ಅರಣ್ಯಹಕ್ಕು ಅರ್ಜಿ ತಿರಸ್ಕಾರ; ವಿನೂತನ ಜನಾಂದೋಲನಕ್ಕೆ ಸಜ್ಜಾದ ಉತ್ತರ ಕನ್ನಡದ ಅರಣ್ಯವಾಸಿಗಳು
ಕಾರವಾರ, ಜನವರಿ 14: ಅರಣ್ಯ ಹಕ್ಕುಪತ್ರ ಮಂಜೂರಾತಿಗಾಗಿ ಒತ್ತಾಯಿಸಿ 50 ಸಾವಿರಕ್ಕೂ ಹೆಚ್ಚಿನ ಅರಣ್ಯವಾಸಿಗಳು ಜಿಲ್ಲಾಧಿಕಾರಿಗೆ ಮನವಿ ನೀಡುವ ಮೂಲಕ ವಿನೂತನ ರೀತಿಯ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಈ ಮನವಿ ಹೋರಾಟ ನಡೆಯಲಿದ್ದು, ಜಿಲ್ಲೆಯಲ್ಲಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.
ಅರಣ್ಯ ಹಕ್ಕು ಕಾಯ್ದೆಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಆಧರಿಸಲು ಒತ್ತಾಯಿಸತಕ್ಕದ್ದಲ್ಲ ಎಂಬುದು ಕಾನೂನಿನಲ್ಲಿ ಉಲ್ಲೇಖವಿದೆ. ಈ ಅಂಶದಂತೆ ಮಂಜೂರಿ ಪ್ರಕ್ರಿಯೆ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯಾದ್ಯಂತ ಅರಣ್ಯವಾಸಿಗಳಿಂದ ಪ್ರತಿಭಟನೆ ನಡೆಯಲಿದೆ. ಆದರೆ ಈ ಹೋರಾಟಕ್ಕೆ ನಿರ್ದಿಷ್ಟ ದಿನಾಂಕವನ್ನು ವೇದಿಕೆ ಗೊತ್ತು ಮಾಡಿಲ್ಲ.
74,220 ಅರ್ಜಿ ತಿರಸ್ಕಾರ
ಹಕ್ಕು ಪತ್ರ ಮಂಜೂರಿಗೆ ಸಂಬಂಧಿಸಿ ಜಿಲ್ಲೆಯಲ್ಲಿ 87,685 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 2,852 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ. ಅವುಗಳಲ್ಲಿ ಬುಡಕಟ್ಟು 1,131, ಪಾರಂಪರಿಕ 394 ಹಾಗೂ ಸಮೂಹ ಉದ್ದೇಶಕ್ಕೆ 1,127 ಮಾನ್ಯತೆ ದೊರಕಿದೆ. ಬಂದಿರುವ ಅರ್ಜಿಗಳಲ್ಲಿ 74,220 ಅರ್ಜಿಗಳು ತಿರಸ್ಕಾರವಾಗಿವೆ. ಅಂದರೆ ಶೇ 74.34ರಷ್ಟು ತಿರಸ್ಕಾರವಾಗಿದ್ದು, ಬಂದಿರುವ ಅರ್ಜಿಗಳಲ್ಲಿ ಶೇ 3.25ರಷ್ಟು ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದಂತಾಗಿದೆ.
ಅರಣ್ಯ ಹಕ್ಕು ಕಾಯಿದೆ: ಸುಪ್ರೀಂನಿಂದ ಕರ್ನಾಟಕ ಸರ್ಕಾರಕ್ಕೆ ತರಾಟೆ
ಸಾಕ್ಷ್ಯ ನೀಡುವಂತೆ ಒತ್ತಾಯಿಸಬಾರದು
‘ಈಗಾಗಲೇ ಉಪ ವಿಭಾಗ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಮೂರು ತಲೆಮಾರಿನ ಕೃಷಿ ಸಾಗುವಳಿ ಮಾಡಿಕೊಂಡು ಅಥವಾ ಜಮೀನಿನ ಮೇಲೆ ಅವಲಂಬಿತವಾಗಿರುವ ಬಗ್ಗೆ ಯಾವುದೇ ದೃಢೀಕೃತ ದಾಖಲೆಯನ್ನು ಸಲ್ಲಿಸದೇ ಇರುವುದರಿಂದ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸುತ್ತಿದೆ. ಆದರೆ, ಕಾನೂನಿನಲ್ಲಿ ನಿರ್ದಿಷ್ಟಪಡಿಸಿದ ಸಾಕ್ಷ್ಯವನ್ನು ಪರಿಗಣಿಸಿ ಹಾಗೂ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯವನ್ನು ಆಧರಿಸಲು ಒತ್ತಾಯಿಸತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಿದೆ.
ದಾಖಲೆ ಆಗ್ರಹಿಸುವುದು ಕಾನೂನಿಗೆ ವ್ಯತಿರಿಕ್ತ
ಅಲ್ಲದೇ, ಕೇಂದ್ರ ಬುಡಕಟ್ಟು ಮಂತ್ರಾಲಯ ಮತ್ತು ಗುಜರಾತ್ ಹೈಕೋರ್ಟ್ ಮೂರು ತಲೆಮಾರಿನ ದಾಖಲೆಯ ಸಾಕ್ಷ್ಯ ಅವಶ್ಯಕತೆಗೆ ಆಗ್ರಹಿಸುವುದು ಕಾನೂನಿಗೆ ವ್ಯತಿರಿಕ್ತವಾಗಿದೆ. ಈ ರೀತಿ ದಾಖಲೆ ಆಗ್ರಹಿಸುವುದು ಕಾನೂನಿಗೆ ವ್ಯತಿರಿಕ್ತವಾಗಿ ಅರ್ಥೈಯಿಸಲಾಗುತ್ತಿದೆ ಎಂದು ಹೇಳಿದೆ. ಅತಿಕ್ರಮಿತ ಪ್ರದೇಶವು ಜನವಸತಿ ಪ್ರದೇಶವೆಂಬ ಕುರುಹುಗಳ ಆಧಾರದ ಮೇಲೆ ಹಕ್ಕನ್ನು ನಿರ್ಧರಿಸಬೇಕೆಂದು ಸ್ಪಷ್ಟಪಡಿಸಿರುವುದು ದಾಖಲಾರ್ಹ ಅಂಶವಾಗಿದೆ' ಎಂದು ವಿವರಿಸುತ್ತಾರೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ.
ಪಿರಿಯಾಪಟ್ಟಣ: ರಾಣಿಗೇಟ್ ಆದಿವಾಸಿಗಳದ್ದು ನರಕದ ಬದುಕು!
ಸಾಮೂಹಿಕವಾಗಿ ಅರ್ಜಿ ನೀಡಲು ಸಿದ್ಧತೆ
‘ಅರಣ್ಯ ಹಕ್ಕು ಕಾಯಿದೆ, ಕೇಂದ್ರ ಬುಡಕಟ್ಟು ಮಂತ್ರಾಲಯ ಮತ್ತು ಗುಜರಾತ್ ಹೈಕೋರ್ಟ್ ಮಂಜೂರಿ ಪ್ರಕ್ರಿಯೆಯಲ್ಲಿ ಮೌಖಿಕ ಮತ್ತು ಪ್ರತ್ಯಕ್ಷ ಸಾಗುವಳಿ ಸಾಕ್ಷ್ಯದ ಮೇಲೆ ಮಂಜೂರಿಗೆ ಮಾನದಂಡ ನಿರ್ಧರಿಸಿದ್ದಾಗ್ಯೂ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಕ್ಕೆ ಆಗ್ರಹಿಸಿರುವುದು ವಿಷಾದಕರ. ಈ ಕಾರಣದಿಂದಾಗಿ ಅರಣ್ಯವಾಸಿಗಳು ಹಕ್ಕಿನಿಂದ ವಂಚಿತರಾಗಿರುವುದು ಖೇದಕರ. ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತಿರುವ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಹಕ್ಕು ದೊರಕಿಸಿಕೊಡುವಲ್ಲಿ ಜಿಲ್ಲಾಧಿಕಾರಿಗೆ ಸಾಮೂಹಿಕವಾಗಿ ಅರ್ಜಿ ನೀಡಲು ನಿರ್ಧರಿಸಲಾಗಿದೆ' ಎಂದು ತಿಳಿಸಿದ್ದಾರೆ.
ಬುಡಕಟ್ಟು ಜನರಿಗೆ ಅರಣ್ಯದಲ್ಲಿ 2 ಎಕರೆ ಜಮೀನು: ಲಕ್ಷ್ಮೀನಾರಾಯಣ
‘ಕಾನೂನು ರಿತ್ಯಾ ಅರ್ಜಿಗಳು ವಿಲೇವಾರಿ ಜರುಗಿದ್ದಲ್ಲಿ ಬಹುತೇಕ ಅರಣ್ಯ ಅತಿಕ್ರಮಣದಾರರಿಗೆ ಅರಣ್ಯಭೂಮಿ ಸಾಗುವಳಿ ಹಕ್ಕು ಸಿಗುವುದರಲ್ಲಿ ಸಂಶಯವಿಲ್ಲ' ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.