ವಿಡಿಯೋ; ನಿಲ್ಲದ ಮಳೆ, ಉತ್ತರ ಕನ್ನಡದ 2 ಡ್ಯಾಂನಿಂದ ನೀರು ಹೊರಕ್ಕೆ
ಕಾರವಾರ, ಜುಲೈ 22; ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಪರಿಣಾಮವಾಗಿ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಎರಡು ಅಣೆಕಟ್ಟುಗಳಿಂದ ನೀರನ್ನು ಹೊರ ಬಿಡಲಾಗಿದೆ.
ಕಾರವಾರದ ಕದ್ರಾ, ಯಲ್ಲಾಪುರದ ಕೊಡಸಳ್ಳಿ ಜಲಾಶಯದಿಂದ ಎರೆಡೆರಡು ಬಾರಿ ನೀರನ್ನು ಹೊರಕ್ಕೆ ಬಿಡುಗಡೆ ಮಾಡಲಾಗಿದೆ. ಗರಿಷ್ಠ 34.50 ಮೀಟರ್ ಸಾಮರ್ಥ್ಯದ ಕದ್ರಾ ಜಲಾಶಯ ಮಧ್ಯಾಹ್ನ 1 ಗಂಟೆಯ ಸುಮಾರಿಗೆ 46,197 ಕ್ಯೂಸೆಕ್ ಒಳಹರಿವಿನಿಂದಾಗಿ ಅಣೆಕಟ್ಟು 30.67 ಮೀಟರ್ ಭರ್ತಿಯಾಗಿತ್ತು. ಹೀಗಾಗಿ ಆರು ಗೇಟ್ಗಳ ಮೂಲಕ 27,363 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿತ್ತು.
ಮಹಾರಾಷ್ಟ್ರದಲ್ಲಿ ಭಾರೀ ಮಳೆ; 9 NDRF ತಂಡಗಳ ನಿಯೋಜನೆ
ಇದೇ ಸಂದರ್ಭದಲ್ಲಿ ಗರಿಷ್ಠ 75.50 ಮೀಟರ್ ಸಾಮರ್ಥ್ಯದ ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಜಲಾಶಯದಲ್ಲೂ 22,143 ಕ್ಯೂಸೆಕ್ ಒಳಹರಿವಿನಿಂದಾಗಿ ಜಲಾಶಯದ ಮಟ್ಟ 70.80 ಮೀಟರ್ ತಲುಪಿತ್ತು. ಹೀಗಾಗಿ ಇಲ್ಲಿ ಕೂಡ 4 ಗೇಟುಗಳ ಮೂಲಕ 22,143 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿತ್ತು.
ಜುಲೈ 26ರವರೆಗೂ ಕರಾವಳಿ, ಉತ್ತರ ಒಳನಾಡಿನಲ್ಲಿ ಸುರಿಯಲಿದೆ ಭಾರಿ ಮಳೆ
ಮಳೆ ಸತತವಾಗಿ ಬೀಳುತ್ತಿರುವ ಕಾರಣ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. 2 ಗಂಟೆಯ ಹೊತ್ತಿಗೆ ಕದ್ರಾದಲ್ಲಿ ಒಳಹರಿವು 50,219 ಕ್ಯೂಸೆಕ್ಗೆ ಏರಿಕೆಯಾಗಿದ್ದು, 30.67 ಮೀಟರ್ ಭರ್ತಿಯಾಗಿದೆ. ಹೀಗಾಗಿ ಮತ್ತೆರಡು ಗೇಟುಗಳನ್ನು ತೆರೆದು ಒಟ್ಟು 8 ಗೇಟುಗಳ ಮೂಲಕ ಒಟ್ಟಾರೆ 42,175 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಕೊಡಸಳ್ಳಿಯಲ್ಲಿ ಕೂಡ ಒಳಹರಿವು 28,082 ಕ್ಯೂಸೆಕ್ಗೆ ಏರಿಕೆಯಾಗಿ ಜಲಾಶಯದ ಮಟ್ಟ 70.84 ಮೀಟರ್ ತಲುಪಿತ್ತು. ಹೀಗಾಗಿ ಒಟ್ಟಾರೆ 22,393 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
Recommended Video
ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಮಳೆ ಇನ್ನೂ ಮುಂದುವರಿದಿದೆ. ಈಗಾಗಲೇ ಜಲಾಶಯಗಳಿಂದ ನೀರು ಹೊರ ಬಿಟ್ಟಿರುವ ಕಾರಣ ಕದ್ರಾ ಕೆಳಭಾಗದ ಪ್ರದೇಶಗಳು ಜಲಾವೃತವಾಗುವ ಆತಂಕ ಎದುರಾಗಿದೆ. ಜಲಾಶಯ ಹಾಗೂ ಕಾಳಿ ನದಿ ದಂಡೆಯ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಕೆಪಿಸಿಎಲ್ ಅಧಿಕಾರಿಗಳು ಸೂಚಿಸಿದ್ದಾರೆ.