ಸಂಪುಟ ಪುನರ್ ರಚನೆ ಮುನ್ನೆಲೆಗೆ; ಶಾಸಕಿ ರೂಪಾಲಿಗೆ ಮತ್ತೆ ಚಿಗುರಿದ ಮಂತ್ರಿಗಿರಿ ಕನಸು
ಕಾರವಾರ, ಜೂನ್ 18: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರಸ್ತುತ ಸಾಕಷ್ಟು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಸಚಿವ ಸಂಪುಟ ಪುನರ್ ರಚನೆ ನಡೆಯಲಿದೆ ಎನ್ನಲಾಗಿದ್ದು, ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮಂತ್ರಿಯಾಗುವ ಕನಸು ಮತ್ತೆ ಚಿಗುರೊಡೆದಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬದಲಾವಣೆ ಮಾಡಬೇಕೆಂದು ಕೆಲವರು ಧ್ವನಿ ಎತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು, ಗುರುವಾರ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಎಲ್ಲರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಪ್ರತಿ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಅರುಣ್ ಸಿಂಗ್ ಮಾಹಿತಿ ಪಡೆದಿದ್ದಾರೆ. ಇನ್ನು ನಾಯಕತ್ವ ಬದಲಾವಣೆ ಸಂಬಂಧ ರಾಜ್ಯಕ್ಕೆ ಬಂದಿರುವ ಅರುಣ್ ಸಿಂಗ್ ಮುಂದೆ ಕೆಲವರು ಸಚಿವ ಸಂಪುಟ ಪುನರ್ ರಚನೆ ಪ್ರಸ್ತಾಪ ಮಾಡಿದ್ದಾರೆನ್ನಲಾಗಿದ್ದು, ಸುಮಾರು ಐದರಿಂದ ಏಳು ಸಚಿವರನ್ನು ಕೈಬಿಟ್ಟು ಬೇರೆ ಶಾಸಕರಿಗೆ ಸಚಿವ ಸ್ಥಾನ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೊಸ ಮುಖಗಳಿಗೆ ಅವಕಾಶ ಕೊಡುವ ಸಾಧ್ಯತೆ
ಸಮ್ಮಿಶ್ರ ಸರ್ಕಾರ ಪಥನವಾದ ನಂತರ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷವಾಗಿದೆ. ಇನ್ನು ಎರಡು ವರ್ಷದಿಂದ ಸಚಿವರಾಗಿರುವವರ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ಸಹ ಮಾಡಲಾಗಿದ್ದು, ಕಳಪೆ ಸಾಧನೆ ಮಾಡಿದ ಐದಕ್ಕೂ ಅಧಿಕ ಸಚಿವರ ಪಟ್ಟಿಯನ್ನ ಸಿದ್ಧಪಡಿಸಲಾಗಿದೆ. ಅವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಯಕತ್ವ ತಿಕ್ಕಾಟ: ಬಿಜೆಪಿ ರಾಜ್ಯ ಉಸ್ತುವಾರಿ ಸಭೆಯಲ್ಲಿ ಬಂಡಾಯ ಸಚಿವರು ಗಪ್-ಚುಪ್!
ಏಕೈಕ ಮಹಿಳಾ ಸಚಿವರಾಗಿ ಶಶಿಕಲಾ ಜೊಲ್ಲೆ
ಬಿಜೆಪಿ ಸರ್ಕಾರದಲ್ಲಿ ಪ್ರತಿ ಬಾರಿಯೂ ಸಚಿವ ಸಂಪುಟ ವಿಸ್ತರಣೆ ಮಾಡಿದ ವೇಳೆಯಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೆಸರು ಕೇಳಿಬರುತ್ತಿದ್ದು, ಈ ಬಾರಿ ಸಹ ರೂಪಾಲಿ ನಾಯ್ಕ ಸಚಿವರಾಗುವ ಕನಸು ಮತ್ತೆ ಚಿಗುರೊಡೆದಿದೆ. ಸರ್ಕಾರ ರಚನೆಯಾದ ನಂತರ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿ ಶಶಿಕಲಾ ಜೊಲ್ಲೆ ಅಧಿಕಾರ ವಹಿಸಿಕೊಂಡಿದ್ದರು. ಇನ್ನು ಕಳೆದ ಎರಡು ವರ್ಷದಿಂದ ಜೊಲ್ಲೆ ಅಧಿಕಾರದಲ್ಲಿದ್ದು, ಅವರ ಕಾರ್ಯವೈಖರಿ ಬಗ್ಗೆ ಇತರ ಶಾಸಕರುಗಳಿಗೆ ಅಷ್ಟೇನು ಸಮಾಧಾನ ಇಲ್ಲ ಎನ್ನಲಾಗಿದೆ. ರಾಜ್ಯ ತಿರುಗಾಟ ನಡೆಸಿ ಇಲಾಖೆಯ ಕೆಲಸ ಮಾಡುವುದು, ಜೊತೆಗೆ ಪಕ್ಷ ಸಂಘಟನೆ ಮಾಡುವಲ್ಲಿ ಶಶಿಕಲಾ ಜೊಲ್ಲೆ ಕೊಡುಗೆ ಹೆಚ್ಚಿನ ಮಟ್ಟದಲ್ಲಿ ಇಲ್ಲ ಎನ್ನುವ ಮಾತು ಕೇಳಿ ಬಂದಿದ್ದು, ಇದೇ ಕಾರಣಕ್ಕೆ ಜೊಲ್ಲೆಯವರನ್ನು ಬದಲಾವಣೆ ಮಾಡಿದ್ದಲ್ಲಿ ಶಾಸಕಿ ರೂಪಾಲಿ ನಾಯ್ಕರಿಗೆ ಸಚಿವ ಸ್ಥಾನದ ಅದೃಷ್ಟ ಒಲಿಯಬಹುದು ಎನ್ನಲಾಗಿದೆ.
ಸಿಎಂ ಆಪ್ತ ಬಳಗದಲ್ಲಿ ಶಾಸಕಿ ರೂಪಾಲಿ ನಾಯ್ಕ
ಸದ್ಯ ನಾಯಕತ್ವ ಬದಲಾವಣೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬದಲಾವಣೆ ಮಾಡುವುದು ಕಷ್ಟಸಾಧ್ಯದ ಮಾತು ಎನ್ನಲಾಗಿದೆ. ಶಾಸಕಿ ರೂಪಾಲಿ ನಾಯ್ಕ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವುದರಿಂದ ಸಚಿವ ಸ್ಥಾನಕ್ಕೆ ಸಿಎಂ ಸಹ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರ ಅಭಿಪ್ರಾಯ ಪಡೆದಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ದೆಹಲಿಗೆ ತೆರಳಿ ವರಿಷ್ಠರ ಜೊತೆ ಈ ಬಗ್ಗೆ ಚರ್ಚೆ ನಡೆಸಿ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ನಿರ್ಧರಿಸಲಿದ್ದು, ಜುಲೈ ತಿಂಗಳ ಅಂತ್ಯದ ವೇಳೆಗೆ ಬಹುತೇಕ ಸಚಿವ ಸಂಪುಟ ಪುನರ್ ರಚನೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
Recommended Video
ಹತ್ತಾರು ‘ಕಮಲ’ ಕೊಂಡೊಯ್ದ ಶಾಸಕಿ
ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರೆದಿದ್ದ ಸಭೆಗೆ ಶಾಸಕಿ ರೂಪಾಲಿ ನಾಯ್ಕ ಕವರ್ನಲ್ಲಿ ಕಮಲದ ಹೂವನ್ನು ಕೊಂಡೊಯ್ದಿದ್ದಾರೆ. ನಾಯಕರನ್ನು ಭೇಟಿ ಮಾಡುವಾಗ ಹಾರ, ಹೂಗುಚ್ಛಗಳನ್ನು ಕೊಡಲು ಅವಕಾಶ ಇರಲಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮುನಿರತ್ನ ಸೇರಿದಂತೆ ಕೆಲ ಶಾಸಕರು ಒಂದೆರಡು ಕಮಲದ ಹೂವನ್ನು ಹಿಡಿದು ಅರುಣ್ ಸಿಂಗ್ರನ್ನು ಭೇಟಿಯಾದರು. ಆದರೆ ಶಾಸಕಿ ರೂಪಾಲಿ ನಾಯ್ಕ ಕವರ್ ಒಂದರಲ್ಲಿ ಹತ್ತಾರು ಕಮಲದ ಹೂವುಗಳನ್ನು ಹಿಡಿದು ಅವರ ಭೇಟಿಗೆ ತೆರಳಿದರು. ಇದು ಮಾಧ್ಯಮಗಳ ಕಣ್ಣಿಗೂ ಬಿದ್ದಿದೆ. ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ ನಂತರ ಶಾಸಕಿ ರೂಪಾಲಿ ನಾಯ್ಕ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಸಹ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.