ಕಾರವಾರ ಕಡಲಿನಲ್ಲಿ ದುರಂತ, ನೌಕಾದಳ ಅಧಿಕಾರಿ ಸಾವು
ಕಾರವಾರ, ಅ. 2: ಆಗಸದಲ್ಲಿ ಹಾರುತ್ತಿದ್ದ ಪ್ಯಾರಾ ಮೊಟಾರ್ ಗಾಳಿಯ ರಭಸಕ್ಕೆ ಸುತ್ತಿಕೊಂಡು ನಗರದ ಟ್ಯಾಗೋರ್ ಕಡಲಿನಲ್ಲಿ ಬಿದ್ದಿದೆ. ಘಟನೆಯಲ್ಲಿ ಭಾರತೀಯ ನೌಕಾದಳದ ಕಮಾಂಡೆಂಟ್ ಮೃತಪಟ್ಟಿದ್ದರೆ, ಪೈಲಟ್ ಅನ್ನು ರಕ್ಷಣೆ ಮಾಡಲಾಗಿದೆ.
ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಮಾಂಡೆಂಟ್ ಆಗಿದ್ದ ಆಂಧ್ರ ಮೂಲದ ಮಧುಸೂದನ ರೆಡ್ಡಿ (56) ತಮ್ಮ ಬೆಂಗಳೂರು ಮೂಲದ ಸ್ನೇಹಿತರೊಂದಿಗೆ ಪ್ಯಾರಾ ಮೋಟಾರಿಂಗ್ ಮಾಡಲು ಕಡಲತೀರಕ್ಕೆ ಬಂದಿದ್ದರು.
ಅವರ ಕುಟುಂಬಸ್ಥರು ಹಾಗೂ ಸ್ನೇಹಿತರ ಕುಟುಂಬದವರೆಲ್ಲ ಪ್ಯಾರಾ ಮೊಟಾರಿಂಗ್ ಮಾಡಿದ ಬಳಿಕ ಕೊನೆಯಲ್ಲಿ ಪೈಲಟ್ ವಿದ್ಯಾಧರ್ ವೈದ್ಯ ಅವರ ಜೊತೆಗೂಡಿ ರೆಡ್ಡಿ ಅವರು ಕೂಡಾ ಮೋಟಾರಿಂಗ್ ನಲ್ಲಿ ಹಾರಾಟ ನಡೆಸುತ್ತಿದ್ದರು. ಈ ವೇಳೆ ಗಾಳಿಯ ರಭಸಕ್ಕೆ ಪ್ಯಾರಾ ಮೋಟಾರ್ ನ ಪ್ಯಾರಾಚೂಟ್ ಸುತ್ತಿಕೊಂಡು ಇಬ್ಬರೂ ಸಮುದ್ರದಲ್ಲಿ ಬಿದ್ದಿದ್ದಾರೆ.
ತಕ್ಷಣಕ್ಕೆ ಸ್ಥಳದಲ್ಲಿದ್ದವರು, ಮೀನುಗಾರರು ದೋಣಿಯಲ್ಲಿ ರಕ್ಷಣಾ ಕಾರ್ಯ ನಡೆಸಿ ಪೈಲಟ್ ಅನ್ನು ದಡಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿದ್ದು, ಅವರು ಬಚಾವಾಗಿದ್ದಾರೆ. ಆದರೆ, ಪ್ಯಾರಾ ಮೊಟಾರ್ ನ ದಾರ ಕಾಲಿಗೆ ಸುತ್ತಿಕೊಂಡು ಸಮುದ್ರದಿಂದ ಮೇಲೇಳಲಾಗದೆ ರೆಡ್ಡಿ ಹತರಾಗಿದ್ದರು.
Recommended Video
ರೆಡ್ಡಿ ಅವರನ್ನು ಕೂಡ ದಡಕ್ಕೆ ತಂದು ಬದುಕುಳಿಸುವ ಪ್ರಯತ್ನ ಮಾಡಲಾಯಿತು. ಆದರೆ ಪ್ರಯತ್ನ ವಿಫಲವಾಯಿತು. ಸಮೀಪದಲ್ಲೇ ಜಿಲ್ಲಾ ಆಸ್ಪತ್ರೆ ಇದ್ದರೂ ಸಮಯಕ್ಕೆ ಅಂಬ್ಯುಲೆನ್ಸ್ ಬಾರದ ಕಾರಣ ಅವರನ್ನು ಕಾರವಾರ ನಗರ ಠಾಣೆಯ ಪಿಎಸ್ಐ ಸಂತೋಷ್ ಅವರ ಜೀಪಿನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.