ತವರಿಗೆ ಬಂದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್
ಯಲ್ಲಾಪುರ, ಜುಲೈ 25: ರಾಜೀನಾಮೆ ನೀಡಿ ಇತರೆ ಸಮಾನಮನಸ್ಕ ಶಾಸಕರೊಂದಿಗೆ ಮುಂಬೈನಲ್ಲಿ ಠಿಕಾಣಿ ಹೂಡಿದ್ದ ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಅವರು ತಮ್ಮ ಮನೆಗೆ ಮರಳಿದ್ದಾರೆ.
ಬುದವಾರ ಸಂಜೆ ಅವರು ಯಲ್ಲಾಪುರದಲ್ಲಿರುವ ತಮ್ಮ ನಿವಾಸಕ್ಕೆ ಬಂದಿದ್ದಾರೆ. ತಮ್ಮ ಆಪ್ತರನ್ನು ಮಾತ್ರ ಕರೆದು ಅವರು ಮಾತುಕತೆ ನಡೆಸಿದ್ದಾರೆ. ತಮ್ಮ ಆಗಮನದ ಬಗ್ಗೆ ಹೊರಗೆ ಮಾಹಿತಿ ನೀಡದಂತೆಯೂ ಸೂಚಿಸಿದ್ದಾರೆ.
"ನಾನು ಕಾಣೆಯಾಗಿಲ್ಲ" ಎಂದು ಮತ್ತೆ ಶಿವರಾಮ್ ಹೆಬ್ಬಾರ್ ಪೋಸ್ಟ್
'ತುರ್ತು ಕಾರ್ಯಕ್ರಮ ಇದ್ದಿದ್ದರಿಂದ ಮನೆಗೆ ಬಂದಿದ್ದೇನೆ. ಅದನ್ನು ಮುಗಿಸಿದ ಬಳಿಕ ಮತ್ತೆ ನಮ್ಮ ಶಾಸಕರ ಗುಂಪನ್ನು ಸೇರಲಿದ್ದೇನೆ. ರಾಜೀನಾಮೆ ನೀಡಿರುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸ್ಪೀಕರ್ ರಾಜೀನಾಮೆಯನ್ನು ಅಂಗೀಕಾರ ಮಾಡಲಿದ್ದಾರೆ ಎಂಬ ಭರವಸೆ ಇದೆ' ಎಂದು ಅವರು ಪ್ರತಿಕ್ರಿಯೆ ನೀಡಿರುವುದಾಗಿ ಕೆಲವು ಮಾಧ್ಯಮ ವರದಿಗಳು ತಿಳಿಸಿವೆ.
ಶಾಸಕ ಸ್ಥಾನ ತ್ಯಜಿಸಿದ ಬಳಿಕ ಬಿಜೆಪಿ ಸೇರ್ಪಡೆಯಾಗುವುದರ ಕುರಿತು ಕುಟುಂಬದವರು ಮತ್ತು ಆಪ್ತರೊಂದಿಗೆ ಅವರು ಚರ್ಚೆ ನಡೆಸಿದ್ದಾರೆ.
ಮುಂಬೈ ಹೊಟೆಲ್ನಿಂದ ಕ್ಷೇತ್ರದ ಜನರಿಗೆ ಬಹಿರಂಗ ಪತ್ರ ಬರೆದ ಶಾಸಕ
ರೆಬೆಲ್ ಶಾಸಕರೊಂದಿಗೆ ರಾಜೀನಾಮೆ ನೀಡಿದ್ದ ಅವರು, ಕಳೆದ 18 ದಿನಗಳಿಂದ ಮುಂಬೈ ಹಾಗೂ ಪುಣೆಯ ಹೋಟೆಲ್ಗಳಲ್ಲಿ ಇದ್ದರು. ಗುರುವಾರವೇ ಅವರು ಮತ್ತೆ ಮುಂಬೈಗೆ ಮರಳಲಿದ್ದಾರೆ. ಕೆಲವು ದಿನಗಳ ಬಳಿಕ ಪುನಃ ಯಲ್ಲಾಪುರಕ್ಕೆ ಬರುವುದಾಗಿ ತಿಳಿಸಿದ್ದಾರೆ.