ಕರ್ನಾಟಕ ಬಜೆಟ್ 2021: ಉತ್ತರ ಕನ್ನಡ ಜಿಲ್ಲೆಗೆ ಸಿಕ್ಕಿದ್ದೇನು?
ಕಾರವಾರ, ಮಾರ್ಚ್ 9: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸೋಮವಾರ ಮಂಡಿಸಿರುವ ಕರ್ನಾಟಕ ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಒಂದಷ್ಟು ಹೊಸ ಯೋಜನೆಗಳು ಘೋಷಣೆಯಾಗಿವೆ.
ಗೋಕರ್ಣದ ತದಡಿಯಲ್ಲಿ ಸಾವಿರ ಎಕರೆಯಲ್ಲಿ ಪರಿಸರ ಪ್ರವಾಸೋದ್ಯಮ ಉದ್ಯಾನ, ಮೀನುಗಾರರಿಗೆ ಡೀಸೆಲ್ ಪಾಯಿಂಟ್ ನಲ್ಲೇ ಸಬ್ಸಿಡಿ ಡೀಸೆಲ್, ಕರಾವಳಿ ತೀರಗಳ ಅಭಿವೃದ್ಧಿ, ಶಿರಸಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಹಟ್ಟಿಕೇರಿಯಲ್ಲಿ ವಿಮಾನ ನಿಲ್ದಾಣಕ್ಕೆ ಎನ್ಕ್ಲೇವ್ ನಿರ್ಮಾಣ ಹಾಗೂ ಉಪ್ಪು ನೀರು ತಡೆಗೆ ಫ್ಲ್ಯಾಪ್ ಗೇಟ್ ನಿರ್ಮಾಣಕ್ಕೆ ಅನುದಾನ ಘೋಷಿಸಲಾಗಿದೆ.
ಫ್ಲ್ಯಾಪ್ ಗೇಟ್ ನಿರ್ಮಾಣಕ್ಕೆ 300 ಕೋಟಿ
ಕರಾವಳಿಯಲ್ಲಿ ಭಾರಿ ಪ್ರವಾಹವಾದಾಗ, ಸಮುದ್ರದಲ್ಲಿ ದೊಡ್ಡ ಅಲೆಗಳು ಅಪ್ಪಳಿಸಿದಾಗ, ಬೇಸಿಗೆಯಲ್ಲಿ ನದಿ ನೀರಿನ ಹರಿವು ಕಡಿಮೆಯಾದಾಗ ಉಪ್ಪು ನೀರು ಹಿಮ್ಮುಖವಾಗಿ ಹರಿಯುತ್ತದೆ. ಇದರಿಂದ ಕಡಲ ಕಿನಾರೆಯಿಂದ ಹತ್ತಾರು ಕಿಲೋಮೀಟರ್ ದೂರದವರೆಗೂ ಜಲಮೂಲಗಳಲ್ಲಿ ನೀರು ಬಳಕೆಗೆ ಸಿಗದಂತಾಗುತ್ತಿದೆ. ಅಲ್ಲದೇ ಸಾವಿರಾರು ಎಕರೆ ಕೃಷಿ ಭೂಮಿ ಬರಡಾಗುತ್ತಿದೆ. ಕಾರವಾರ ಮತ್ತು ಕುಮಟಾ ತಾಲ್ಲೂಕಿನಲ್ಲಿ ಈ ಸಮಸ್ಯೆ ಮಿತಿಮೀರಿದೆ.
ಬಜೆಟ್ 2021: ತೆರಿಗೆ ಹಾಕದ ಬಜೆಟ್ನಲ್ಲಿ ಯಾವುದು ಇಳಿಕೆ?
ಇದನ್ನು ತಡೆಯಲು ಯೋಜನೆ ರೂಪಿಸಬೇಕು ಎಂದು ಜಿಲ್ಲೆಯ ನಾಗರಿಕರು ಜನಪ್ರತಿನಿಧಿಗಳ ಮೇಲೆ ನಿರಂತರ ಒತ್ತಡ ಹೇರುತ್ತಿದ್ದರು. ಈ ಒತ್ತಡಕ್ಕೆ ಮನ್ನಣೆ ನೀಡಿರುವ ಮುಖ್ಯಮಂತ್ರಿ, 'ಫ್ಲ್ಯಾಪ್ ಗೇಟ್' ಮೂಲಕ 'ಖಾರ್ಲ್ಯಾಂಡ್ ಯೋಜನೆ'ಯ ಜಾರಿಗೊಳಿಸಲು 300 ಕೋಟಿ ರೂಪಾಯಿ ಘೋಷಿಸಿದ್ದಾರೆ. ದಶಕಗಳ ಈ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಮನ್ನಣೆ ನೀಡಿರುವುದು ಜನರ ಸಂತಸಕ್ಕೆ ಕಾರಣವಾಗಿದೆ.
ಶಿರಸಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ
ಇನ್ನು, ಬಜೆಟ್ನಲ್ಲಿ ಶಿರಸಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲು 7 ಕೋಟಿ ಘೋಷಿಸಲಾಗಿದೆ. 2021- 22ನೇ ಆರ್ಥಿಕ ವರ್ಷಕ್ಕೆ ಆರಂಭಿಕವಾಗಿ 2 ಕೋಟಿ ಅನುದಾನ ಬಿಡುಗಡೆಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ಶೈಕ್ಷಣಿಕವಾಗಿ ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಿದ್ದರೂ, ವಿಜ್ಞಾನ ಚಟುವಟಿಕೆಗೆ ಕಾರವಾರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ತೆರಳಬೇಕಿತ್ತು. ಹೀಗಾಗಿ, ಅಷ್ಟು ದೂರಕ್ಕೆ ತೆರಳಿ ವೈಜ್ಞಾನಿಕ ವಿಷಯದ ತರಬೇತಿ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಘಟ್ಟದ ಮೇಲಿನ ತಾಲ್ಲೂಕುಗಳ ಬಹುತೇಕ ಶಿಕ್ಷಕರು, ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಶಿರಸಿಯಲ್ಲೇ ಕೇಂದ್ರ ಸ್ಥಾಪನೆಯಾಗುವುದರಿಂದ ವಿದ್ಯಾರ್ಥಿ-ಶಿಕ್ಷಕರು, ವಿಜ್ಞಾನಾಸಕ್ತರಿಗೆ ಅನುಕೂಲವಾಗುವ ಮೂಲಕ ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಗೆ ಈಗ ಹೆಚ್ಚುವರಿ ಸೌಲಭ್ಯ ಒದಗಿದಂತಾಗಿದೆ.
ವಿವಾದಾತ್ಮಕ ಯೋಜನೆಗೆ 100 ಕೋಟಿ
ಹೊನ್ನಾವರದ ಕಾಸರಕೋಡ ಟೊಂಕಾದಲ್ಲಿ ಖಾಸಗಿ ಕಂಪನಿಯಿಂದ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಈ ಬಂದರು ನಿರ್ಮಾಣಕ್ಕೆ ಈಗಾಗಲೇ ಸ್ಥಳೀಯರು ಹಾಗೂ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದು, ಬೃಹತ್ ಪ್ರತಿಭಟನೆ ಕೂಡ ನಡೆಸಿದ್ದಾರೆ. ಆದರೆ ಇದೇ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ-66ರಿಂದ ಬಂದರಿಗೆ ಚತುಷ್ಪಥ ರಸ್ತೆ ಸಂಪರ್ಕ ಒದಗಿಸಲು 100 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ.
ಕರ್ನಾಟಕ ಬಜೆಟ್ 2021: ಪೆಟ್ರೋಲ್, ಡೀಸೆಲ್ನಿಂದ ತೆರಿಗೆ ಹೊರೆ ಇಲ್ಲ
ಇತರ ಯೋಜನೆಗಳು...
ಕಾಲುಸಂಕ ನಿರ್ಮಿಸಲು 'ಗ್ರಾಮಬಂಧ ಸೇತುವೆ' ಯೋಜನೆಗೆ 100 ಕೋಟಿ, ಮೂಲ ಗೇಣಿದಾರರು, ಕುಮ್ಕಿ ಜಮೀನು, ಖಾನೇ, ಬಾನೇ, ಸ್ವಾಯತ್ತ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ, ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಮರು ಪಾವತಿಸುವ ಬದಲು ತೆರಿಗೆ ರಹಿತವಾಗಿಯೇ ವಿತರಣೆ, 'ಪ್ರಧಾನಮಂತ್ರಿ ಮತ್ಸ್ಯ ಸಂಪದ' ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ 62 ಕೋಟಿ ಅನುದಾನ, ರಾಜ್ಯದಾದ್ಯಂತ 30 ಕೋಟಿ ವೆಚ್ಚದಲ್ಲಿ ಮೀನು ಮಾರಾಟ ಘಟಕಗಳು ಹಾಗೂ ಮತ್ಸ್ಯ ದರ್ಶಿನಿಗಳ ಸ್ಥಾಪನೆಗೆ ಬಜೆಟ್ನಲ್ಲಿ ಘೋಷಿಸಲಾಗಿದೆ.
Recommended Video