'ಆಜಾದಿ ಕಾ ಅಮೃತ್ ಮಹೋತ್ಸವ': ಅಂಜುದೀವ್ನಲ್ಲಿ ನೌಕಾಪಡೆಯಿಂದ ಧ್ವಜಾರೋಹಣ
ಕಾರವಾರ, ಆಗಸ್ಟ್ 13: ಈ ಬಾರಿಯ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು 'ಆಜಾದಿ ಕಾ ಅಮೃತ್ ಮಹೋತ್ಸವ' ಎಂದು ಆಚರಿಸಲು ಕರೆ ನೀಡಲಾಗಿದ್ದು, ಇದರ ಭಾಗವಾಗಿ ಭಾರತೀಯ ನೌಕಾಪಡೆಯು ದೇಶದ 100 ದ್ವೀಪಗಳಲ್ಲಿ ಧ್ವಜಾರೋಹಣ ನಡೆಸುತ್ತಿದೆ.
ಈ ಪೈಕಿ ಕಾರವಾರದಿಂದ ಅನತಿ ದೂರದಲ್ಲಿರುವ ಅಂಜುದೀವ್ ದ್ವೀಪದಲ್ಲಿ ಇಂದು ಶುಕ್ರವಾರ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ 'ಆಜಾದಿ ಕಾ ಅಮೃತ್ ಮಹೋತ್ಸವ'ಕ್ಕೆ ಚಾಲನೆ ನೀಡಲಾಯಿತು.
ಭಾರತೀಯ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳು ದೇಶಾದ್ಯಂತ 'ಅಜಾದಿ ಕಾ ಅಮೃತ್ ಮಹೋತ್ಸವ' ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ನವದೆಹಲಿಯ ಕೊಠಾರಿ ಕ್ರೀಡಾಂಗಣದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಈ ಕಾರ್ಯಕ್ರಮಗಳಿಗೆ ಶುಕ್ರವಾರ ಚಾಲನೆ ನೀಡಿದರು.
ರಾಜ್ಯದ 30 ಜಿಲ್ಲೆಗಳ 75 ಗ್ರಾಮದಲ್ಲಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ
ನೌಕಾಪಡೆಯ ಬ್ಯಾಂಡ್ನಿಂದ ರಾಷ್ಟ್ರಗೀತೆ
ಸಚಿವ ರಾಜನಾಥ ಸಿಂಗ್ ಕಾರ್ಯಕ್ರಮದ ಬಳಿಕ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಕಾರವಾರ ಬಳಿಯ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂಜುದೀವ್ ದ್ವೀಪವು ಭಾರತೀಯ ನೌಕಾಪಡೆಗೆ ರಕ್ಷಣೆಯ ದೃಷ್ಟಿಯಲ್ಲಿ ಪ್ರಮುಖವಾಗಿದೆ ಎಂದು ಹೇಳಿದರು. ಇದೇ ವೇಳೆ ನೌಕಾಪಡೆಯ ಬ್ಯಾಂಡ್ನಿಂದ ರಾಷ್ಟ್ರಗೀತೆ ನುಡಿಸಲಾಯಿತು. ಧ್ವಜ ವಂದನೆ ಸಲ್ಲಿಸಿದ ಬಳಿಕ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.
1961ರವರೆಗೂ ಪೋರ್ಚುಗೀಸರ ವಶದಲ್ಲಿತ್ತು
1947ರಲ್ಲಿ ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರವೂ 1.5 ಚದರ ಕಿಲೋ ಮೀಟರ್ಗಳಷ್ಟು ವಿಸ್ತಾರವಾದ ಅಂಜುದೀವ್ ದ್ವೀಪವು 1961ರವರೆಗೂ ಪೋರ್ಚುಗೀಸರ ವಶದಲ್ಲಿತ್ತು. ಪೋರ್ಚುಗೀಸರು ಈ ದ್ವೀಪವನ್ನು 1498ರಲ್ಲೇ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಕೋಟೆ ಮತ್ತು ಚರ್ಚ್ ಅನ್ನು ಅಂಜುದೀವ್ ದ್ವೀಪದಲ್ಲಿ ನಿರ್ಮಿಸಿದ ಪೋರ್ಚುಗೀಸರು, ಗೋವಾವನ್ನು ವಶಪಡಿಸಿಕೊಳ್ಳುವುದನ್ನು ಈ ದ್ವೀಪದಿಂದಲೇ ಪ್ರಾರಂಭಿಸಿದ್ದರು.
1961ರಲ್ಲಿ ಆಪರೇಷನ್ ವಿಜಯ್
ಅಂಜುದೀವ್ ದ್ವೀಪವನ್ನು ವಶಪಡಿಸಿಕೊಳ್ಳಲು ಭಾರತೀಯ ನೌಕಾಪಡೆಯು ಆಗಿನ ಲೆಫ್ಟಿನೆಂಟ್ ಕಮಾಂಡರ್ ಅರುಣ್ ಆಡಿಟ್ಟೊ ನೇತೃತ್ವದಲ್ಲಿ 'ಆಪರೇಷನ್ ವಿಜಯ್' ಅನ್ನು 18ನೇ ಡಿಸೆಂಬರ್ 1961ರಂದು ಕೈಗೊಂಡಿತು. ಈ ಸಂದರ್ಭದಲ್ಲಿ ಐಎನ್ಎಸ್ ಮೈಸೂರು ಮತ್ತು ಐಎನ್ಎಸ್ ತ್ರಿಶೂಲ್ ಯುದ್ಧ ನೌಕೆಗಳು ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಈ ವೇಳೆ ಅಂತಿಮವಾಗಿ ಏಳು ನಾವಿಕರು ಪ್ರಾಣ ತ್ಯಾಗವನ್ನು ಮಾಡಿದರೆ, ಇಬ್ಬರು ಅಧಿಕಾರಿಗಳು ಮತ್ತು ಹದಿನೇಳು ನಾವಿಕರು ಗಾಯಗೊಂಡರು. ನೌಕಾ ಕಾರ್ಯಪಡೆ ಅಂಜುದೀವ್ ದ್ವೀಪವನ್ನು ಕೊನೆಗೂ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದು ಭಾರತದಲ್ಲಿ ಪೋರ್ಚುಗೀಸರ ಆಳ್ವಿಕೆಯನ್ನು ಕೊನೆಗೊಳಿಸಿ, ಭಾರತ ವಿದೇಶಿಗರಿಂದ ವಶಪಡಿಸಿಕೊಂಡ ಕೊನೆಯ ದ್ವೀಪವಾಗಿ ಅಂಜುದೀವ್ ಉಳಿಯಿತು.
ಫ್ರೀಡಮ್ ಓಟಕ್ಕೆ ಚಾಲನೆ
ಇನ್ನು 'ಅಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ನೆಹರು ಯುವ ಕೇಂದ್ರಿಂದ ಫಿಟ್ ಇಂಡಿಯಾ ಪ್ರೀಡಮ್ ಓಟವನ್ನು ಉತ್ತರ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಸಭೆ, ಎನ್ಸಿಸಿ, ಎನ್ಎಸ್ಎಸ್, ಸ್ಕೌಟ್ ಮತ್ತು ಗೈಡ್ಸ್ಗಳ ಸಹಯೋಗದಲ್ಲಿ ಅಯೋಜಿಸಲಾಯಿತು. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರಗೀತೆ ಹಾಗೂ ಪ್ರತಿಜ್ಞೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು .
Recommended Video
ಉತ್ತರ ಕನ್ನಡ ಜಿಲ್ಲೆಯ 75 ಹಳ್ಳಿಗಳಲ್ಲಿ ಕಾರ್ಯಕ್ರಮ
ಓಟವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಪ್ರಾರಂಭವಾಗಿ, ಜೈಲ್ ಮಾರ್ಗದಿಂದ ಕಾಳಿ ನದಿ ಗಾರ್ಡನ್ವರೆಗೆ (5 ಕಿ.ಮೀ) ಹಾಗೂ ತಿರುಗಿ ಅದೇ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಲಾಯಿತು. ಯುವ ಜನರಿಗೆ ನೆಹರು ಯುವ ಕೇಂದ್ರದಿಂದ ಟಿಶರ್ಟ್, ಕ್ಯಾಪ್, ಪ್ರಮಾಣಪತ್ರ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯಾದ್ಯಂತ 75 ಹಳ್ಳಿಗಳಲ್ಲಿ ಆ.13ರಿಂದ ಅ.2ರವರೆಗೆ ನೆಹರು ಯುವ ಕೇಂದ್ರದ ಕಾರ್ಯಕರ್ತರಿಂದ ಅಯೋಜಿಸಲಾಗುತ್ತಿದೆ.