ಮತ್ತೆ ಬಂತು ‘ಕೂರ್ಮಗಡ ಜಾತ್ರೆ'; ಬಿಡದೇ ಕಾಡುವ ದೋಣಿ ದುರಂತದ ಕರಾಳ ನೆನಪು
ಕಾರವಾರ, ಜನವರಿ 9: ಕಳೆದ ವರ್ಷ ಜ.21ರಂದು ತಾಲ್ಲೂಕಿನಲ್ಲಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಸಮೀಪದ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಮುಗಿಸಿಕೊಂಡು ಮರಳುತ್ತಿದ್ದಾಗ ದೋಣಿ ಮುಗುಚಿ 16 ಮಂದಿ ಜಲಸಮಾಧಿಯಾಗಿದ್ದರು. ಈ ಘಟನೆ ನಡೆದ ನಂತರದಿಂದ ಕೂರ್ಮಗಡ ಎಂಬ ಹೆಸರು ಕೇಳಿದರೆ ಸಾಕು ಜನರು ಬೆಚ್ಚಿಬೀಳುವಂತಾಯಿತು.
ಅದೇ ಜಾತ್ರೆ ಈಗ ಮತ್ತೆ ಬಂದಿದೆ. ಈ ಬಾರಿ ಜನವರಿ 10, ಅಂದರೆ ನಾಳೆ ಹುಣ್ಣಿಮೆಯ ದಿನ ಜಾತ್ರೆಗೆ ದಿನ ನಿಗದಿಯಾಗಿದ್ದು, ದ್ವೀಪದಲ್ಲಿ ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ.
ದ್ವೀಪದಲ್ಲಿ ಮೀನುಗಾರರ "ಆರಾಧ್ಯದೈವ"
ಕಾರವಾರದ ಬೈತಖೋಲ್ ಜಟ್ಟಿಯಿಂದ ಸುಮಾರು 12 ಕಿ.ಮೀ. ದೂರದಲ್ಲಿ ಕೂರ್ಮಗಡ ಎಂಬ ಪುಟ್ಟ ದ್ವೀಪವಿದೆ. ನೋಡಲು ಈ ದ್ವೀಪ ಆಮೆಯ (ಕೂರ್ಮ) ಆಕಾರದಲ್ಲಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನಲಾಗಿದೆ. ಇಲ್ಲಿ ನರಸಿಂಹ ದೇವರ ದೇವಾಲಯವಿದ್ದು, ಇದು ಮೀನುಗಾರ ಸಮುದಾಯದ ಆರಾಧ್ಯ ದೈವವಾಗಿದೆ. ಜನವರಿ ತಿಂಗಳಲ್ಲಿ ವರ್ಷಕ್ಕೊಮ್ಮೆ ಒಂದು ದಿನ ಮಾತ್ರ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ಹರಕೆಯ ರೂಪದಲ್ಲಿ ಬಾಳೆಗೊನೆಯನ್ನು ಸಲ್ಲಿಸಿದರೆ ಉತ್ತಮ ಮತ್ಸ್ಯಶಿಕಾರಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಮೀನುಗಾರರದ್ದು. ಅಲ್ಲದೇ, ಮೀನುಗಾರಿಕೆಗೆ ತೆರಳುವವರನ್ನು ನರಸಿಂಹ ಕಾಯುತ್ತಾನೆ ಎಂದೂ ಮೀನುಗಾರರು ನಂಬಿದ್ದಾರೆ. ಹೀಗಾಗಿ ಜಾತ್ರೆಯ ದಿನ ಇಲ್ಲಿ ಸೇರುವ ಅಪಾರ ಜನಸಂದಣಿಗೆ ಪಾರವೇ ಇಲ್ಲ. ಕಾರವಾರ ಮಾತ್ರವಲ್ಲದೇ, ಜಿಲ್ಲೆಯ, ದಕ್ಷಿಣ ಕನ್ನಡ, ಉಡುಪಿಯಿಂದ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಕಾರವಾರ: ಭೀಕರ ದೋಣಿ ದುರಂತ 9 ಮಂದಿ ಸಾವು
ಕಳೆದ ವರ್ಷ ನಡೆದಿದ್ದೇನು?
ನೂರಾರು ಸಂಖ್ಯೆಯಲ್ಲಿ ಬೋಟುಗಳು ಈ ದಿನ ಭಕ್ತರನ್ನು ಕರೆದೊಯ್ಯಲು ತೀರಗಳಲ್ಲಿ ನಿಂತಿರುತ್ತವೆ. ಕೆಲವರು ಹರಕೆಯ ಹೆಸರಿನಲ್ಲಿ ಉಚಿತವಾಗಿ ಭಕ್ತರನ್ನು ಕರೆದುಕೊಂಡು ಹೋದರೆ, ಇನ್ನೂ ಕೆಲವರು ಹಣ ಪಡೆದು ಪ್ರಯಾಣಿಕರನ್ನು ಕೊಂಡೊಯ್ಯುತ್ತಾರೆ. ಆದರೆ, ಈ ವೇಳೆ ನಡೆಯುವ ಅವಘಡಗಳನ್ನು ತಪ್ಪಿಸುವ ಬಗ್ಗೆ ಗಂಭೀರವಾಗಿ ಯೋಚಿಸದ ಪರಿಣಾಮ ಕಳೆದ ವರ್ಷ ದುರಂತ ಘಟಿಸಿತು. ದೋಣಿ ಮಾಲೀಕರು ಜನರನ್ನು ಹತ್ತಿಸಿಕೊಳ್ಳುವ ಮುನ್ನ ಮುಂಜಾಗ್ರತಾ ಕ್ರಮವನ್ನು ಪಾಲಿಸದಿರುವುದು ಅವಘಡಕ್ಕೆ ಕಾರಣವಾಗಿತ್ತು. ಜಾತ್ರೆಗೆ ಜನರನ್ನು ಕೊಂಡೊಯ್ಯುವ ಸಂದರ್ಭ ದೋಣಿ ಮುಳುಗಿ ಒಂದೇ ಕುಟುಂಬದ ಹದಿನಾರು ಮಂದಿ ಮೃತಪಟ್ಟಿದ್ದರು. ನಿಯಮಗಳನ್ನು ಪಾಲಿಸದಿರುವವರಿಗೆ ಕಳೆದ ಬಾರಿಯ ಅವಘಡ ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ಬಾರಿ ದೋಣಿಗಳ ಮಾಲೀಕರು ಸ್ವಯಂಪ್ರೇರಿತರಾಗಿ ನಿಯಮಗಳನ್ನು ಪಾಲಿಸಬೇಕಿದೆ. ಜಿಲ್ಲಾಡಳಿತದಿಂದಲೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.
ಜಾತ್ರೆಗೆ ಹೋಗುವವರಿಗೆ ಲೈಫ್ ಜಾಕೆಟ್ ಕಡ್ಡಾಯ
ಕಳೆದ ವರ್ಷದ ಅವಘಡದ ಕಾರಣ ಈ ವರ್ಷ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಲ್ಲಿಂದ ದೋಣಿಗಳನ್ನು ಬಿಡಬೇಕು, ದೋಣಿಗಳಲ್ಲಿ ಎಷ್ಟು ಜನರಿಗೆ ಅವಕಾಶ ನೀಡಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರು, ದೋಣಿಗಳ ಮಾಲೀಕರೊಂದಿಗೆ ಚರ್ಚಿಸಲಾಗಿದೆ. "ದೋಣಿಯಲ್ಲಿನ ಪ್ರಯಾಣಿಕರ ಮಾಹಿತಿಗಳನ್ನು ನೋಂದಣಿ ಪುಸ್ತಕದಲ್ಲಿ ನಮೂದಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಹಂತಹಂತವಾಗಿ ದೋಣಿಗಳನ್ನು ಬಿಡಲು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಯವರು ವಿವಿಧ ಇಲಾಖೆಗಳ ಸಭೆ ನಡೆಸಿ, ಸೂಚನೆಗಳನ್ನು ನೀಡಲಿದ್ದಾರೆ' ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ.ನಾಗರಾಜ್ ತಿಳಿಸಿದರು.
‘ಕೂರ್ಮಗಡ ದ್ವೀಪದಲ್ಲಿ ನಡೆಯಲಿರುವ ನರಸಿಂಹ ದೇವರ ಜಾತ್ರೆಗೆ ಲೈಫ್ ಜಾಕೆಟ್ ಇಲ್ಲದೇ ಯಾರೂ ಬೋಟುಗಳಲ್ಲಿ ಪ್ರಯಾಣಿಸುವಂತಿಲ್ಲ. ಈ ವಿಷಯವಾಗಿ ಯಾರಾದರೂ ನಿರ್ಲಕ್ಷ್ಯ ವಹಿಸಿದಲ್ಲಿ ಅಂತಹ ಬೋಟು ಮಾಲೀಕರು, ಚಾಲಕ ಹಾಗೂ ಆಯೋಜಕರ ಮೇಲೆ ಪ್ರಕರಣ ದಾಖಲಿಸುತ್ತೇವೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾರವಾರ ದೋಣಿ ದುರಂತ : ಸರ್ಕಾರದಿಂದ ಪರಿಹಾರ ಘೋಷಣೆ
ಜಾತ್ರೆ ಕುರಿತು ಪೂರ್ವಭಾವಿ ಸಭೆ
ಈಗಾಗಲೇ ಜಾತ್ರೆ ಆಯೋಜಕರ ಸಮಿತಿಯೊಂದಿಗೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಜಾತ್ರೆಗೆ ತೆರಳಲು ಮಾರ್ಗಸೂಚಿಗಳನ್ನು ನೀಡಲಾಗಿದೆ. ಕಾರವಾರದಿಂದ ಜಾತ್ರೆಗೆ ತೆರಳಲು ನಗರದ ಬೈತಖೋಲ್ ಬಂದರು, ಕೋಡಿಬಾಗ್ ಸೇತುವೆ ಹಾಗೂ ಮಾಜಾಳಿ ಕಡೆಯಿಂದ ಮಾತ್ರ ತೆರಳಲು ಅವಕಾಶ ಒದಗಿಸಲಾಗಿದೆ. ಈ ಮೂರು ಜಾಗಗಳಿಂದ ಮಾತ್ರ ಕೂರ್ಮಗಡ ದ್ವೀಪಕ್ಕೆ ಬೋಟುಗಳಲ್ಲಿ ಭಕ್ತರು ತೆರಳಲು ಅನುಮತಿ ಇದೆ. ಈ ವೇಳೆ ಪೊಲೀಸ್, ಮೀನುಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಬೋಟುಗಳಲ್ಲಿ ತೆರಳುವ ಜನರ ಮೇಲೆ ನಿಗಾ ಇರಿಸಲಿದ್ದಾರೆ. ಮೀನುಗಾರರೊಂದಿಗೂ ಸಭೆ ನಡೆಸಲಾಗಿದ್ದು, ಜಾತ್ರೆಯ ದಿನ ಭಕ್ತರನ್ನು ಕರೆದೊಯ್ಯಲು ಹೆಚ್ಚಿನ ಬೋಟುಗಳು ಹಾಗೂ 1500ರಷ್ಟು ಲೈಫ್ ಜಾಕೆಟ್ ಗಳ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಸಮುದ್ರದಲ್ಲಿ ಕರಾವಳಿ ಕಾವಲುಪಡೆ, ಕೋಸ್ಟ್ ಗಾರ್ಡ್ ಬೋಟುಗಳು ಗಸ್ತು ತಿರುಗಲಿವೆ. ಈ ಕುರಿತು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.