ಮಗನ ನೆನಪಿಗೆ ಹಚ್ಚೆ ಹಾಕಿಸಿಕೊಂಡು ಮತ್ತೆ ಸುದ್ದಿಯಾದ್ರು ಕಮಲಾಕರ ಮೇಸ್ತ
ಕಾರವಾರ, ಮೇ 31 : ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಹೊನ್ನಾವರದ ಯುವಕ ಪರೇಶ ಮೇಸ್ತನ ಅಸಹಜ ಸಾವಿನ ತನಿಖೆ ಇನ್ನೂ ಸಿಬಿಐ ಹಂತದಲ್ಲಿ ತನಿಖೆಯಲ್ಲಿದೆ. ಈ ನಡುವೆ ಪರೇಶನ ತಂದೆ ಕಮಲಾಕರ ಮೇಸ್ತ ಅವರು ತಮ್ಮ ಮಗನ ಚಿತ್ರವನ್ನು ಕೈ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಪರೇಶ್ ಮೇಸ್ತ ಸಾವು : ಪ್ರಮುಖ ಆರೋಪಿ ಬಂಧನ
ಈ ಕುರಿತು ಕಮಲಾಕರ ಮೇಸ್ತ ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ್ದಾರೆ. ಕಮಲಾಕರ ಮೇಸ್ತ ಅವರ ಕುಟುಂಬದವರೇ ಆದ ಮುಂಬೈ ಮೂಲದ ವ್ಯಕ್ತಿಯೊಬ್ಬರು ಈ ಅಚ್ಚೆ ಹಾಕಿದ್ದಾರೆ. "ಮಗನ ಸಾವು ಬಹಳ ನೋವು ತಂದಿದೆ. ಅವನ ಅಗಲಿಕೆ ಸಹಿಸಿಕೊಳ್ಳಲಾಗುತ್ತಿಲ್ಲ. ಪರೇಶ ನನ್ನ ಹೃದಯಲ್ಲಿರಬೇಕು. ಅವನ ನೆನಪು ಸದಾ ನೆನಪಿಗೆ ಬರುತ್ತಿರಬೇಕು. ಹೀಗಾಗಿ ಅವನ ಚಿತ್ರವನ್ನು ಕೈಯ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದೀನಿ" ಎನ್ನುತ್ತಾರೆ ಕಮಲಾಕರ ಮೇಸ್ತ.
ಜಾಮೀನಿನ ಮೇಲೆ ಬಿಡುಗಡೆ
"ಮುಂಬೈನಲ್ಲಿ ವಾಸಿಸುವ ನಮ್ಮ ಪರಿಚಯದ ವ್ಯಕ್ತಿಯೊಬ್ಬರು ನಮ್ಮನ್ನು ನೋಡಲೆಂದು ಬಂದಿದ್ದರು. ಈ ವೇಳೆ ನಾನೇ ಕೇಳಿ ಅಚ್ಚೆ ಹಾಕಿಸಿಕೊಂಡೆ" ಎನ್ನುತ್ತಾ ಸಿಬಿಐ ತನಿಖೆ ಬಗ್ಗೆ ಮಾತನಾಡಿದರು ಕಮಲಾಕರ ಮೇಸ್ತ.
"ಸಿಬಿಐನ ತಂಡ ಕುಮಟಾಕ್ಕೆ ಒಮ್ಮೆ ಬಂದಿತ್ತು. ಈ ವೇಳೆ ನಮ್ಮನ್ನು ಕರೆದು ಸುದೀರ್ಘ ಹೇಳಿಕೆಗಳನ್ನು ಪಡೆದುಕೊಂಡಿತ್ತು. ಆದರೆ, ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಪ್ರಮುಖ ನಾಲ್ವರು ಆರೋಪಿಗಳು ಚುನಾವಣೆಗೂ ಪೂರ್ವದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.
ಹಣವನ್ನು ತಿರಸ್ಕರಿಸುವೆ
"ನನ್ನ ಮಗನ ಸಾವಿಗೆ ಅಖಂಡ ಹಿಂದೂ ಸಮಾಜ ಕಂಬನಿ ಮಿಡಿದಿತ್ತು. ಅದಕ್ಕೆ ನಾನು ಯಾವತ್ತೂ ಚಿರಋಣಿ. ಆದರೆ, ನಾನು ಮೊದಲಿನಿಂದಲೂ ಬಿಜೆಪಿಯಿಂದ ಗುರುತಿಸಿಕೊಂಡವನು. ಹೀಗಾಗಿ ಚುನಾವಣೆಯ ಸಮಯದಲ್ಲಿ ಪಕ್ಷದೊಂದಿಗೆ ಬೆರೆಯಬೇಕಾಯಿತು" ಅಂತ ತಾವು ಬಿಜೆಪಿಯ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕುರಿತು ಸ್ಪಷ್ಟನೆ ನೀಡಿದರು.
ಇನ್ನು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆಯವರು ನೀಡಿದ್ದ ರೂ.1 ಲಕ್ಷ ಹಣವನ್ನು ತಿರಸ್ಕರಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಸಚಿವರು ನೀಡಿದ ಹಣವನ್ನು ತಿರಸ್ಕರಿಸಲು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ನಿಜ. ಆದರೆ, ಈವರೆಗೆ ಅದನ್ನು ಮರಳಿಸಿಲ್ಲ. ಅವರು ಈ ಕಡೆ ಬಂದಲ್ಲಿ ಖುದ್ದು ಭೇಟಿಯಾಗಿ ಅದನ್ನು ಮರಳಿಸುವೆ.
ಆ ಹಣವನ್ನು ನಾನು ಬಳಸಿಕೊಳ್ಳದೆ, ಮರಳಿಸುವುದಕ್ಕಾಗಿ ಹಾಗೆ ಇಟ್ಟುಕೊಂಡಿದ್ದೇನೆ" ಎಂದರು.
ಸೂಕ್ತ ಪರಿಹಾರ ಬಿಡುಗಡೆಯಾಗಿಲ್ಲ
"ಸಾವಿಗೆ ಸಂಬಂಧಿಸಿ ಸಹಜ ಸಾವು ಎಂದು ಮರಣೋತ್ತರ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು ಬಹಳ ಬೇಸರ ತಂದಿತ್ತು. ಈವರೆಗೆ ಸರ್ಕಾರ ಸೂಕ್ತ ಪರಿಹಾರವನ್ನೂ ಬಿಡುಗಡೆ ಮಾಡದಿರುವುದು ದುಃಖ ತಂದಿದೆ.
ಜಿಲ್ಲಾಧಿಕಾರಿಯವರು ರೂ.5 ಲಕ್ಷ ಬಿಡುಗಡೆ ಮಾಡಿರುವುದು ಬಿಟ್ಟರೆ ಮತ್ಯಾವ ಪರಿಹಾರ ಕೂಡ ಸಿಕ್ಕಿಲ್ಲ. ಸರ್ಕಾರ ಹಿಂದೂ ಎಂದು ಪರಿಹಾರ ನೀಡಲು ತಾರತಮ್ಯ ಮಾಡಿದೆ" ಎನ್ನುತ್ತಾರೆ ಕಮಲಾಕರ ಮೇಸ್ತ.
ತಿರುಚಿ ಹಾಕಲಾಯ್ತು ಸಂದೇಶ
"ಮಗನ ಸಾವಿನಿಂದ ನೊಂದು ಸಂಕಷ್ಟದಲ್ಲಿದ್ದ ಸಂದರ್ಭ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ, ನಾನು ಕಷ್ಟದಲ್ಲಿದ್ದೀನಿ. ನನಗೆ ಹಣದ ಸಹಾಯ ಮಾಡಿ ತಮ್ಮ ಎಂದು ಸಂದೇಶಗಳನ್ನು ಹರಿ ಬಿಟ್ಟಿದ್ದು ಕೂಡ ದುಃಖ ತಂದಿದೆ. ಅಂದು ಆರ್ಥಿಕ ತೊಂದರೆಯಲ್ಲಿದ್ದು, ಸ್ನೇಹಿತರೊಂದಿಗೆ ಈ ವಿಷಯ ಹಂಚಿಕೊಂಡಿದ್ದು ನಿಜ.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ತಿರುಚಿ ಹಾಕಲಾಗಿತ್ತು" ಎಂದು ಬೇಸರ ವ್ಯಕ್ತಪಡಿಸಿದರು. ಒಟ್ಟಾರೆ, ಪರೇಶ ಮೇಸ್ತನ ಸಾವು ಇಡೀ ರಾಜ್ಯವನ್ನೆ ಗಲಭೆಯಲ್ಲಿ ಮುಳುಗಿಸಿತ್ತು. ಉತ್ತರ ಕನ್ನಡ ಜಿಲ್ಲೆ ಅಕ್ಷರಶಃ ಬೆಂಕಿಯಲ್ಲಿ ನಲುಗಿತ್ತು. ಪ್ರಕರಣದ ಸೂಕ್ತ ತನಿಖೆ ನಡೆದು, ಕಮಲಾಕರ ಮೇಸ್ತ ಅವರ ಕುಟುಂಬಕ್ಕೆ ನ್ಯಾಯ ಸಿಗಲಿ ಎನ್ನುವುದೇ ನಮ್ಮ ಆಶಯ.