ಬೇಸಾಯದ ಕಡೆ ಯುವಕರನ್ನು ಸೆಳೆಯಲು ಅಂಕೋಲಾದಲ್ಲಿ ಕೃಷಿ ಹಬ್ಬ
ಕಾರವಾರ, ಆಗಸ್ಟ್ 14: ಆಧುನಿಕತೆ ಮೋಡಿಗೆ ಮರುಳಾಗಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲಿಯೂ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಯುವ ಸಮುದಾಯ ನಗರ ಪ್ರದೇಶದೆಡೆ ಮುಖ ಮಾಡಿದ ಕಾರಣ, ನೂರಾರು ಹೆಕ್ಟೇರ್ ಕೃಷಿ ಭೂಮಿ ಬಂಜರು ಬಿದ್ದಿದೆ. ಆದರೆ ಪುನಃ ಕೃಷಿ ಚಟುವಟಿಕೆಯತ್ತ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಅಂಕೋಲಾ ತಾಲ್ಲೂಕಿನ ಬಾಸಗೋಡದಲ್ಲಿ ನಡೆದ ಕೃಷಿ ಹಬ್ಬ ಕಾರ್ಯಕ್ರಮವೊಂದು ಇದೀಗ ಎಲ್ಲರ ಗಮನ ಸೆಳೆದಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಜನರು ಆಧುನಿಕತೆಯ ಮೋಡಿಗೆ ಬಿದ್ದು ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಉತ್ತಮ ಭೂಮಿ, ಬೇಕಾಗುವಷ್ಟು ನೀರಿದ್ದರೂ ಸಹ ಕೃಷಿ ಮಾಡದೇ ಭೂಮಿಯನ್ನು ಹಾಗೇ ಬಂಜರು ಬಿಡುತ್ತಿದ್ದಾರೆ. ಅದರಲ್ಲಿಯೂ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಯುವಕರು ಗೋವಾ, ಮುಂಬೈ ಭಾಗಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಿರುವ ಕಾರಣ ನೂರಾರು ಹೆಕ್ಟೇರ್ ಕೃಷಿ ಭೂಮಿ ಪಾಳು ಬಿದ್ದಿದೆ. ಆದರೆ ಇಂತಹ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಂಕೋಲಾ ತಾಲೂಕಿನ ಬಾಸಗೋಡ ಗ್ರಾಮದಲ್ಲಿ ಪಹರೆ ಸಂಘಟನೆಯಿಂದ ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕೃಷಿ ಹಬ್ಬ ಕಾರ್ಯಕ್ರಮವೊಂದನ್ನು ವಿಶೇವಾಗಿ ಆಚರಿಸಲಾಯಿತು.
ಕೃಷಿ ಇಲ್ಲದಿದ್ದರೇ ಜೀವನವೇ ಇಲ್ಲ. ಪ್ರತಿಯೊಬ್ಬರು ತಾವು ತಿನ್ನುವ ಆಹಾರವನ್ನು ಉತ್ಫಾದನೆಯನ್ನು ಮಾಡಿಕೊಳ್ಳುವುದು ಕೃಷಿಯಿಂದಲೇ. ಕೃಷಿ ನಶಿಸಿ ಹೋದರೆ ದೇಶ ಸಾಕಷ್ಟು ದೊಡ್ಡ ಸಮಸ್ಯೆಯನ್ನು ಎದುರಿಸುತ್ತದೆ. ಈ ನಿಟ್ಟಿನಲ್ಲಿ ಪಹರೆ ಸಂಘಟನೆ ಈ ಬಾರಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಮಾಜಿ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಹಾಗೂ ಕೃಷಿ ಸಾಧಕಿ ಕವಿತಾ ಮಿಶ್ರಾ ಕರೆಸಿ ನಾಟಿ ಕಾರ್ಯ ಮಾಡಿಸುವ ಮೂಲಕ ಸಾರ್ವಜನಿಕರನ್ನು ಕೃಷಿಗೆ ಪ್ರೋತ್ಸಾಹಿಸುವ ಕಾರ್ಯಕ್ಕೆ ಮುಂದಾದರು. ರೈತರ ಗೆಟಪ್ನಲ್ಲಿ ಪಂಚೆಯನ್ನು ಉಟ್ಟು ಗಣ್ಯರು ಗದ್ದೆಗೆ ಇಳಿದು ಭತ್ತದ ಸಸಿಗಳನ್ನು ನಾಟಿ ಮಾಡಿದರು. ಇವರ ಜೊತೆ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹ ಗದ್ದೆಗೆ ಇಳಿದು ನಾಟಿ ಕಾರ್ಯ ಮಾಡಿದರು.
ಕುಗ್ಗಿದ ಬೇಡಿಕೆ: ಭಾರತೀಯ ಅಕ್ಕಿ ರಫ್ತು ದರದಲ್ಲಿ ಇಳಿಕೆ
ಇನ್ನು ಪಹರೆ ವೇದಿಕೆಯಿಂದ ಕಳೆದ ಒಂಭತ್ತು ವರ್ಷದಿಂದ ಇದೇ ರೀತಿ ಕೃಷಿ ಹಬ್ಬ ಆಚರಿಸಿ ಕೃಷಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಉತ್ತರಕನ್ನಡ ಜಿಲ್ಲಾಧಿಕಾರಿ ಅಮರ್ ನಾರಾಯಣ್, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಆಳ್ವಾಸ್ ಕಾಲೇಜಿನ ಮೋಹನ್ ಆಳ್ವಾ, ಶಾಸಕ ವೈ.ಎಸ್.ವಿ ದತ್ತಾ, ಚಿತ್ರದುರ್ಗದ ಮಾದರ ಚೆನ್ನಯ್ಯಸ್ವಾಮಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನ ಕರೆಸಿ ಗದ್ದೆಯಲ್ಲಿ ನಾಟಿ ಮಾಡಿಸಿ ಕೃಷಿಗೆ ಉತ್ತೇಜನ ಕೊಡುವ ಕಾರ್ಯಕ್ಕೆ ಕೈಗೊಂಡಿದ್ದರು.
ಇದೇ ವೇಳೆ ಈ ಬಾರಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕವಿತಾ ಮಿಶ್ರಾರನ್ನು ಕಾರ್ಯಕ್ರಮಕ್ಕೆ ಕರೆಯಿಸುವ ಮೂಲಕ ಸಾರ್ವಜನಿಕರಿಗೆ ಕೃಷಿಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಪಕ್ಕಾ ಗ್ರಾಮೀಣ ಶೈಲಿಯಲ್ಲಿಯೇ ಕಂಬಳಿ ಹೊದಿಸಿ ಗಿಡಗಳನ್ನು ಕೊಡುವ ಮೂಲಕ ಸ್ವಾಗತಿಸಲಾಯಿತು. ಕೃಷಿಯಲ್ಲಿ ಸಾಧನೆ ಮಾಡಿದ ಕೆಲ ರೈತರಿಗೂ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.
ಒಟ್ಟಾರೇ ನಶಿಸುತ್ತಿರುವ ಕೃಷಿಯನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಜೊತೆಗೆ ಕೃಷಿಯಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಆತ್ಮಹತ್ಯೆ ದಾರಿ ಹಿಡಿದಿರುವ ರೈತರಿಗೆ ಪಹರೆ ವೇದಿಕೆ ಹಮ್ಮಿಕೊಳ್ಳುತ್ತಿರುವ ಇಂತಹ ಕಾರ್ಯಕ್ರಮ ಮಾದರಿಯೇ. ಇಂತಹ ಕಾರ್ಯಕ್ರಮ ಕೇವಲ ಅಂಕೋಲಾದಲ್ಲಿ ಮಾತ್ರ ನಡೆಯದೇ ರಾಜ್ಯದ ಬೇರೆಡೆ ಸಹ ನಡೆಯುವ ಮೂಲಕ ಕೃಷಿ ಬಗ್ಗೆ ಜಾಗೃತಿ ಮೂಡಿಸಬೇಕು, ಆಗ ಮಾತ್ರ ಕೃಷಿ ಇನ್ನಷ್ಟು ಬೆಳೆಯಲು ಸಾಧ್ಯ.