ಸಮುದ್ರ ಸ್ನಾನಕ್ಕೆ ಸಂಪೂರ್ಣ ನಿರ್ಬಂಧ: ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ
ಕಾರವಾರ, ಮಾರ್ಚ್ 27: ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ಹೋಳಿ ಆಚರಣೆ ಜೊತೆಗೆ ಕರಾವಳಿಯಲ್ಲಿ ಸೋಮವಾರದ ಸಮುದ್ರ ಸ್ನಾನಕ್ಕೂ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಹೇಳಿದ್ದಾರೆ.
ಹೋಳಿ ಸಾಂಪ್ರದಾಯಿಕ ಆಚರಣೆಯಾದರೂ ಸಹ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಜನರು ಸ್ವಯಂ ಪ್ರೇರಿತರಾಗಿ ನಿರ್ಬಂಧ ವಿಧಿಸಿಕೊಳ್ಳಬೇಕು. ಈಗಾಗಲೇ ಸರ್ಕಾರ ಸಾರ್ವಜನಿಕ ಪ್ರದೇಶದಲ್ಲಿ ಹೋಳಿ ಆಚರಣೆಗೆ ನಿರ್ಬಂಧ ವಿಧಿಸಿ ಆದೇಶಿಸಿದೆ. ಎಲ್ಲರೂ ತಪ್ಪದೇ ಈ ಆದೇಶ ಪಾಲಿಸಬೇಕು. ಜತೆಗೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪ್ರತಿ ವರ್ಷ ಹೋಳಿ ಆಡಿದ ಬಳಿಕ ಮಾಡುವ ಸಮುದ್ರ ಸ್ನಾನ ಪದ್ಧತಿಯನ್ನು ಈ ಬಾರಿ ನಿಲ್ಲಿಸಬೇಕಿದೆ ಎಂದು ಸೂಚಿಸಿದ್ದಾರೆ.
ಈಗಾಗಲೇ ಕಡಲ ತೀರಗಳಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ. ಒಂದೊಮ್ಮೆ ಆದೇಶ ಉಲ್ಲಂಘಿಸಿದವರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆ 1897 ಮತ್ತು ಭಾರತೀಯ ದಂಡ ಸಂಹಿತೆ 188 ಅಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಕೊರೋನಾ ಹರಡದಂತೆ ತಡೆಯಲು ಎಲ್ಲರೂ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸಬೇಕಿದೆ ಎಂದವರು ಮನವಿ ಮಾಡಿದ್ದಾರೆ.