ಇದೇ ಕಾರಣಕ್ಕೆ ದಾಂಡೇಲಿ ಹಿರಿಯ ವಕೀಲ ಅಜಿತ ನಾಯಕ ಕೊಲೆಯಾಯ್ತು
ಕಾರವಾರ, ಆಗಸ್ಟ್.02: ಹಿರಿಯ ವಕೀಲ, ದಾಂಡೇಲಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದ ಅಜಿತ ನಾಯಕರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದ ಶಂಕಿತ ಆರೋಪಿಯು ಕೊಲೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ದಾಂಡೇಲಿಯ ಮೌಳಂಗಿ ನಿವಾಸಿ ದೀಪಕ ಯಾನೆ ಪಾಂಡುರಂಗ ಕಾಂಬಳೆಯನ್ನ ಸೋಮವಾರ ಸಂಜೆ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯಲ್ಲಿ ಪೊಲೀಸರು ಶಂಕಿತ ಆರೋಪಿ ಎಂದು ವಶಕ್ಕೆ ಪಡೆದುಕೊಂಡಿದ್ದರು.
ಹಿರಿಯ ವಕೀಲ ಅಜಿತ ನಾಯಕ ಹತ್ಯೆ ಪ್ರಕರಣ: ಶಂಕಿತ ಆರೋಪಿ ಬಂಧನ
ಬೆಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದೀಪಕ ಕಾಂಬಳೆಯ ಮುಖ ಚಹರೆಯ ಆಧಾರದ ಮೇಲೆ ಈತನನ್ನು ವಶಕ್ಕೆ ಪಡೆಯಲಾಗಿತ್ತು.
ಇದೀಗ ದೀಪಕನನ್ನು ವಿಚಾರಣೆ ನಡೆಸಿದ ಪೊಲೀಸರ ಬಳಿ ಕೊಲೆಯನ್ನು ತಾನೇ ಮಾಡಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ. ಬುಧವಾರ ಹಳಿಯಾಳ ಸಿವಿಲ್ ನ್ಯಾಯಾಲಯದ ಆದೇಶದಂತೆ ಹೆಚ್ಚಿನ ತನಿಖೆಗೆ ದೀಪಕನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಆರೋಪಿಯೊಂದಿಗೆ ಸ್ಥಳ ಪರಿಶೀಲನೆ
ಆರೋಪ ಒಪ್ಪಿಕೊಂಡ ದೀಪಕನಿಗೆ ಮುಸುಕು ಧರಿಸಿ ಕೊಲೆ ನಡೆದ ಸ್ಥಳಕ್ಕೆ ಬುಧವಾರ ಕರೆತಂದ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಮೋಹನಪ್ರಸಾದ, ಸಿಪಿಐ ಅನೀಶ ಮುಜಾವರ ಹಾಗೂ ತನಿಖಾ ತಂಡದ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಕೊಲೆ ನಡೆದ ಸ್ಥಳ, ಕೊಲೆ ಮಾಡಿದ ರೀತಿ, ಕೊಲೆಗೆ ಬಳಸಿದ ದ್ವಿಚಕ್ರ ವಾಹನ, ಕೊಲೆ ಮಾಡಲು ಬಳಸಲಾದ ಆಯುಧ ಹಾಗೂ ಕೊಲೆ ಮಾಡಿದ ನಂತರ ತಂಗಿದ್ದ ಸ್ಥಳವನ್ನು ಮಹಜರು ಮಾಡಲಾಯಿತು.
ಕಾರಿನ ಕೆಳಗಿತ್ತು ಹತ್ಯೆಗೆ ಬಳಸಿದ ಆಯುಧ, ಜಾಕೆಟ್
ಜೆ.ಎನ್.ರಸ್ತೆಯ ಸಂಡೇ ಮಾರ್ಕೆಟ್ ಎದುರಿನಲ್ಲಿರುವ ತಮ್ಮ ಕಚೇರಿಯಿಂದ ವಕೀಲ ಅಜಿತ ನಾಯಕ ಅವರು ಇಳಿದು ಬರುತ್ತಿದ್ದ ವೇಳೆ ದೀಪಕ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ತಕ್ಷಣ ಅಲ್ಲಿಂದ ಕಾಲ್ಕಿತ್ತ ಆತ, ಚಿಕನ್ ಮಾರ್ಕೆಟ್ ಗೆ ಹೋಗುವ ಸಂದ್ರಿ ರಸ್ತೆಯಲ್ಲಿ ಹೋಗಿ, ಮುಂದೆ ಸಂಡೇ ಮಾರ್ಕೆಟ್ ಮೇಲ್ಭಾಗದಲ್ಲಿ ಸಾಗಿದ್ದಾನೆ.
ಅಲ್ಲಿನ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ ಕೆಟ್ಟುನಿಂತ ಕಾರೊಂದರ ಅಡಿಯಲ್ಲಿ ಕೃತ್ಯಕ್ಕೆ ಬಳಸಲಾದ ಕತ್ತಿ ಹಾಗೂ ಅಂದು ಧರಿಸಿದ್ದ ಜಾಕೆಟ್ ಇಟ್ಟಿರುವುದನ್ನು ಹೊರತೆಗೆದ ದೀಪಕ್, ಅದನ್ನು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ.
ಈ ಎಲ್ಲ ಮಹಜರು ಕ್ರಿಯೆಯನ್ನು ಫೋಟೋ ಹಾಗೂ ವಿಡಿಯೋ ಮಾಡಿ, ದಾಖಲೆಗಳನ್ನು ಹಳಿಯಾಳ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ಪ್ರಕರಣದ ಪೂರ್ಣ ತನಿಖೆಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಕೋರ್ಟ್ ಆರೋಪಿಯನ್ನು ಆ.8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಎನ್ನಲಾಗಿರುವ ದಲಿತ ಸಂಘಟನೆಯ ಮುಖಂಡ ವಿನಾಯಕ ಕರ್ನಿಂಗ್ ಎಂಬುವವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ, ಇದೇ ಪ್ರಕರಣಕ್ಕೆ ಸಂಬಂಧಿಸದಂತೆ ಮೈಸೂರಿನ ವಿಕ್ರಂ ಎಂಬಾತನಿಗೂ ಪೊಲೀಸರು ಬಲೆ ಬೀಸಿರುವುದಾಗಿ ತಿಳಿದು ಬಂದಿದೆ.
ಕೊಲೆಗೆ ಕಾರಣ ಇಲ್ಲಿದೆ
ದೀಪಕ ತಂದೆ ಮಾರುತಿ ಕಾಂಬಳೆ ಮೌಳಂಗಿಯಲ್ಲಿ ಒಂದೂವರೆ ಎಕರೆ ಜಮೀನನ್ನು 25 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಸರ್ವೆ ಮಾಡಿದ ಕಂದಾಯ ಅಧಿಕಾರಿಗಳು ಆ ಜಮೀನು ಪರಿಶಿಷ್ಟ ಜಾತಿಗೆ ಸೇರಿದ್ದು, ಅದನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದರು.
ಆದರೆ, ಜಮೀನು ಬಿಟ್ಟು ಕೊಡಲು ಸಿದ್ಧನಿಲ್ಲದ ದೀಪಕ ಕಾಂಬಳೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ನಡುವೆ ವಕೀಲ ಅಜಿತ ನಾಯಕ ಆ ಜಮೀನನ್ನು ಕೊಣಪಾದ ವಸಂತ ಎಂಬುವವರಿಗೆ ಕೊಡಿಸಿ ಜಿಪಿಎಸ್ ಮಾಡಿಸಿದ್ದರು. ನದಿಯ ಪಕ್ಕದಲ್ಲಿರುವ ಕೋಟಿ ಬೆಲೆ ಬಾಳುವ ಜಮೀನು, ಮನೆ ಹೋದ ಕೋಪದಲ್ಲಿ ದೀಪಕ ಈ ಕೊಲೆ ನಡೆಸಿದ್ದಾನೆ.
ಮೌಳಂಗಿಯಲ್ಲಿ ಇಕೋ ಪಾರ್ಕ್ ಆದಾಗಿನಿಂದ ಆ ಪ್ರದೇಶದ ಸುತ್ತಮುತ್ತಲ ಜಾಗದ ಮೌಲ್ಯವೂ ಹೆಚ್ಚಾಗಿದೆ. ಕಾಳಿ ನದಿಯ ಪಕ್ಕದಲ್ಲೆ ಇದ್ದ ಜಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ನಡೆಸಲು ಹಲವರಿಂದ ತಂತ್ರಗಳು ನಡೆಯುತ್ತಿತ್ತು.
ಒಂದು ಹಂತದಲ್ಲಿ ಬೆಂಗಳೂರಿನಂಥ ಮಹಾನಗರಗಳಿಗೆ ಸೀಮಿತವಾಗಿದ್ದ ಭೂಮಾಫಿಯ ದಾಂಡೇಲಿಗೂ ಅಂಟಿಕೊಂಡಿರುವುದು ಈ ಕೊಲೆಗೆ ಕಾರಣವಾಗಿದೆ.
ಪೊಲೀಸ್ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ
ಹತ್ಯೆಯ ಜಾಡನ್ನು ಬೇಧಿಸಿದ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಡಿವೈಎಸ್ಪಿ ಮೋಹನಪ್ರಸಾದ, ಸಿಪಿಐ ಅನೀಶ ಮುಜಾವರ, ವಿಶೇಷ ತನಿಖಾ ದಂಡದ ಅಧಿಕಾರಿಗಳಾದ ಜಿಲ್ಲಾ ಅಪರಾಧ ಪತ್ತೆ ವಿಭಾಗದ ಶರಣಗೌಡ ಪಾಟೀಲ, ರಂನಾಥ ನೀಲಮ್ಮನವರ, ಅಂಕೋಲಾ ಪಿಎಸೈ ಶ್ರೀಧರ ಹಾಗೂ ಸ್ಥಳೀಯ ಪೊಲೀಸ್ ತಂಡವು ಹತ್ಯೆ ನಡೆದ ಮೂರೇ ದಿನದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.