ಉಪಚುನಾವಣೆಗಾಗಿ ಯಲ್ಲಾಪುರದಲ್ಲಿ ‘ಶತ್ರು’ಗಳಾದ ಅಪ್ಪ- ಮಗ
ಯಲ್ಲಾಪುರ, ನವೆಂಬರ್ 20: ಮಾಜಿ ಶಾಸಕ ಹಾಗೂ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ ಅವರ ಪುತ್ರ ಬಾಪುಗೌಡ ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡಿರುವ ವಿಚಾರ ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರೊಂದಿಗೆ ಕಾಣಿಸಿಕೊಳ್ಳುತ್ತಿರುವ ಬಾಪುಗೌಡ ಪಾಟೀಲ್, ನವೆಂಬರ್ 22 ರಂದು ಆರ್ ವಿ ದೇಶಪಾಂಡೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇದು ತಂದೆ ವಿ.ಎಸ್.ಪಾಟೀಲ ಅವರಿಗೆ ಇರಿಸುಮುರಿಸು ಉಂಟಾದಂತೆ ಕಾಣುತ್ತಿದೆ. ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹಾಗೂ ಅವರ ಬೆಂಬಲಿಗರು, ವಿ.ಎಸ್.ಪಾಟೀಲ ಅವರನ್ನು ಇದೀಗ ಅನುಮಾನದಿಂದಲೇ ನೋಡುವಂತಾಗಿದೆ.
ಶಿವರಾಂ ಹೆಬ್ಬಾರ್ ಗೆ ಓಕೆ, ಆದರೆ ಮಗನಿಗೆ ಟಿಕೆಟ್ ಯಾಕೆ? ಎಂದ ವಿ.ಎಸ್.ಪಾಟೀಲ
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಪುಗೌಡ ಪಾಟೀಲ, 'ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬರದ ಹಾಗೆ ನಮ್ಮನ್ನು ಬಿಜೆಪಿಯವರು ನಡೆಸಿಕೊಂಡಿದ್ದರೆ ಕಾಂಗ್ರೆಸ್ ಸೇರುತ್ತಿರಲಿಲ್ಲ. ನಮ್ಮನ್ನು ಹೆಬ್ಬಾರ್ ಹಾಗೂ ಅವರ ಬೆಂಬಲಿಗರು ಸರಿಯಾಗಿ ನಡೆಸಿಕೊಂಡಿಲ್ಲ. ಶಿವರಾಮ್ ಹೆಬ್ಬಾರ್ ಕ್ಷೇತ್ರಕ್ಕೆ ಬಿಜೆಪಿಯಿಂದ ಯೋಗ್ಯ ಅಭ್ಯರ್ಥಿಯಲ್ಲ' ಎಂದಿದ್ದಾರೆ.
'ಹೆಬ್ಬಾರ್ ಐದು ವರ್ಷ ಆಡಳಿತ ನಡೆಸಿದ್ದು ನಾವು ನೋಡಿದ್ದೆವು. ಕ್ಷೇತ್ರದಲ್ಲಿ ಯಾವ ರೀತಿ ಕೆಲಸ ಮಾಡಿದ್ದಾರೆ ಎಂದು ನೋಡಿದ್ದೆವು. ಹೆಬ್ಬಾರ್ ಕಾಂಗ್ರೆಸ್ ಬಂದಿರುವುದಕ್ಕೆ ಬಿಜೆಪಿ ಕಾರ್ಯಕರ್ತರಲ್ಲೇ ಅಸಮಾಧಾನವಿದೆ. ನಮ್ಮ ತಂದೆ ವಿ.ಎಸ್.ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿದ್ದರೆ ಅದು ಬೇರೆಯಾಗಿತ್ತು. ಆದರೆ ಹೆಬ್ಬಾರ್ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು ಸರಿಯಲ್ಲ' ಎಂದಿದ್ದಾರೆ.
'ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಕೆಲಸ ಮಾಡುತ್ತೇವೆ. ಡಿಸೆಂಬರ್ 9ರಂದು ಹೆಬ್ಬಾರ್ ಸೋಲುತ್ತಾರೆ. ಭೀಮಣ್ಣ ನಾಯ್ಕ ಗೆಲ್ಲುತ್ತಾರೆ' ಎಂದೂ ಭವಿಷ್ಯ ನುಡಿದಿದ್ದಾರೆ.
ಸೋದರ ಮಾವನ ವಿರುದ್ದವೇ ಕುಮಾರ್ ಬಂಗಾರಪ್ಪ ಭರ್ಜರಿ ಪ್ರಚಾರ
ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್, 'ನನ್ನ ಮಗ ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೇಳಿರಲಿಲ್ಲ. ನನಗೆ ಬಿಜೆಪಿ 4 ಬಾರಿ ಟಿಕೆಟ್ ಕೊಟ್ಟಿತ್ತು. ನಾನು ಗೆದ್ದಿದ್ದರೆ ಈ ಚುನಾವಣೆ ಇವತ್ತು ನಡೆಯುತ್ತಿರಲಿಲ್ಲ. ನಾನು ಬಿಜೆಪಿಗೆ ನಿಷ್ಠನಾಗಿದ್ದೇನೆ' ಎಂದಿದ್ದಾರೆ.
'ನನ್ನ ಮಗ ಮನೆ ಬಿಟ್ಟು ಹೋಗಿ 6 ವರ್ಷ ಆಗಿದೆ. ನನಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಫೋನ್ ಕಾಲ್ ಲಿಸ್ಟ್ ತೆಗೆದರೆ ನನಗೆ ಎಷ್ಟು ಬಾರಿ ಆತ ಕರೆ ಮಾಡಿದ್ದಾನೆ ಎನ್ನುವುದು ಗೊತ್ತಾಗಲಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಪ್ರಚಾರ ನಡೆಸುತ್ತೇನೆ. ಹಿಂದಿನ ಚುನಾವಣೆಗಿಂತ ಹೆಚ್ಚಿನ ಮತ ಗಳಿಸಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಕಾಂಗ್ರೆಸ್ ಸೇರಲು ಹೊರಟ ನನ್ನ ಮಗನಿಗೆ ಮನವೊಲಿಸುವ ಪ್ರಯತ್ನ ಮಾಡಲ್ಲ' ಎಂದು ಹೇಳಿದ್ದಾರೆ.