ಉತ್ತರ ಕನ್ನಡದಲ್ಲಿ ಮತದಾನಕ್ಕೆ ಅಡ್ಡಿಯಾದ ಗುಡುಗು ಸಹಿತ ಭಾರೀ ಮಳೆ
ಕಾರವಾರ, ಏಪ್ರಿಲ್ 23:ಲೋಕಸಭಾ ಚುನಾವಣೆಯ ಮತದಾನಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಳೆ ಅಡ್ಡಿಯಾಗಿದೆ.
ಮುಂಡಗೋಡದಲ್ಲಿ ಅರ್ಧ ಗಂಟೆಗಳ ಕಾಲ ಗಾಳಿ ಸಹಿತ ಮಳೆಯಾಗಿದ್ದು, ಇನ್ನೂ ತುಂತುರು ಹನಿ ಮುಂದುವರೆದಿದೆ. ಬಸ್ ನಿಲ್ದಾಣದ ಸಮೀಪ ಮರವೊಂದು ಉರುಳಿದೆ. ಮರದ ಕೆಳಗೆ ಕುಳಿತಿದ್ದ ಪಕ್ಷದ ಕಾರ್ಯಕರ್ತರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಕೆಲವು ಮತಗಟ್ಟೆಗಳ ಆವರಣದ ಒಳಗೆ ಗಟಾರದ ನೀರು ಹರಿದಿದೆ. ಸಣ್ಣ ಪ್ರಮಾಣದಲ್ಲಿ ಆಲಿಕಲ್ಲು ಸಹ ಬಿದ್ದಿವೆ.
ಕರ್ನಾಟಕದಲ್ಲಿ ಲೋಕಸಮರ LIVE:ಇದುವರೆಗೆ ಶಿವಮೊಗ್ಗದಲ್ಲೇ ಅತೀ ಹೆಚ್ಚು ಮತದಾನ
ಕೆಲವು ಮತಗಟ್ಟೆಯ ಸುತ್ತಮುತ್ತ ನೀರು ನಿಂತಿದೆ. ಹೀಗಾಗಿ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣ ಪ್ರದೇಶದ ಹಲವಾರು ಮತಗಟ್ಟೆಗಳು ಮತದಾರರಿಲ್ಲದೇ ಖಾಲಿ ಉಳಿದಿವೆ.
ಜೊಯಿಡಾ ತಾಲೂಕಿನ ಅಣಶಿ, ಕುಂಭಾರವಾಡಾ, ಜೊಯಿಡಾ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಅಣಶಿ, ನುಜ್ಜೀ, ಕುಂಭಾರವಾಡಾ, ಜೊಯಿಡಾ ಮತಗಟ್ಟೆಗೆ ಮಳೆಯಲಿ ನೆನೆದು ಬಂದೇ ಮತದಾರರು ಮತ ಚಲಾಯಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಧ್ಯಾಹ್ನ 2.10ಕ್ಕೆ ಪ್ರಾರಂಭವಾದ ಮಳೆ 3 ಗಂಟೆಯವರೆಗೂ ನಿಂತಿಲ್ಲ. ನೇರವಾಗಿ ಹೋಗಿ ಮತ ಹಾಕಿ ಬರುವ ನಿರೀಕ್ಷೆಯಲ್ಲಿದ್ದ ಬಹುತೇಕ ಗ್ರಾಮೀಣ ಮತದಾರರಿಗೆ ಗುಡುಗು ಸಹಿತವಾದ ಮಳೆ ನಿರಾಸೆ ತಂದಿದ್ದಂತೂ ಸುಳ್ಳಲ್ಲ. ಎಲ್ಲೆಲ್ಲಿ ಏನಾಗಿದೆ ಎಂಬ ಪೂರ್ತಿ ವಿವರ ಇಲ್ಲಿದೆ ನೋಡಿ...
ಕೈ ಕೊಟ್ಟ ವಿದ್ಯುತ್
ಶಿರಸಿ ನಗರದ ಮಾರಿಗುಡಿ ಹಿಂಭಾಗದ ನಾಸಿರ್ ಎಂಬುವವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿಹೋಗಿದ್ದು, ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಬಿದ್ದ ಕಾರಣ 3 ಗಂಟೆಗೂ ಅಧಿಕ ಕಾಲ ವಿದ್ಯುತ್ ಕೈಕೊಟ್ಟಿತ್ತು.
ಭೂಮಿ ತಂಪು ಮಾಡಿ ರೈತನ ಹೊಟ್ಟೆಗೆ ಬರೆ ಎಳೆದ ಆಲಿಕಲ್ಲು ಮಳೆ
ಧರೆಗುರುಳಿದ ಮರಗಳು
ಶಿರಸಿಯ ಅಶ್ವಿನ್ ಸರ್ಕಲ್, ಕಾಲೇಜ್ ರೋಡ್, ಹುಬ್ಬಳ್ಳಿ ರಸ್ತೆ, ಕೋಟೆಕೆರೆ, ಮರಾಠಿಕೊಪ್ಪ ಹಾಗೂ ಇತರೆಡೆ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳು ನದಿಯಂತಾಗಿತ್ತು.ಕೆಎಚ್ಬಿ ಕಾಲೋನಿ ಮತಗಟ್ಟೆ ಕೇಂದ್ರದ ಬಳಿ ಚಿಕ್ಕದಾದ ಎರಡು ಮರಗಳು ಧರೆಗುರುಳಿ ಆತಂಕಕ್ಕೆ ಕಾರಣವಾಗಿತ್ತು.
ಮರ ಬಿದ್ದು ವಾಹನ ಜಖಂ
ಭಾರೀ ಮಳೆಗೆ ಮರ ಬಿದ್ದ ಪರಿಣಾಮ ಚುನಾವಣಾ ಕರ್ತವ್ಯಕ್ಕೆ ಮೀಸಲಿದ್ದ ವಾಹನ ಜಖಂ ಆಗಿದೆ. ಶಿರಸಿಯ ಮಾಸ್ತಿಕಟ್ಟೆ ರಸ್ತೆಗೆ ಅಡ್ಡಲಾಗಿ ಒಂದು ತೆಂಗಿನ ಮರ ಮುರಿದು ಬಿದ್ದು, ಸಮಸ್ಯೆಯಾಗಿದೆ. ಹಾಗೆಯೇ ವಿದ್ಯಾ ನಗರ ಕ್ರಾಸ್ ಬಳಿ ಮರದ ದಿಮ್ಮಿಯೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.
ಮನೆಯೊಂದರ ಗೇಟ್ ಗೂ ಹಾನಿ
ಅಷ್ಟೇ ಅಲ್ಲ, ಮರಾಠಿಕೊಪ್ಪದಲ್ಲಿನ ಅಗ್ನಿಶಾಮಕ ವಸತಿ ಸಮುಚ್ಛಯದ ಬಳಿ ಮರ ಬಿದ್ದು, ಕಾಂಪೌಂಡ್ ಗೆ ಹಾನಿಯಾಗಿದೆ. ಇಂದಿರಾನಗರ ರಸ್ತೆಗೆ ಅಡ್ಡಲಾಗಿ ತೆಂಗಿನ ಮರವೊಂದು ಬಿದ್ದ ಪರಿಣಾಮ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಹಾಗೆಯೇ ಜಯನಗರದಲ್ಲಿ ಮನೆಯೊಂದರ ಗೇಟ್ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.