹೆಬ್ಬಾರ್ ಗೆ ಬೆಂಬಲಿಸಿ' ಎಂದು ಕುಮಾರ್ ಬಂಗಾರಪ್ಪ ಸೋದರ ಮಾವನ ವಿರುದ್ಧವೇ ಕಿಡಿಕಾರಿದರು.
'ರೈತರಿಗೆ ಸೇರಬೇಕಿದ್ದ ಹಣವನ್ನು ಸಮ್ಮಿಶ್ರ ಸರಕಾರ ಅವರಿಗೆ ಒದಗಿಸಿಲ್ಲ. ರೈತರ ಹಣ ಹಾಸನ, ಮಂಡ್ಯಕ್ಕೆ ಹಾಕಿದ್ದು ಬಿಟ್ರೆ ಸಮ್ಮಿಶ್ರ ಸರಕಾರ ನಡೆಸಿದ ಕೆಲಸಗಳೇನಿಲ್ಲ. ರಾಜ್ಯವನ್ನು ಬಿಜೆಪಿ ತೆಕ್ಕೆಗೆ ಹಾಕಿಲ್ಲವೆಂದರೆ ಉದ್ಧಾರ ಆಗುವುದಿಲ್ಲವೆಂದು ಮನಗಂಡು ಇಂದು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜಕೀಯದಲ್ಲಿ ಕೆಲವೊಮ್ಮೆ ಅನಿವಾರ್ಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ' ಎಂದರು.
ಕೊನೆಯ ದಿನ ನಾಮಪತ್ರ ಸಲ್ಲಿಸಿದ ಹಲವು ಘಟಾನುಘಟಿ ನಾಯಕರು
'ಯಲ್ಲಾಪುರದ ಚುನಾವಣೆ ನನ್ನ ಸೊರಬ ಕ್ಷೇತ್ರದ ಚುನಾವಣೆ ಇದ್ದಂತೆ. ಹಿಂದುಳಿದವರಿಗೆ, ಬಡವರಿಗೆ ಬಿಜೆಪಿ ಕೊಟ್ಟಷ್ಟು ಕಾರ್ಯಕ್ರಮ ಬೇರಾರೂ ಕೊಟ್ಟಿಲ್ಲ. ಈ ಬಾರಿ ಶಿವರಾಮ ಹೆಬ್ಬಾರ್ ಅವರು ಅಭೂತಪೂರ್ವ ಗೆಲವು ಸಾಧಿಸುತ್ತಾರೆ. ವಿರೋಧ ಪಕ್ಷದವರು ವೈಯಕ್ತಿಕ ವಿಚಾರಗಳನ್ನು ಆಡುತ್ತಾರೆ. ನಿಮ್ಮ ವಿಚಾರ ಎಳೆಎಳೆಯಾಗಿ ಎಳೆದು ನೋಡಿದ್ರೆ ಗೊತ್ತಾಗುತ್ತೆ' ಎಂದು ಕಿಡಿಕಾರಿದರು.