ಉತ್ತರ ಕನ್ನಡ ಜಿಲ್ಲೆಯಾದ್ಯಂತ ಯೋಗ ದಿನಾಚರಣೆ
ಕಾರವಾರ ಜೂನ್ 21: ಅಂತಾರಾಷ್ಟ್ರೀಯ ಯೋಗ ದಿನವನ್ನು ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆಚರಿಸಲಾಯಿತು. ಕಾರವಾರದ ಇಂದಿರಾಕಾಂತ ಸಭಾ ಭವನದಲ್ಲಿ ಜಿಲ್ಲಾ ಆಯುಷ್ ಇಲಾಖೆಯು ವಿವಿಧ ಇಲಾಖೆ, ಸಂಘ ಸಂಸ್ಥೆಗಳೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ.ಪ್ರಕಾಶ್ ಎ.ಜೆ. ನೇತೃತ್ವದಲ್ಲಿ ಹಲವರು ಯೋಗಾಭ್ಯಾಸ ಮಾಡಿದರು.
ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಡಿವೈಎಸ್ ಪಿ ಶಂಕರ ಮಾರಿಹಾಳ, ಡಿಡಿಪಿಐ ಮಂಜುನಾಥ್, ಡಿಎಆರ್ ಇನ್ ಸ್ಪೆಕ್ಟರ್ ಸಚಿನ್ ಲಾರೆನ್ಸ್, ಸ್ಕೌಟ್ಸ್ ಆಂಡ್ ಗೈಡ್ಸ್ ಮುಖ್ಯಸ್ಥ ಬಿ.ಡಿ.ಫರ್ನಾಂಡಿಸ್, ವಾರ್ತಾಧಿಕಾರಿ ಜಿ.ಹಿಮಂತರಾಜು ಸೇರಿದಂತೆ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗಾಭ್ಯಾಸ ಮಾಡಿದರು.
Illness ನಿಂದ Wellnessನೆಡೆಗೆ... ಯೋಗ ಜೀವನಧರ್ಮವಾಗಲಿ: ಮೋದಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ನಾವು ಸಂಪತ್ತಿನ ಹಿಂದೆ ಓಡುತ್ತಿದ್ದೇವೆ. ಆರೋಗ್ಯದ ಬಗ್ಗೆ ಗಮನ ಕೊಡುತ್ತಿಲ್ಲ. ಯೋಗದಿಂದ ಹೇಗೆ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವುದನ್ನು ಪ್ರಧಾನಿ ಮೋದಿಯವರು ತೋರಿಸಿಕೊಟ್ಟಿದ್ದಾರೆ. ಮೊಬೈಲ್ ಬಳಕೆ ಸ್ವಲ್ಪ ಕಡಿಮೆ ಮಾಡಿ, ಯೋಗಕ್ಕೆ ಕೆಲವು ನಿಮಿಷ ಕೊಟ್ಟು, ಆರೋಗ್ಯ ವೃದ್ಧಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಭವ್ಯ ಪರಂಪರೆ ಇರುವ ದೇಶ ನಮ್ಮದು. ಯೋಗ ನಮ್ಮಲ್ಲೇ ಉಗಮಗೊಂಡಿದ್ದು. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನ ಮಾಡಿಕೊಳ್ಳುವ ಕ್ರಿಯೆಯೇ ಯೋಗ. ಆಹಾರ, ಜ್ಞಾನ ಎಲ್ಲವೂ ಸಮತೋಲನದಲ್ಲಿರಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನ LIVE: ದೇಶಾದ್ಯಂತ ಯೋಗ ಹಬ್ಬದ ಸಂಭ್ರಮ
ಜಿಲ್ಲಾ ಆಯುಷ್ ಅಧಿಕಾರಿ ಲಲಿತಾ ಎಚ್. ಸ್ವಾಗತಿಸಿದರು. ಶಿರಸಿ ಆಯುಷ್ ವೈದ್ಯಾಧಿಕಾರಿ ಜಗದೀಶ್ ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ್ ನಾಯಕ ವಂದನಾರ್ಪಣೆ ಮಾಡಿದರು.