ಗುಡ್ಡ ಕುಸಿತ ತಡೆಯಲು ಹೊಸ ವಿಧಾನ ಅನುಸರಿಸಿದ ಐಆರ್ ಬಿ
ಕಾರವಾರ, ಜೂನ್.13 : ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಭಟ್ಕಳದಿಂದ ಕಾರವಾರದ ಮಾಜಾಳಿಯವರೆಗೆ ನಡೆಯುತ್ತಿರುವ ಹೆದ್ದಾರಿ ಚತುಷ್ಪಥಗೊಳಿಸುವ ಕಾರ್ಯಕ್ಕೆ ವಿವಿಧೆಡೆ ಬೃಹತ್ ಗುಡ್ಡಗಳನ್ನು ಐಆರ್ ಬಿ ಕಂಪನಿ ಕಡಿದಿದೆ.
ಆದರೆ, ಕಳೆದ ಬಾರಿ ಮಳೆಗೆ ಕುಮಟಾ ತಾಲೂಕಿನ ತಂಡ್ರಕುಳಿಯಲ್ಲಿ ಗುಡ್ಡ ಕುಸಿತದಿಂದ ಉಂಟಾದ ಸಾವು ನೋವಿನಿಂದ ಎಚ್ಚೆತ್ತುಕೊಂಡಿರುವ ಐಆರ್ ಬಿ ಈ ಬಾರಿ ಗುಡ್ಡ ಕುಸಿಯದಂತೆ ತಡೆಯಲು ನೂತನ ವಿಧಾನಗಳನ್ನು ಅನುಸರಿಸಿದೆ.
ಉತ್ತರ ಕನ್ನಡ: ಧರೆ ಕುಸಿತ, ಐದು ತಾಸು ಸಂಚಾರ ಸ್ಥಗಿತ
ಹೌದು, ಜಿಲ್ಲೆಯ ಕರಾವಳಿ ಭಾಗದ ಹೆದ್ದಾರಿ ಬದಿಗಿನ ಕೆಲವು ಗುಡ್ಡಗಳ ಮೇಲೆ 'ವೆಟಿವರ್' ತಳಿಯ ಹುಲ್ಲನ್ನು ನಾಟಿ ಮಾಡುವ ಮೂಲಕ ಗುಡ್ಡ ಕುಸಿಯುವುದನ್ನು ತಪ್ಪಿಸಲು ಐಆರ್ ಬಿ ಕಂಪನಿ ಮುಂದಾಗಿದೆ.
ಈ ತಳಿಯ ಹುಲ್ಲುಗಳು ಆಳಕ್ಕೆ ಬೇರೂರುವುದರಿಂದ ಮಣ್ಣು ಕುಸಿಯುವುದನ್ನು ತಡೆಯುತ್ತದೆ. ಹೀಗಾಗಿ ಮಳೆಗಾಲದಲ್ಲಿ ಉಂಟಾಗಬಹುದಾದ ಗುಡ್ಡ ಕುಸಿತದ ಸಮಸ್ಯೆ ಸ್ವಲ್ಪ ಕಡಿಮೆಯಾಗಬಹುದು ಎನ್ನುವುದು ಐಆರ್ ಬಿ ಅಧಿಕಾರಿಗಳ ಲೆಕ್ಕಾಚಾರವಾಗಿದೆ.
ಇನ್ನೊಂದೆಡೆ, ಕುಮಟಾದ ಕತಗಾಲ ರಸ್ತೆಯ ಬಳಿಯ ಗುಡ್ಡಕ್ಕೆ ಕಾಂಕ್ರೀಟ್ ಹೊದಿಕೆಯನ್ನು ಕಂಪನಿ ಹಾಕಿದೆ. ಗುಡ್ಡದ ಇಳಿಜಾರಿನಲ್ಲಿ ಕಬ್ಬಿಣದ ಸರಳು, ಬಲೆಯನ್ನು ಅಳವಡಿಸಿ ಅದರ ಮೇಲೆ ಕಾಂಕ್ರೀಟ್ ಲೇಪನ ಮಾಡಿದೆ.
ಇದರಿಂದಾಗಿ, ಮಳೆ ಮಣ್ಣಿಗೆ ಇಳಿಯದೆ ಕಾಂಕ್ರೀಟ್ ಮೇಲಿಂದಲೇ ಜಾರಿ ಹೋಗುತ್ತದೆ. ಇದರಿಂದ ಗುಡ್ಡ ಕುಸಿಯುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.