ವಿಡಿಯೋ ಮಾಡಿ ಹರಿಬಿಟ್ಟ ಕೊರೊನಾ ಸೋಂಕಿತ: ಸ್ಪಷ್ಟನೆ ನೀಡಿದ ಕ್ರಿಮ್ಸ್
ಕಾರವಾರ, ಜುಲೈ 12: ಕಾರವಾರ ನಗರದ ಮೆಡಿಕಲ್ ಕಾಲೇಜಿನಲ್ಲಿರುವ ಕೋವಿಡ್- 19 ವಾರ್ಡಿನಲ್ಲಿ ಅವ್ಯವಸ್ಥೆ ಇದೆ ಎಂದು ಕಾರವಾರ ಮೂಲದ ಸೋಂಕಿತನೋರ್ವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಶನಿವಾರ ನಡೆದಿದೆ. ಕ್ಷಣಾರ್ಧದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅವ್ಯವಸ್ಥೆಯ ಕುರಿತು ನೆಟ್ಟಿಗರು ಕಿಡಿಕಾರಿದ್ದಾರೆ.
ಕೋವಿಡ್ ವಾರ್ಡಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಎಲ್ಲೆಂದರಲ್ಲಿ ಕಸ ಬಿದ್ದಿದೆ. ಪಿಪಿಇ ಕಿಟ್ ಗಳನ್ನು ಸಹ ಬೇಕಾಬಿಟ್ಟಿ ಎಸೆಯಲಾಗಿದೆ. ಇನ್ನು, ಕೈತೊಳೆಯುವ ಜಾಗದಲ್ಲಿ ಸಹ ಸರಿಯಾದ ಸ್ವಚ್ಛತೆಯಿಲ್ಲ. ಮೃತ ಸೋಂಕಿತ ಬಳಸಿದ್ದ ವಸ್ತುಗಳನ್ನೂ ಹಾಗೆಯೇ ಬಿಟ್ಟಿದ್ದಾರೆ ಎಂದು ಸೋಂಕಿತನೋರ್ವ ವಿಡಿಯೋ ಮಾಡಿ ಶನಿವಾರ ಬೆಳಿಗ್ಗೆ ಹರಿಬಿಟ್ಟಿದ್ದ. ಕೋವಿಡ್ ವಾರ್ಡ್ ಅನ್ನು ನೋಡಿಕೊಳ್ಳುತ್ತಿರುವ ವೈದ್ಯರು, ಸಿಬ್ಬಂದಿಗಳು ಸ್ವಚ್ಛತೆಗೆ ಆದ್ಯತೆ ನೀಡುವಂತೆ ವಿಡಿಯೋದಲ್ಲಿ ಆತ ಹೇಳಿಕೊಂಡಿದ್ದ.
ಕಾರವಾರ: ಯಾರ ಸಂಪರ್ಕ, ಟ್ರಾವೆಲ್ ಹಿಸ್ಟರಿ ಇಲ್ಲದೇ ದೃಢಪಡುತ್ತಿದೆ ಕೊರೊನಾ ವೈರಸ್
ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಲವರು ವಿಡಿಯೋ ಶೇರ್ ಮಾಡಿ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಕೂಡಲೇ ಕೊರೊನಾ ವೈರಸ್ ಸೋಂಕಿತರು ಇರುವ ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಅವ್ಯವಸ್ಥೆ ಅಲ್ಲಗೆಳೆದ ಆಸ್ಪತ್ರೆ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್-19 ವಾರ್ಡಿನಲ್ಲಿ ಅವ್ಯವಸ್ಥೆ ಇದೆ ಎಂದು ಸೋಂಕಿತನೋರ್ವ ಮಾಡಿದ ಆರೋಪವನ್ನು ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ಅಲ್ಲಗೆಳೆದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಆರೋಪ ಮಾಡಿದ ಕಾರವಾರ ಮೂಲದ ಯುವಕ ಶುಕ್ರವಾರ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ. ಆತ ಮಾಡಿದ ಆರೋಪ ಅನಾವಶ್ಯಕವಾಗಿದೆ. ಕೋವಿಡ್-19 ವಾರ್ಡಿನಲ್ಲಿ ಸ್ವಚ್ಛತೆ ಮಾಡಲು ಕೆಲವು ನಿಯಮಾವಳಿಗಳಿವೆ. ಪ್ರತಿದಿನ ಸಂಜೆ 4 ಗಂಟೆಗೆ ಸ್ವಚ್ಛತಾ ಸಿಬ್ಬಂದಿಗಳು ಬಂದು ತ್ಯಾಜ್ಯಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ಕೆಟ್ಟ ಹೆಸರು ತರುವುದು ಸರಿಯಲ್ಲ
ಕಾರವಾರದ ಕೋವಿಡ್- 19 ವಾರ್ಡಿನಲ್ಲಿ ಹಲವರಿಗೆ ಚಿಕಿತ್ಸೆ ನೀಡಿದ್ದು, ಸದ್ಯ 60 ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ಮುಂದುವರಿದಿದೆ. 200 ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದು, ನೀಡಿದ ಚಿಕಿತ್ಸೆಗೆ ಪ್ರಶಂಸೆ ವ್ಯಕ್ತಪಡಿಸಿ ಹೋಗಿದ್ದಾರೆ. ಸೋಂಕಿತರ ಮನಸ್ಸಿನ ಮೇಲೆ ಪರಿಣಾಮ ಬೀರಬಾರದು ಎಂದು ಮೊಬೈಲ್ ಬಳಕೆಗೆ ಅವಕಾಶ ನೀಡಿದ್ದೇವೆ. ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡು ಆಸ್ಪತ್ರೆಗೆ ಕೆಟ್ಟ ಹೆಸರು ತರುವುದು ಸರಿಯಲ್ಲ. ಇದು ಕೊರೊನಾ ನಿಯಂತ್ರಣಕ್ಕೆ ದುಡಿಯುತ್ತಿರುವವರಿಗೆ ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರು ಉತ್ತರ ಕನ್ನಡ ಜಿಲ್ಲೆಯ 'ಕೊರೊನಾ ವಾರಿಯರ್ಸ್'...
ಇದೇ ಮೊದಲೇನಲ್ಲ
ಈ ಹಿಂದೆಯೂ ಶಿರಸಿ ಮೂಲದ ಸೋಂಕಿತೆಯೊಬ್ಬರು ವಾರ್ಡ್ ನ ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿ ಹರಿ ಬಿಟ್ಟಿದ್ದರು. ಆಗ ಆಸ್ಪತ್ರೆಯ ಸಿಬ್ಬಂದಿ ಕೂಡಲೇ ವಾರ್ಡ್ ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಮಾಧ್ಯಮಗಳಲ್ಲಿ ವರದಿಯಾಗದಂತೆ ನೋಡಿಕೊಂಡಿದ್ದರು.
ಸೋಂಕಿತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ (ಕ್ರಿಮ್ಸ್) ಸ್ಪಷ್ಟನೆಯ ಪ್ರಕಟಣೆ ನೀಡಲಾಗಿತ್ತು. ಪ್ರಕಟಣೆಯಲ್ಲಿ ಸೋಂಕಿತ ಕಾರವಾರ ತಾಲೂಕಿನ ಸಿದ್ದರ ಗ್ರಾಮದವನು ಎಂದು ನಮೂದಿಸಿದ್ದು, ಇದು ಸಿದ್ದರ ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದೆ.
ನಮ್ಮ ಗ್ರಾಮದಲ್ಲಿ ಯಾವ ಸೋಂಕಿತರೂ ಇಲ್ಲ
ಸೋಂಕಿತ ತಾಲೂಕಿನ ಶಿರವಾಡ ಭಾಗದವನಾಗಿದ್ದು, ಆ ಗ್ರಾಮ ಸಿದ್ದರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಬರುತ್ತದೆ. ಆದರೆ, ಸಿದ್ದರ ಗ್ರಾಮದವನು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿರುವುದು ಊರಿನವರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನಮ್ಮ ಗ್ರಾಮದಲ್ಲಿ ಯಾವ ಸೋಂಕಿತರೂ ಇಲ್ಲ. ಸುಮ್ಮನೆ ಗ್ರಾಮದ ಹೆಸರು ಬಂದಿರುವುದರಿಂದ ಗ್ರಾಮದ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಆಸ್ಪತ್ರೆ ಅಥವಾ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು' ಎಂದು ಬಿಜೆಪಿ ಮುಖಂಡ ರಾಜೇಶ್ ನಾಯಕ ಸಿದ್ದರ್ ಆಗ್ರಹಿಸಿದ್ದಾರೆ.