ಕಾರವಾರದಲ್ಲಿ ಹಿಂದಿ ನಾಮಫಲಕಕ್ಕೆ ಮಸಿ ಬಳಿದ ಕರವೇ
ಕಾರವಾರ, ಜೂನ್ 14: ನಗರಸಭೆಯಿಂದ ವಾರ್ಡ್ಗಳಿಗೆ ಕನ್ನಡದ ಜೊತೆಗೆ ಮರಾಠಿ ಹಾಗೂ ಕೊಂಕಣಿ ಅರ್ಥ ಬರುವಂತೆ ಹಿಂದಿಯಲ್ಲಿ ನಾಮಫಲಕ ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ನಾಮಫಲಕದಲ್ಲಿನ ಅನ್ಯ ಭಾಷೆಗೆ ಮಸಿ ಬಳಿದು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋವಾ ಹಾಗೂ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ವಿಷಯವಾಗಿ ಆಗಾಗ ಎರಡು ರಾಜ್ಯದ ಮುಖಂಡರುಗಳು ಕ್ಯಾತೆ ತೆಗೆಯುತ್ತಲೇ ಇರುತ್ತಾರೆ. ಆದರೆ ಈ ಭಾರೀ ಕಾರವಾರ ನಗರಸಭೆಯ ಮಾಡಿರುವ ಎಡವಟ್ಟು ಭಾಷಾ ವಿವಾದಕ್ಕೆ ಕಾರಣವಾಗಿದೆ.
ಕಾರವಾರದಲ್ಲಿ ಮರಾಠಿ ಭಾಷೆಯಲ್ಲಿ ವಾರ್ಡ್ಗಳ ನಾಮಫಲಕ; ಕನ್ನಡಪರ ಸಂಘಟನೆಗಳ ಆಕ್ರೋಶ
ವಾರ್ಡ್ಗಳಿಗೆ ಅಳವಡಿಸಿದ ನಾಮಫಲಕಗಳಲ್ಲಿ ಕನ್ನಡದ ಜೊತೆಗೆ ಕೊಂಕಣಿ ಹಾಗೂ ಮರಾಠಿ ಅರ್ಥಬರುವಂತೆ ಹಿಂದಿ ಅಕ್ಷರಗಳಲ್ಲಿ ಬರೆದು ಅಳವಡಿಸಿರುವುದನ್ನು ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಆದರೆ ಕಾರವಾರ ರಾಜ್ಯದಲ್ಲಿ ಬೆಳೆಯುತ್ತಿರುವ ನಗರವಾಗಿರುವ ಕಾರಣ ಹಾಗೂ ಇಲ್ಲಿನ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಕಾರಣ ಕೇವಲ ಕನ್ನಡದಲ್ಲಿದ್ದರೆ ಅರ್ಥ ಆಗುವುದಿಲ್ಲ ಎಂಬುದು ನಗರಸಭೆಯ ವಾದ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂಬ ಸರ್ಕಾರದ ನಿಯಮವಿದೆ. ಆದರೆ ಕನ್ನಡದ ಜೊತೆಗೆ ಬೇರೆ ಭಾಷೆ ಬಳಸಬಾರದು ಎಂದು ಎಲ್ಲಿಯೂ ಇಲ್ಲ ಎಂದಿದ್ದಾರೆ.
ಕಾರವಾರ ನಗರಸಭೆಯ ಕ್ರಮವನ್ನು ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು, ಬಳಿಕ ನಗರದ ವಿವಿಧ ರಸ್ತೆಗಳಲ್ಲಿ ನಗರಸಭೆ ಅಳವಡಿಸಿದ್ದ ನಾಮಫಲಕಗಳಲ್ಲಿನ ಕನ್ನಡ ಬಿಟ್ಟು ಇತರೆ ಭಾಷೆಯ ಅಕ್ಷರಗಳಿಗೆ ಮಸಿ ಬಳಿದರು. ಇತ್ತೀಚೆಗೆ ಗಡಿಭಾಗಗಳಲ್ಲಿ ಕನ್ನಡದ ಮೇಲೆ ಅನ್ಯ ಭಾಷೆಯ ಪ್ರಭಾವ ಆಗುತ್ತಿದ್ದು ಇದನ್ನು ಸಂಘಟನೆಯಿಂದ ತೀವ್ರವಾಗಿ ಖಂಡಿಸುತ್ತೇವೆ. ಕನ್ನಡವಲ್ಲದೆ ಇತರೆ ಭಾಷೆಗಳಿಗೆ ಪ್ರಾಧಾನ್ಯತೆ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕನ್ನಡದಲ್ಲಿ ವಿಸ್ತರಣೆಗೊಳ್ಳುತ್ತಿರುವ ಕಾಂಡ್ಲಾ ಪ್ರದೇಶ!
ಈಗಾಗಲೇ ಅಳವಡಿಸಿರುವ ನಾಮಫಲಕಗಳಲ್ಲಿನ ಇತರೆ ಭಾಷೆ ಬರಹಗಳನ್ನು ತೆಗೆಯಬೇಕು. ಒಂದೊಮ್ಮೆ ಹೀಗೆ ಮುಂದುವರಿದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು ಒಂದಾಗಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈಗಾಗಲೇ ಹಿಂದಿ ಹೇರಿಕೆಯ ಕುರಿತು ದೇಶದಾದ್ಯಂತ ಚರ್ಚೆಗಳು ನಡೆಯುತ್ತಿದೆ. ಅಲ್ಲೆ ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತು, ಕರುನಾಡ ರಕ್ಷಣಾ ವೇದಿಕೆ, ಜನಶಕ್ತಿ ವೇದಿಕೆ ಸೇರಿದಂತೆ ಅನೇಕ ಕನ್ನಡಪರ ಕಾರ್ಯಕರ್ತರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗಿ ಈ ಬಗ್ಗೆ ದೂರು ನೀಡಿದ್ದು ತಕ್ಷಣ ನಾಮಫಲಕಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.