ಸೋಲಿನ ಹೊಣೆಯನ್ನು ಕಾಂಗ್ರೆಸ್ ತಲೆಗೆ ಕಟ್ಟಿದ ಜೆಡಿಎಸ್ ನ ಸೋತ ಅಭ್ಯರ್ಥಿ
ಕಾರವಾರ, ಮೇ 26 : ಜೆಡಿಎಸ್- ಕಾಂಗ್ರೆಸ್ ಮೈತ್ರಿಯಾಗಿ ಲೋಕಸಭೆ ಚುನಾವಣೆ ಎದುರಿಸಬಾರದಿತ್ತು ಎಂಬ ಮತ್ತೊಂದು ಒಡುಕು ಧ್ವನಿ ಕೇಳಿಬಂದಿದೆ. ಅಷ್ಟೇ ಅಲ್ಲ, ಜೆಡಿಎಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ದೇವೆಗೌಡರು ಹಾಗೂ ನಿಖಿಲ್ ಸೋಲುತ್ತಿರಲಿಲ್ಲ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪರಾಜಿತ (ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ) ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರದಲ್ಲಿ ಭಾನುವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಮೈತ್ರಿ ಮಾಡಿಕೊಂಡಿದ್ದರಿಂದ ಜೆಡಿಎಸ್ ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್, ಬಿಜೆಪಿ ಮತಗಳು ಒಂದಾಗಿ ನಮಗೆ ಹಿನ್ನಡೆಯಾಯಿತು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ದೇವೇಗೌಡರು ಹಾಗೂ ನಿಖಿಲ್ ಸೋಲುತ್ತಿರಲಿಲ್ಲ ಎಂದಿದ್ದಾರೆ.
ಮೈತ್ರಿ ಸರಕಾರದಿಂದಲೇ ದೇವೇಗೌಡರು ಸೋಲಬೇಕಾಯಿತು ಎಂದ ಚನ್ನಿಗಪ್ಪ ಮಗ
ಒಂದು ತಿಂಗಳ ಮುಂಚೆಯೇ ನನಗೆ ಟಿಕೆಟ್ ಕೊಡಬೇಕಿತ್ತು. ಉತ್ತರ ಕನ್ನಡ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನಸಾರೆ ಕೆಲಸ ಮಾಡಿದ್ದರೆ ಗೆಲ್ಲಬಹುದಿತ್ತು. ಆದರೆ ಅವರು ಒಂದೇ ಮನಸ್ಸಿನಿಂದ ಕೆಲಸ ಮಾಡದೇ ಇದ್ದಿದ್ದದ್ದರಿಂದ, ನನ್ನ ಪರವಾಗಿ ಗಟ್ಟಿಯಾಗಿ ನಿಲ್ಲದ ಪರಿಣಾಮ ಚುನಾವಣೆಯಲ್ಲಿ ಸೋಲನ್ನು ಅಭವಿಸುವಂತಾಯಿತು ಎಂದಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ಅಸ್ನೋಟಿಕರ್ ಅವರು ಬಿಜೆಪಿಯ ಅನಂತಕುಮಾರ ಹೆಗಡೆ ವಿರುದ್ಧ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ 4,79,649 ಮತಗಳ ಅಂತರದಲ್ಲಿ ಆನಂದ್ ಸೋತರು. ಅನಂತಕುಮಾರ್ ಹೆಗಡೆ 7,86,042 ಹಾಗೂ ಆನಂದ್ 3,06,393 ಮತಗಳನ್ನು ಪಡೆದರು.