ಹಿಂದುಳಿದ ವರ್ಗಗಳ ಅನ್ನವನ್ನು ಯಾರೂ ಕಸಿದುಕೊಳ್ಳಬಾರದು: ಬ್ರಹ್ಮಾನಂದ ಸರಸ್ವತಿ
ಕಾರವಾರ, ಫೆಬ್ರವರಿ 22: ಹಿಂದುಳಿದ ವರ್ಗಗಳ ಹಕ್ಕನ್ನು ಯಾರೂ, ಯಾವುದೇ ರೀತಿಯಲ್ಲಿ ಕಸಿದುಕೊಳ್ಳಬಾರದು. ನಮ್ಮ ಅನ್ನದ ಬಟ್ಟಲನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಹಿಂದುಳಿದ ವರ್ಗಗಳ 2ಎ ಹಿತರಕ್ಷಣಾ ವೇದಿಕೆಯಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನ ಎಂಬುದು ಭಗವಂತ ಇದ್ದ ಹಾಗೆ. ಸೃಷ್ಟಿ, ಸ್ಥಿತಿ, ಲಯ ಕಾಯ್ದುಕೊಳ್ಳುತ್ತದೆ. ಅದಕ್ಕೆ ಪೂರಕವಾಗಿ ಅಂಬೇಡ್ಕರರ ಸಂವಿಧಾನದ ಕಲಂ 14, 15 ತಾರತಮ್ಯ ಮಾಡಬಾರದು ಎಂದಿದೆ ಎಂದು ತಿಳಿಸಿದರು.
ಪಂಚಮಸಾಲಿ ಶ್ರೀ, ಯತ್ನಾಳ್ ಮೇಲೆ ಸಚಿವ ಮುರುಗೇಶ್ ನಿರಾಣಿ ಗಂಭೀರ ಆರೋಪ!
ಕಲಂ 16ರಲ್ಲಿ ಬಡವರ, ಅತಿ ಹಿಂದುಳಿದವರು, ಅತಿ ಹಿಂದುಳಿದ ಪ್ರದೇಶದಲ್ಲಿರುವವರಿಗೆ ಅವರ ಹಕ್ಕನ್ನು ಕಾಯ್ದಿರಿಸಿಕೊಳ್ಳುವ ಅವಕಾಶ ನೀಡಿದೆ. ಅಲ್ಲದೇ ಆ ಹಕ್ಕನ್ನು ಸಂವಿಧಾನ ಕಾಯ್ದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು, ನಾಯಕರು, ಸ್ವಾಮೀಜಿಗಳು ಅವರವರ ಜನರನ್ನು ಓಲೈಸಲು, ಸಂವಿಧಾನದ ಸಿದ್ಧಾಂತವನ್ನು, ಇತಿಮಿತಿಯನ್ನು ಗಾಳಿಗೆ ತೂರುವಂಥದ್ದಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಮಾವೇಶದ ಮೂಲಕ ಸರ್ಕಾರಕ್ಕೊಂದು ಸಂದೇಶ ನೀಡಲಿದ್ದೇವೆ. ಈಗ ಶಾಂತ ರೀತಿಯ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ಪ್ರತಿಫಲ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರತರ ಪ್ರತಿಭಟನೆ ನಡೆಸಲಾಗುವುದು. ಅವರವರ ಜಾತಿ, ಜನಾಂಗಗಳನ್ನು ಹೊಗಳಿಕೊಳ್ಳುವುದು ಆಯಾ ಸ್ವಾಮೀಜಿಗಳ, ನಾಯಕರಿಗೆ ಬಿಟ್ಟ ವಿಚಾರ. ನಾವು ಯಾವುದೇ ಹೊಸ ವಸ್ತುವನ್ನು ಕೇಳುತ್ತಿಲ್ಲ. ಬದಲಿಗೆ ಯಥಾಸ್ಥಿತಿಯನ್ನು ಸಂವಿಧಾನಬದ್ಧವಾಗಿ ಕಾಯ್ದುಕೊಳ್ಳಲು ಒತ್ತಾಯಿಸುತ್ತಿದ್ದೇವೆ ಎಂದರು.
Recommended Video
ಮೀಸಲಾತಿ ನೀಡುವಿಕೆ ಅಷ್ಟೊಂದು ಸಣ್ಣ ವಿಚಾರವಲ್ಲ. ಅಧ್ಯಯನ ಮಾಡಬೇಕು, ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಬೇಕು. ಆದರೆ ಸಮುದಾಯಗಳು ಮನವಿ ಮಾಡಬಹುದು. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಒಂದು ವೇಳೆ ಪಂಚಮಸಾಲಿಗಳನ್ನು 2ಎಗೆ ಸೇರಿಸಲು ಪ್ರಸ್ತಾವ ಸಲ್ಲಿಸಿದರೆ ಮುಂದೆ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಬ್ರಹ್ಮಾನಂದ ಸರಸ್ವತಿ ಎಚ್ಚರಿಸಿದ್ದಾರೆ.