ಇನ್ನೂ ಸಿಗದ ಅನುಮತಿ; ಕಾರವಾರದಲ್ಲಿ ಹೆಚ್ಚಿದ ಅಕ್ರಮ ಮರಳು ಗಣಿಗಾರಿಕೆ?
ಕಾರವಾರ, ಫೆಬ್ರವರಿ 14: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾಗಿರುವ ಮರಳು ತೆಗೆಯಲು ಜಿಲ್ಲೆಯಲ್ಲಿ ಇನ್ನೂ ಅನುಮತಿ ನೀಡದಿರುವುದರಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ದಂಧೆ ನಡೆಸುವವರ ಸಂಖ್ಯೆಯಲ್ಲಿ ಏರಿಕೆಯಾಗತೊಡಗಿದೆ.
ಕರಾವಳಿಯ ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿಗಳಲ್ಲಿ ಅಧಿಕೃತವಾಗಿ ಮರಳು ತೆಗೆಯಲು ಕರಾವಳಿ ನಿಯಂತ್ರಣ ವಲಯದ (ಸಿ.ಆರ್.ಝೆಡ್) ಅಧಿಕಾರಿಗಳು ನೀಡಿದ್ದ ಪರವಾನಗಿಯು ಅಕ್ಟೋಬರ್ನಲ್ಲೇ ಮುಗಿದಿದೆ. ಕಾಳಿ ನದಿ ಪ್ರದೇಶವು ಜೀವ ವೈವಿಧ್ಯದ ತಾಣ ಹಾಗೂ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆಯು ಇಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನಿರಾಕರಿಸಿತ್ತು.
ರಾಯಚೂರು; ಅಕ್ರಮ ಮರಳು ದಂಧೆಗೆ ಬರಿದಾಗುತ್ತಿದೆ ಕೃಷ್ಣಾ ನದಿಯೊಡಲು, ಲೂಟಿಕೋರರಿಗೆ ಜನಪ್ರತಿನಿಧಿಗಳ ಸಾಥ್
ಇದೀಗ ಜಿಲ್ಲೆಯ ಯಾವ ನದಿಯಲ್ಲೂ ಮರಳು ತೆಗೆಯಲು ಅನುಮತಿ ಇಲ್ಲದ ಕಾರಣ ಕರಾವಳಿಯ ನದಿಗಳಿಂದ ಅಕ್ರಮವಾಗಿ ಮರಳು ತೆಗೆಯುವ ಚಟುವಟಿಕೆ ಇದೀಗ ಹೆಚ್ಚಾಗತೊಡಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಕೊರತೆಯನ್ನೇ ಅವಕಾಶವನ್ನಾಗಿಸಿಕೊಂಡಿರುವ ದಂಧೆಕೋರರು, ಅನಧಿಕೃತವಾಗಿ ಹಾಗೂ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುವ ಕಾರ್ಯಕ್ಕೆ ಇಳಿದಿದ್ದಾರೆ.
ಅನಧಿಕೃತವಾಗಿ ಮರಳು ಮಾರಾಟ
ಕೆಲವು ತಿಂಗಳುಗಳ ಹಿಂದೆ ಉಂಟಾದ ಭಾರಿ ಪ್ರವಾಹದಿಂದ ಜಿಲ್ಲೆಯಲ್ಲಿ ಆಸ್ತಿಪಾಸ್ತಿ, ಸೇತುವೆಗಳು, ಕಟ್ಟಡಗಳಿಗೆ ಸಾಕಷ್ಟು ಹಾನಿಯಾಗಿದೆ. ಅವುಗಳ ದುರಸ್ತಿಗೆ, ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗೆ ಮರಳು ಅಗತ್ಯ ಹಾಗೂ ಅನಿವಾರ್ಯವಾಗಿದೆ. ಇದನ್ನೇ ಅವಕಾಶವನ್ನಾಗಿಸಿಕೊಂಡಿರುವ ದಂಧೆಕೋರರು, ಅನಧಿಕೃತವಾಗಿ ಹಾಗೂ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುವ ಕಾರ್ಯಕ್ಕೆ ಇಳಿದಿದ್ದಾರೆ.
ಹೊನ್ನಾವರ, ಕುಮಟಾ, ಅಂಕೋಲಾ ಭಾಗಗಳಲ್ಲಿ ಅಕ್ರಮವಾಗಿ ಮರಳು ತೆಗೆಯುವ ದಂಧೆ ಜೋರಾಗಿ ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೆಲವು ದಂಧೆಕೋರರು ಅಧಿಕಾರಿಗಳ ಕಣ್ತಪ್ಪಿಸಿ ಮರಳು ಗಣಿಗಾರಿಕೆ ನಡೆಸಿದರೆ, ಇನ್ನು ಕೆಲವರು ‘ಮಾಮೂಲಿ' ವ್ಯವಹಾರ ನಡೆಸುತ್ತಿದ್ದಾರೆ. ಈ ರೀತಿಯಾಗಿ ಅಕ್ರಮವಾಗಿ ತೆಗೆದ ಮರಳನ್ನು ಅಧಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆ ಮೂಲಕ ಹಣ ಮಾಡಿಕೊಳ್ಳುವ ‘ಅಕ್ರಮ' ವ್ಯವಹಾರಕ್ಕಿಳಿದಿದ್ದಾರೆ. ಈ ವ್ಯವಹಾರಕ್ಕೆ ಕೆಲವು ಪ್ರಭಾವಿಗಳ ‘ಬೆಂಗಾವಲು' ಕೂಡ ಇದೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕೂರುವಂತಾಗಿದೆ.ಮರಳು ಮಾರಾಟ ತಡೆಗೆ ತಂಡಗಳ ರಚನೆ
‘ಜಿಲ್ಲೆಯಲ್ಲಿ ಮರಳು ತೆಗೆಯಲು ಅನುಮತಿ ನೀಡದ ಕಾರಣ ಕೆಲವರು ಅಕ್ರಮವಾಗಿ ಮರಳು ತೆಗೆಯುವ ಹಾಗೂ ಸಾಗಾಟ ಮಾಡುವ ಚಟುವಟಿಕೆ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಂಥವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಸೂಚಿಸಿದ್ದೇನೆ. ಅಕ್ರಮವಾಗಿ ಮರಳು ತೆಗೆಯುವವರ ಮೇಲೆ ಕಣ್ಣಿಡಲು ತಂಡಗಳನ್ನು ರಚಿಸಿದ್ದು, ಈಗಾಗಲೇ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಳಿಯಾಳ ಭಾಗದಲ್ಲಂತೂ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ' ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್.
‘ಈ ಮೊದಲು ಅಕ್ರಮವಾಗಿ ಮರಳು ತೆಗೆದು, ಸಾಗಾಟ ಮಾಡಿದರೆ ಕೇವಲ ದಂಡ ವಿಧಿಸುತ್ತಿದ್ದರು. ಆದರೀಗ ಸಾಗಾಟ ವಾಹನವನ್ನು ಜಪ್ತಿ ಮಾಡಿ, ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಸೂಚಿಸಿದ್ದೇನೆ' ಎಂದ ಅವರು, ‘ಸಕ್ರಮವಾಗಿ ಮರಳು ತೆಗೆಯಲು ಅವಕಾಶ ನೀಡಿಲ್ಲವೆಂದು ಅಕ್ರಮವಾಗಿ ಮರಳು ತೆಗೆಯಲು ಯಾರೂ ಮುಂದಾಗಬಾರದು' ಎಂದೂ ಸೂಚಿಸಿದರು.
ಅನುಮತಿಗೆ ಯಾಕೆ ವಿಳಂಬ?
‘ಮರಳು ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣವೊಂದು ಕೋರ್ಟ್ನಲ್ಲಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಕೆಲವು ನಿರ್ದೇಶನಗಳನ್ನು ನೀಡಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಯಲದ (ಎಂಇಎಫ್) ಮಾರ್ಗಸೂಚಿಗಳನ್ನು ಪಾಲಿಸಬೇಕು. ಪರಿಸರ ಅಧ್ಯಯನವನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಸೂಚಿಸಿದ ಸಂಸ್ಥೆಗಳಿಂದ ಮಾಡಿಸಬೇಕು ಎಂದು ಕೋರ್ಟ್ ತಿಳಿಸಿದೆ. ಅದರ ಜೊತೆಗೆ, ರಾಜ್ಯ ಮಟ್ಟದ ಸಿಆರ್ ಝೆಡ್ ಸಮಿತಿಯ ಅನುಮತಿ ಪಡೆದುಕೊಳ್ಳಬೇಕಿದೆ ಎಂದು ಕೋರ್ಟ್ ಸೂಚಿಸಿದೆ' ಎಂದು ಡಾ.ಕೆ.ಹರೀಶಕುಮಾರ್ ತಿಳಿಸಿದರು.
ಅಕ್ರಮ ಮರಳುಗಾರಿಕೆ: ಮಂಗಳೂರು ಹೊರವಲಯದಲ್ಲಿ 12ಕ್ಕೂ ಅಧಿಕ ಬೋಟ್ ವಶ
ರಾಜ್ಯ ಮಟ್ಟದ ಸಿಆರ್ ಝೆಡ್ ನಿಂದ ಸಿಗಬೇಕಿದೆ ಅನುಮತಿ
‘ಹೀಗಾಗಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾರ್ಗಸೂಚಿಯಂತೆ ಸೂರತ್ಕಲ್ ನ ಎನ್ಐಟಿಕೆಯವರಿಗೆ ಜಿಲ್ಲೆಯ ನದಿಗಳಲ್ಲಿ ಮರಳು ದಿಣ್ಣೆಗಳನ್ನು ಗುರುತಿಸಲು ಅವಕಾಶ ನೀಡಿದ್ದೆವು. ಪರಿಸರ ಅಧ್ಯಯನವನ್ನು ಕೂಡ ಅವರಿಂದಲೇ ಮಾಡಿಸಿದ್ದೆವು. ಇವೆಲ್ಲವನ್ನು ಜಿಲ್ಲಾ ಮಟ್ಟದ ಸಿಆರ್ ಝೆಡ್ ಸಮಿತಿಯಿಂದ ರಾಜ್ಯ ಮಟ್ಟದ ಸಿಆರ್ ಝೆಡ್ ಸಮಿತಿಗೆ ಶಿಫಾರಸು ಕಳುಹಿಸಿ ಸುಮಾರು 28 ದಿನ ಆಗಿದೆ. ಆದರೆ, ಅಲ್ಲಿಂದ ಅನುಮತಿ ಸಿಕ್ಕಿಲ್ಲ' ಎಂದು ಅವರು ವಿವರಿಸಿದರು.
‘ರಾಜ್ಯ ಮಟ್ಟದ ಸಿಆರ್ ಝೆಡ್ ಸಮಿತಿಯಿಂದ ಅನುಮತಿ ಸಿಕ್ಕ ಕೂಡಲೇ ಪಾರಂಪರಿಕ ಮರಳುಗಾರಿಕೆ ಮಾಡುವವರಿಗೆ ಅನುಮತಿ ನೀಡುತ್ತೇವೆ' ಎಂದೂ ಅವರು ಈ ವೇಳೆ ಹೇಳಿದರು.