ತಾರಕಕ್ಕೇರಿದ ಹಳಿಯಾಳ ಕಾಂಗ್ರೆಸ್ ಒಳಜಗಳ; ಪಕ್ಷದ ಶಾಸಕನನ್ನೇ ಉಚ್ಛಾಟಿಸಲು ಮುಂದಾದ ಬ್ಲಾಕ್ ಕಾಂಗ್ರೆಸ್!
ಕಾರವಾರ, ಅಕ್ಟೋಬರ್ 20: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹಳಿಯಾಳ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ. ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವಿನ ಗುದ್ದಾಟ ಬದಿಗೊತ್ತಿ, ಕಾಂಗ್ರೆಸ್ ಪಕ್ಷದ ಒಳಜಗಳ ತಾರಕಕ್ಕೆ ಏರಿದೆ.
ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ರನ್ನೇ ಉಚ್ಛಾಟಿಸಲು ಪ್ರಸ್ತಾವ ಕಳುಹಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಳಿರುವುದು ಇದೀಗ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಲ್ಲಿ ಕಳೆದ ಕೆಲ ತಿಂಗಳಿನಿಂದ ಕಾಂಗ್ರೆಸ್ ಪಕ್ಷದಲ್ಲೇ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ನಡುವೆ ಗುದ್ದಾಟ ನಡೆಯುತ್ತಿದ್ದು, ಎರಡು ನಾಯಕರ ಬೆಂಬಲಿಗರ ಪ್ರತ್ಯೇಕ ಗುಂಪು ಪಕ್ಷದೊಳಗೆ ರಚನೆಯಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಡುವಿನ ಪೈಪೋಟಿಗಿಂತ ಪಕ್ಷದ ಒಳಗಿನ ಗುದ್ದಾಟವೇ ಹೆಚ್ಚು ಗಮನ ಸೆಳೆದಿದೆ.
ಇನ್ನು ಹಾಲಿ ಶಾಸಕ ಆರ್.ವಿ. ದೇಶಪಾಂಡೆ ವಿರುದ್ಧ ತೊಡೆತಟ್ಟಿರುವ ಎಸ್.ಎಲ್. ಘೋಟ್ನೇಕರ್, ಬಹಿರಂಗವಾಗಿ ಈ ಬಾರಿ ಕ್ಷೇತ್ರದಿಂದ ತನಗೇ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ತನ್ನ ಬೆಂಬಲಿಗರ ಗುಂಪು ಕಟ್ಟಿಕೊಂಡು ಚುನಾವಣೆಗೆ ಒಂದೆಡೆ ಸಿದ್ಧತೆ ನಡೆಸುತ್ತಿದ್ದು, ಇನ್ನೊಂದೆಡೆ ಆರ್.ವಿ. ದೇಶಪಾಂಡೆ ಸಹ ತನ್ನ ಬೆಂಬಲಿಗರ ಜೊತೆ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಅಲ್ಲಲ್ಲಿ ಘೋಟ್ನೇಕರ್ ವಿರುದ್ಧ ಸಮರ ಸಾರುತ್ತಿದ್ದಾರೆ.
ಇದೀಗ ದೇಶಪಾಂಡೆ ಆಪ್ತ, ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಕೊರ್ವೇಕರ್ ಹಾಗೂ ಮುಖಂಡರುಗಳು ಸುದ್ದಿಗೋಷ್ಠಿ ನಡೆಸಿ, "ಘೋಟ್ನೇಕರ್ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪಕ್ಷದ ಜಿಲ್ಲಾ ಹಾಗೂ ರಾಜ್ಯ ಸಮಿತಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು," ಎಂದು ತಿಳಿಸಿದ್ದಾರೆ.
ಇನ್ನು ಘೋಟ್ನೇಕರ್ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ತಮ್ಮ ವೈಯಕ್ತಿಕ ಅಭಿಮಾನಿ ಬಳಗ ರಚನೆ ಮಾಡುವ ಸಭೆಗಳನ್ನು ಏರ್ಪಡಿಸುತ್ತಾ, ಕಾಂಗ್ರೆಸ್ ಪಕ್ಷದ ಸದಸ್ಯರನ್ನೇ ತಮ್ಮ ವೈಯಕ್ತಿಕ ಬಳಗಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಪರಿಣಾಮ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುತ್ತಿರುವುದನ್ನು ನಿಲ್ಲಿಸಲು ಪಕ್ಷವು ಕಠಿಣ ಕ್ರಮವನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.
"ಪಕ್ಷಕ್ಕೆ ಆಗುತ್ತಿರುವ ಹಿನ್ನಡೆಯನ್ನು ಸರಿಪಡಿಸಲು ಘೋಟ್ನೇಕರ್ರನ್ನು ಉಚ್ಛಾಟಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಹಳಿಯಾಳ ಬ್ಲಾಕ್ ವತಿಯಿಂದ ಠರಾವು ಮಾಡಿ ಡಿಸಿಸಿ ಮತ್ತು ಕೆಪಿಸಿಸಿಗೆ ಪ್ರಸ್ತಾವನೆಯನ್ನು ರವಾನಿಸಲಾಗುವುದು," ಎಂದು ತಿಳಿಸಿದ್ದಾರೆ.
'ಬ್ಲಾಕ್
ಕಾಂಗ್ರೆಸ್
ಅಧ್ಯಕ್ಷ
ಚಲಾವಣೆ
ಇಲ್ಲದ
ನಾಣ್ಯದಂತೆ'
"ವಿಧಾನ
ಪರಿಷತ್
ಸದಸ್ಯ
ಘೋಟ್ನೇಕರ್ರನ್ನು
ಉಚ್ಚಾಟನೆ
ಮಾಡುತ್ತೇವೆಂದು
ಬ್ಲಾಕ್
ಕಾಂಗ್ರೆಸ್
ಅಧ್ಯಕ್ಷರು
ಹೇಳಿದ್ದಾರೆ.
ಆದರೆ
ಅವರೇ
ಚಲಾವಣೆ
ಇಲ್ಲದ
ನಾಣ್ಯ
ಇದ್ದಂತೆ.
ಹತಾಶೆಯಿಂದ
ಈ
ರೀತಿ
ಹೇಳುತ್ತಿದ್ದಾರೆ,"
ಎಂದು
ಘೋಟ್ನೇಕರ್
ಬೆಂಬಲಿಗರು
ಟಾಂಗ್
ನೀಡಿದ್ದಾರೆ.
"ಘೋಟ್ನೇಕರ್ರನ್ನು ಉಚ್ಚಾಟನೆ ಮಾಡುವುದು, ಬಿಡುವುದು ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷ ಸಂಘಟನೆಗಾಗಿ ಇದುವರೆಗೆ ಎಷ್ಟು ಸಭೆ ನಡೆಸಿದ್ದಾರೆ? ಅವರನ್ನು ಸ್ವಿಚ್ಡ್ ಆಫ್ ಅಧ್ಯಕ್ಷ ಎಂದೇ ಕರೆಯುತ್ತಾರೆ. ಘೋಟ್ನೇಕರ್ರವರ ಜನಪ್ರಿಯತೆ ನೋಡಿ ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಕೈಗಳ ಪ್ರಚೋದನೆ ಇದೆ. ಪ್ರಚೋದನೆ ಇರುವುದಕ್ಕೆ ಇಂತಹ ಹೇಳಿಕೆ ಕೊಡುತ್ತಿದ್ದು, ಮುಂದೆ ಏನಾಗುತ್ತದೆ ಎನ್ನುವುದು ಕಾದು ನೋಡೋಣ," ಎನ್ನುತ್ತಾರೆ ಘೋಟ್ನೇಕರ್ ಬೆಂಬಲಿಗರು.