ಉತ್ತರ ಕನ್ನಡದ ಸುಭಾಶಚಂದ್ರಗೆ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ
ಕಾರವಾರ, ಡಿಸೆಂಬರ್ 25: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಉತ್ತರ ಕನ್ನಡ ಜಿಲ್ಲಾ ವರದಿಗಾರ ಸುಭಾಶಚಂದ್ರ ಎನ್.ಎಸ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜನವರಿ 3 ಮತ್ತು 4ರಂದು ಕಲಬುರಗಿಯಲ್ಲಿ ನಡೆಯುವ ೩೬ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅತ್ಯುತ್ತಮ ಮಾನವೀಯ ವರದಿಗಳಿಗೆ ನೀಡುವ ಪಟೇಲ್ ಭೈರಹನುಮಯ್ಯ ಪ್ರಶಸ್ತಿಗೆ ಸುಭಾಶಚಂದ್ರರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ.
ಕಳೆದ 21 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುಭಾಶಚಂದ್ರ ಎನ್.ಎಸ್, ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಪದವಿಯವರೆಗೂ ಕನ್ನಡದಲ್ಲೇ ಶಿಕ್ಷಣ ಪಡೆದಿದ್ದರು. 2000ರಲ್ಲಿ ಕನ್ನಡ ವಿದ್ಯುನ್ಮಾನ ಕ್ಷೇತ್ರದ ಮೂಲಕ ಮಾಧ್ಯಮ ರಂಗಕ್ಕೆ ಪಾದಾರ್ಪಣೆ ಮಾಡಿದರು.
ಈಟಿವಿ ಕನ್ನಡದಲ್ಲಿ ಹೈದರಾಬಾದ್ನಲ್ಲಿ ನಿರೂಪಕರಾಗಿ ಆಯ್ಕೆಯಾಗಿದ್ದ ಅವರು, ಕಾರ್ಯನಿರ್ವಹಿಸಿದ್ದು ವರದಿಗಾರರಾಗಿ. ನಂತರದಲ್ಲಿ 2003ರಲ್ಲಿ ಪ್ರಥಮ ಬಾರಿಗೆ ವಿಜಯ ಟೈಮ್ಸ್ನಲ್ಲಿ ಬೆಂಗಳೂರಿನಲ್ಲಿ ವರದಿಗಾರರಾಗಿ ಸೇರ್ಪಡೆಗೊಂಡು, ಅರಣ್ಯ, ಪರಿಸರ, ವಿದ್ಯುತ್, ಲೋಕಾಯುಕ್ತಕ್ಕೆ ಸಂಬಂಧಿಸಿದ ಸಾಕಷ್ಟು ವರದಿಗಳನ್ನು ಬರೆದರು.
ಅಲ್ಲಿಂದ 2007ರಲ್ಲಿ ಹುಬ್ಬಳ್ಳಿಯಲ್ಲಿ ಇಂಡಿಯನ್ ಎಕ್ಸ್ಪ್ರೆಸ್ಗೆ ಒಂದು ವರ್ಷಗಳ ಕಾಲ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, ನಂತರದಲ್ಲಿ ಹೈಕೋರ್ಟ್, ಪರಿಸರ, ವೈಜ್ಞಾನಿಕ ಮತ್ತು ರಾಜಕೀಯ ವರದಿಗಾರಿಕೆಗಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಬೆಂಗಳೂರು ವರದಿಗಾರರಾಗಿ ನೇಮಕಗೊಂಡರು. ಅಲ್ಲಿ ಸುಭಾಶಚಂದ್ರ ಲೇಖನಿಯಲ್ಲಿ ಮೂಡಿದ ಅನೇಕ ವರದಿಗಳು ಸುಮೊಟೊ ಪ್ರಕರಣಗಳಾಗಿ ದಾಖಲಾದವು.
ಮಾನವೀಯ ವರದಿಯೊಂದಕ್ಕೆ ಸಂಬಂಧಿಸಿ ಅಂದಿನ ಹೈಕೋರ್ಟ್ ನ್ಯಾಯಾಧೀಶ ಗೋಪಾಲ ಗೌಡರವರು ವೈಯಕ್ತಿಕವಾಗಿ ಸುಭಾಶಚಂದ್ರ ಅವರನ್ನು ಅಭಿನಂದಿಸಿ, ಆ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡಲು ಮುಂದಾದರು.
ಆನೆಗಳ ಸಾವಿನ ಕುರಿತಂತೆ ಪ್ರಕಟವಾಗಿದ್ದ ಅವರ ಸರಣಿ ವರದಿಗೆ ಸಂಬಂಧಿಸಿ ಈಗಲೂ ಸುಮೊಟೊ ಪಿಐಎಲ್ ಹೈಕೋರ್ಟ್ನಲ್ಲಿ ಚಾಲ್ತಿಯಲ್ಲಿದೆ. ಇನ್ನು ಅಲ್ಲಿಂದ 2015ರಲ್ಲಿ ಸುದ್ದಿ ಟಿವಿಗೆ ಇನ್ಪುಟ್ ಎಡಿಟರ್ ಆಗಿ, 2017ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಬಳ್ಳಾರಿಯ ಜಿಲ್ಲಾ ಮತ್ತು ಪ್ರಧಾನ ವರದಿಗಾರರಾಗಿ ನೇಮಕಗೊಂಡು, ನಂತರ ಅಲ್ಲಿಂದ 2020ರಲ್ಲಿ ಕಾರವಾರಕ್ಕೆ ವರ್ಗಾವಣೆಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಮುಖವಾಗಿ ಬಳ್ಳಾರಿ ಜಿಲ್ಲೆಯ ಉಜಿನಿ ಪೀಠದಿಂದ 'ಸಧರ್ಮ ಪ್ರಸಾರ ರತ್ನ' ಪ್ರಶಸ್ತಿಯನ್ನು ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪಡೆದಿರುವ ಸುಭಾಶಚಂದ್ರ ಅವರಿಗೆ 2019ರಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕೂಡ ದೊರೆತಿದೆ. ಇದರೊಂದಿಗೆ ಅನೇಕ ಗೌರವ- ಸಮ್ಮಾನಗಳಿಗೂ ಅವರು ಭಾಜನರಾಗಿದ್ದಾರೆ. ಸುಭಾಶಚಂದ್ರ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಕಾರವಾರ ಜಿಲ್ಲಾ ಕೇಂದ್ರದ ಎಲ್ಲಾ ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.
ಅತ್ಯುತ್ತಮ
ವರದಿಗಳಿಗೆ
ನೀಡುವ
ಇತರ
ಪ್ರಶಸ್ತಿಗಳು
*
ಅತ್ಯುತ್ತಮ
ಗ್ರಾಮಾಂತರ
ವರದಿಗಾಗಿ
ಜಿ.
ನಾರಾಯಣಸ್ವಾಮಿ
ಪ್ರಶಸ್ತಿಯನ್ನು
ಬೆಳಗಾವಿಯ
ಈಶ್ವರ
ಹೋಟಿ
ಮತ್ತು
ಬಾಗಲಕೋಟೆಯ
ಎಂ.ಎಚ್.
ನದಾಫ್ರಿಗೆ
ನೀಡಲಾಗಿದೆ.
* ಅತ್ಯುತ್ತಮ ಮಾನವೀಯ ವರದಿಗಾಗಿ ಕಾರವಾರದ ಸುಭಾಶಚಂದ್ರ. ಎನ್. ಎಸ್ ಹಾಗೂ ಹಾವೇರಿಯ ಕರಿಯಪ್ಪ ಚೌಡಕ್ಕನವರರಿಗೆ ಪಟೇಲ್ ಬೈರಹನುಮಯ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
* ಅತ್ಯುತ್ತಮ ಅಪರಾಧ ವರದಿಗಾಗಿ ಗಿರೀಶ್ ಹಾಗೂ ವಾದಿರಾಜ್ಗೆ ಗಿರಿಧರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
* ಅತ್ಯುತ್ತಮ ಕ್ರೀಡಾ ವರದಿಗಾಗಿ ಮೈಸೂರಿನ ಕಾರ್ತೀಕ್ ಹಾಗೂ ಮಾಗಡಿಯ ಟಿ.ಎನ್. ಪದ್ಮನಾಭರಿಗೆ ಕೆ.ಎ. ನೆಟ್ಟಕಲ್ಲಪ್ಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
* ಸುದ್ದಿ ವಿಮರ್ಶೆಗಾಗಿ ಬಿ.ಎನ್ ಮುರುಳಿಪ್ರಸಾದ್ ಹಾಗೂ ಶಿವಕುಮಾರ್ ಬೆಳ್ಳಿತಟ್ಟೆಯವರನ್ನು ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
* ವಾರ ಪತ್ರಿಕೆ ಮೀಸಲಿಗಾಗಿ ಉಮಾವೇಣೂರು(ಸುಧಾ) ಮತ್ತು ಎಸ್. ಜಯರಾಜ್ರನ್ನು ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Recommended Video