ಶಾಸಕ ವೇತನದಲ್ಲಿ ಅರ್ಧ ಬಡ ಜನತೆಗೆಂದು ಭರವಸೆ ಕೊಟ್ಟ ಎನ್ಸಿಪಿ
ಕಾರವಾರ ಮೇ 09 : ಕ್ಷೇತ್ರದ ಎನ್ಸಿಪಿ ಅಭ್ಯರ್ಥಿ, ಮಾಧವ ನಾಯಕ ಅವರು ರಾಜ್ಯ ಹೈಕೋರ್ಟ್ನ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಗಂಗಾವತಿ ಅವರ ನೇತೃತ್ವದಲ್ಲಿ ಆಶ್ವಾಸನೆಗಳ 'ಸ್ವಯಂ ಘೋಷಣಾ ಪತ್ರ' (ಅಫಿಡವಿಟ್) ವನ್ನು ಮಂಗಳವಾರ ಬಿಡುಗಡೆ ಮಾಡುವ ಮೂಲಕ ವಿಶೇಷತೆ ಮೆರೆದಿದ್ದಾರೆ.
ಸ್ವ- ಇಚ್ಛೆಯಿಂದ, ಸ್ವಪ್ರೇರಣೆಯಿಂದ ಕ್ಷೇತ್ರದ ಮತದಾರರಲ್ಲಿ ನನ್ನ ಪ್ರಾಮಾಣಿಕತೆ, ಪಾರದರ್ಶಕತೆ, ಸ್ವಚ್ಚಾರಿತ್ರ್ಯ ಜವಾಬ್ದಾರಿಯ ಬಗ್ಗೆ ಭರವಸೆ ಮೂಡಿಸಲು ಈ ಸ್ವಯಂ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದ್ದೇನೆ ಎಂದು ಮಾಧವ ನಾಯಕ ತಿಳಿಸಿದ್ದಾರೆ.
ಕಾರವಾರ ಕ್ಷೇತ್ರದ ಎನ್ ಸಿಪಿ ಅಭ್ಯರ್ಥಿ ಮಾಧವ ನಾಯಕ ಸಂದರ್ಶನ
ಅಫಿಡವಿಟ್ ನಲ್ಲಿ ಏನಿದೆ?
ನಾನು ಭ್ರಷ್ಟನಲ್ಲ. ಭ್ರಷ್ಟನಾಗುವುದಿಲ್ಲ ಹಾಗೂ ಮತದಾರರನ್ನು ಭ್ರಷ್ಟರನ್ನಾಗಿಸುವುದಿಲ್ಲ. ಪಕ್ಷಾಂತರಗೊಳ್ಳುವುದಿಲ್ಲ. ಅಕ್ರಮ ಆಸ್ತಿ ಹೊಂದುವುದಿಲ್ಲ. ಶಾಸನ ಸಭೆಗಳಲ್ಲಿ ಶೇ 90ಕ್ಕಿಂತ ಹೆಚ್ಚು ಹಾಜರಾತಿ ನೀಡುತ್ತೇನೆ.
ಕ್ಷೇತ್ರದ ಜನರ ಸಂಪರ್ಕದಲ್ಲಿರುತ್ತೇನೆ. ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳು ಅತ್ಯುತ್ತಮ ಗುಣಮಟ್ಟದ್ದಾಗಿರುತ್ತದೆ. ಅದು ಕಳಪೆಯಾಗಿದ್ದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ. ಪ್ರತಿಯೋಜನೆಯ ಅರ್ಹ ಫಲಾನುಭವಿಗಳಿಗೆ ಮಾತ್ರ ನೀಡುತ್ತೇನೆ ಎಂಬ ಆಶ್ವಾಸನೆಗಳನ್ನು ಅಫಿಡವಿಟ್ ನಲ್ಲಿ ನೀಡಲಾಗಿದೆ.
ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?
ಜತೆಗೆ ಈ ಘೋಷಣೆ ಉಲ್ಲಂಘನೆಯಾದಲ್ಲಿ ರಾಜೀನಾಮೆ ಹಾಗೂ ನನ್ನ ವಿರುದ್ಧದ ಕಾನೂನು ತನಿಖೆಗೆ ಸಿದ್ಧನಾಗಿರುತ್ತೇನೆ ಎಂದೂ ತಿಳಿಸಿದ್ದಾರೆ.
ಇದಕ್ಕೆ ಅರಳಿ ನಾಗರಾಜ ಗಂಗಾವತಿ, ವಕೀಲ ಎಸ್.ರವಿ ಬೇಳೂರಕರ್, ನಿವೃತ್ತ ಪ್ರಾಂಶುಪಾಲ ಎಂ.ಆರ್.ನಾಯ್ಕ, ನಿವೃತ್ತ ಪೊಲೀಸ್ ಅಧಿಕಾರಿ ಕಾಶಿನಾಥ ನಾಯ್ಕ ಸಾಕ್ಷಿ ಸಹಿ ಹಾಕಿದ್ದಾರೆ. ವಕೀಲ ಕೆ.ಟಿ.ಭೂತೆ ಈ ಅಫಿಡವಿಟ್ ಅನ್ನು ನೋಟರಿ ಮಾಡಿದ್ದಾರೆ.
ಕಾರವಾರ- ಅಂಕೋಲಾ ಕ್ಷೇತ್ರದ ಎನ್ಸಿಪಿ ಪ್ರಣಾಳಿಕೆಯಲ್ಲಿನ ಭರವಸೆಗಳು
1. ಪ್ರತಿ ತಿಂಗಳ ಶಾಸಕ ವೇತನದಲ್ಲಿ ಅರ್ಧ ಬಡಜನತೆಯ ಸಮಸ್ಯೆಗಳ ಪರಿಹಾರಕ್ಕೆ
2. ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ
3. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿ ಕೇಂದ್ರ
4. ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಚ್ಚಿನ ಶುಲ್ಕ ವಸೂಲಿಗೆ ಕಡಿವಾಣ
5. ವೃದ್ಧಾಶ್ರಮಗಳ ನಿರ್ಮಾಣ: ವೃದ್ಧರಿಗೆ ನೆಮ್ಮದಿಯ ಜೀವನಕ್ಕೆ ಅವಕಾಶ
6. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ಸಿಬ್ಬಂದಿ, ವೈದ್ಯರ ಸೇವೆಯ ಲಭ್ಯತೆ.
7. ಕ್ಷೇತ್ರದಲ್ಲಿ ಕಾನೂನು ಮಹಾವಿದ್ಯಾಲಯ ಸ್ಥಾಪನೆ
8. ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ: 10 ಸಾವಿರ ಯುವ ಜನತೆಗೆ ಉದ್ಯೋಗವಾಕಾಶ
9. ಕ್ಷೇತ್ರದಲ್ಲಿ ಇಎಸ್ ಐ ಆಸ್ಪತ್ರೆ ಸ್ಥಾಪನೆ
10. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ
11. ಕೆಎಚ್ ಬಿ ಫ್ಲಾಟ್ ಹಂಚಿಕೆ ಪ್ರಕರಣಗಳ ಇತ್ಯರ್ಥಪಡಿಸುವಿಕೆ: ಫಲಾನುಭವಿಗಳಿಗೆ ಫ್ಲಾಟ್ ಹಂಚಿಕೆ
12. ಮುಡಗೇರಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕಾದಿರಿಸಿರುವ 210 ಎಕರೆ ಜಮೀನಿನ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಸಮಸ್ಯೆಯನ್ನು ಇತ್ಯರ್ಥಪಡಿಸುವುದು.