ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ?
ಕಾರವಾರ, ಅಕ್ಟೋಬರ್ 18: ಕಾರವಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ, ಕಾರವಾರದ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ತೆರೆಮರೆಯ ಪ್ರಯತ್ನ ಇನ್ನೂ ಪ್ರಗತಿಯಲ್ಲಿದೆ. ಇದರಿಂದಾಗಿ ನಗರಸಭೆಯ ಆಡಳಿತ ಯಾರ ಪಾಲಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿಸಿದೆ.
ಕಾರವಾರ ನಗರಸಭೆಯ 31 ಸ್ಥಾನದಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 11 ಸ್ಥಾನದಲ್ಲಿ ಗೆಲುವನ್ನು ಪಡೆದಿದ್ದರೆ, ಜೆಡಿಎಸ್ 4 ಹಾಗೂ ಪಕ್ಷೇತರರು 5 ಸ್ಥಾನದಲ್ಲಿ ಗೆಲುವನ್ನು ಪಡೆದಿದ್ದರು. ಯಾರೇ ಅಧಿಕಾರಕ್ಕೆ ಬರಬೇಕಾದರೂ ಪಕ್ಷೇತರರ ಅಥವಾ ಜೆಡಿಎಸ್ ಸದಸ್ಯರ ಬೆಂಬಲ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಅಧಿಕಾರಕ್ಕೇರಲು ಪ್ರಯತ್ನ ಚುರುಕುಗೊಂಡಿದೆ.
ಬಿಜೆಪಿ ಹಾಗೂ ಜೆಡಿಎಸ್ ಆಸಕ್ತಿ
ಮೂಲಗಳ ಪ್ರಕಾರ, ನಗರಸಭೆಯ ಅಧಿಕಾರವನ್ನು ಹಿಡಿಯಲು ಬಿಜೆಪಿ ಹಾಗೂ ಜೆಡಿಎಸ್ ಆಸಕ್ತಿ ವಹಿಸಿದೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಶಾಸಕಿ ರೂಪಾಲಿ ನಾಯ್ಕ ತಮ್ಮ ಪಕ್ಷದ ಸದಸ್ಯರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇನ್ನೊಂದೆಡೆ ಬಿಜೆಪಿಯ ಕೆಲ ಮುಖಂಡರು ಜೆಡಿಎಸ್ ಬೆಂಬಲ ಕೋರಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೊತೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.
ಮಾಜಿ ಶಾಸಕ ಸತೀಶ್ ಸೈಲ್ ಆಯ್ಕೆ ಅಕ್ರಮ: ಉಸ್ತುವಾರಿ ಸಚಿವರಿಗೆ ದೂರು
ಸದ್ಯ ಬಿಜೆಪಿ ತಮಗೆ ಬಾಹ್ಯ ಬೆಂಬಲ ಕೊಡುವಂತೆ ಜೆಡಿಎಸ್ ಬಳಿ ಮನವಿಯನ್ನು ಮಾಡಿಕೊಂಡಿದ್ದು, ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಕ್ಷದವರಿಗೆ ನೀಡಲಾಗುವುದು ಎನ್ನುವ ಸಂದೇಶವನ್ನು ಜೆಡಿಎಸ್ ಪಕ್ಷಕ್ಕೆ ನೀಡಿದೆ ಎನ್ನಲಾಗಿದೆ. ಅಲ್ಲದೇ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬೇಕಾದರೆ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲು ನಿರ್ಧರಿಸಿದೆ ಎನ್ನಲಾಗಿದೆ.
ಸುಗಮ ಆಡಳಿತ ನಡೆಸಲು ಬಿಜೆಪಿಗೆ ಬೆಂಬಲ
ಇನ್ನು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬಿಜೆಪಿಯ ಬೇಡಿಕೆಗೆ ಇನ್ನೂ ಒಪ್ಪಿಗೆ ನೀಡಿಲ್ಲ ಎನ್ನುತ್ತಿವೆ ಮೂಲಗಳು. ತಮ್ಮ ಪಕ್ಷದ ನಾಲ್ವರು ಸದಸ್ಯರು ಹಾಗೂ ಇಬ್ಬರು ಪಕ್ಷೇತರರು ಸುಗಮ ಆಡಳಿತ ನಡೆಸಲು ಬಿಜೆಪಿಗೆ ಬೆಂಬಲ ಕೊಡುತ್ತೇವೆ. ಆದರೆ ಉಪಾಧ್ಯಕ್ಷ ಸ್ಥಾನವನ್ನು ಮೀನುಗಾರ ಮುಖಂಡ ಹಾಗೂ ಪಕ್ಷದ ಸದಸ್ಯ ರಾಜೇಶ್ ಮಾಜಾಳಿಕರ್ ಅವರಿಗೆ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆನ್ನಲಾಗಿದ್ದು, ಇದಕ್ಕೆ ಬಿಜೆಪಿ ಇನ್ನೂ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದು ಬಂದಿದೆ.
ಶತಾಯಗತಾಯ ಅಧಿಕಾರಕ್ಕೆ ತರಬೇಕು
ಇನ್ನೊಂದೆಡೆ, ಈ ಹಿಂದೆ ಚುನಾವಣೆಯಾದ ಸಂದರ್ಭದಲ್ಲಿ ಕಾಂಗ್ರೆಸ್ ಶತಾಯಗತಾಯ ಅಧಿಕಾರಕ್ಕೆ ತರಬೇಕು ಎಂದು ಮಾಜಿ ಶಾಸಕ ಸತೀಶ್ ಸೈಲ್ ಆಸಕ್ತಿ ವಹಿಸಿದ್ದರು. ಆದರೆ ಇದೀಗ ತಮ್ಮ ಆಸಕ್ತಿಯನ್ನು ಕಡಿಮೆ ಮಾಡಿದ್ದಾರೆನ್ನಲಾಗಿದೆ. ಸೈಲ್ ಅವರಿಗೆ ಕಳೆದ ಬಾರಿ ಕೆಡಿಎ ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಕೋಮಾರಪಂಥ ಸಮುದಾಯದ ಮೋಹನ್ ನಾಯ್ಕರನ್ನು ಈ ಬಾರಿ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಬಯಕೆಯನ್ನು ಹೊಂದಿದ್ದರು ಎನ್ನಲಾಗಿತ್ತು.
ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ
ಅಲ್ಲದೇ ಮೂರು ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ವಿಂಗಡಿಸಿ, ಮೊದಲ ಅವಧಿಯಲ್ಲಿ ಮೋಹನ್ ನಾಯ್ಕ್, ಎರಡನೇ ಅವಧಿಯಲ್ಲಿ ಸಂದೀಪ್ ತಳೇಕರ್ ಹಾಗೂ ಮೂರನೇ ಅವಧಿಗೆ ಪಕ್ಷೇತರ ಸದಸ್ಯನೋರ್ವನಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎನ್ನುವ ಚಿಂತನೆಯನ್ನು ಸೈಲ್ ಮಾಡಿದ್ದರು ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಆಡಳಿತಕ್ಕೆ ಬರಲು ಪಕ್ಷೇತರರ ಹಾಗೂ ಜೆಡಿಎಸ್ ಸದಸ್ಯರ ಬೆಂಬಲ ಬೇಕೇ ಬೇಕಾಗಿದ್ದು, ಸದ್ಯ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಆಸಕ್ತಿ ವಹಿಸಿರುವ ವಿಷಯ ತಿಳಿಯುತ್ತಿದ್ದಂತೆ ಸೈಲ್ ಸುಮ್ಮನಾಗಿದ್ದಾರೆನ್ನಲಾಗಿದೆ. ಒಟ್ಟಾರೆ, ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವು ಮಾಡಿದ ನಂತರ ಮತ್ತೆ ಅಧಿಕಾರಕ್ಕೆ ಏರಲು ತೆರೆ ಮರೆಯ ಪ್ರಯತ್ನ ಇನ್ನೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎನ್ನಬಹುದಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಪಕ್ಷದಿಂದ ಐವರು ಆಕಾಂಕ್ಷಿಗಳು
ಇನ್ನೊಂದೆಡೆ, ಅಂಕೋಲಾ ಪುರಸಭೆಯ ಆಡಳಿತವನ್ನು ಹಿಡಿಯುವಲ್ಲಿ ಬಿಜೆಪಿ ಬಹುತೇಕ ಯಶಸ್ವಿಯಾಗುವ ಸಾಧ್ಯತೆ ಇದೆ. ಒಟ್ಟು 23 ಸ್ಥಾನ ಬಲದ ಪುರಸಭೆಯಲ್ಲಿ 8 ಬಿಜೆಪಿ, 10 ಕಾಂಗ್ರೆಸ್ ಹಾಗೂ 5 ಪಕ್ಷೇತರರು ಗೆಲುವನ್ನು ಪಡೆದಿದ್ದರು. ಅಧಿಕಾರಕ್ಕೆ ಏರಲು 13 ಸದಸ್ಯರ ಬಲ ಬೇಕಾಗಿದ್ದು, ಬಿಜೆಪಿಗೆ ಈಗಾಗಲೇ ಮೂವರು ಪಕ್ಷೇತರ ಸದಸ್ಯರ ಬೆಂಬಲ ನೀಡಿದ್ದಾರೆನ್ನಲಾಗಿದೆ. ಅಲ್ಲದೇ ಶಾಸಕರ ಹಾಗೂ ಸಂಸದರ ಮತ ಸೇರಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಇನ್ನು, ಶಾಸಕಿ ರೂಪಾಲಿ ನಾಯ್ಕ ಈ ಬಗ್ಗೆ ತಮ್ಮ ಪಕ್ಷದ ಸದಸ್ಯರ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಪಕ್ಷದಿಂದ ಐವರು ಆಕಾಂಕ್ಷಿಗಳಿರುವುದರಿಂದ ಯಾರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ನಿರ್ಧಾರವನ್ನ ಪಕ್ಷದ ಮುಖಂಡರಿಗೆ ಬಿಟ್ಟಿದ್ದಾರೆನ್ನಲಾಗಿದೆ.